1. ಯಶೋಗಾಥೆ

ದಾಳಿಂಬೆ ಬೆಳೆಯಲ್ಲಿ ಡಾಲರ್ ಗಳಿಸಿದ ಬಿಸಿಲು ನಾಡಿನ ರೈತ

KJ Staff
KJ Staff
Ramesh

ದಾಳಿಂಬೆ (ಪುನಿಕಾ ಗ್ರಾನಟಮ್‍ಎಲ್.)ಕೃಷಿಯು ಲಾಭದಾಯಕವಾಗಿದ್ದು ಹೆಚ್ಚಿನ ಆದಾಯ ನೀಡುತ್ತದೆ.ವಿಶ್ವದ ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶಗಳ ಪ್ರಮುಖ ಹಣ್ಣಿನ ಬೆಳೆ.ಇದನ್ನು ಭಾರತ, ಇರಾನ್, ಚೀನಾ, ಟರ್ಕಿ, ಯುಎಸ್‍ಎ, ಸ್ಪೇನ್,  ಅಜರ್ಬೈಜಾನ್, ಅರ್ಮೇನಿಯಾ, ಅಫ್ಘಾನಿಸ್ತಾನ, ಉಜ್ಬೇಕಿಸ್ತಾನ್, ಪಾಕಿಸ್ತಾನ, ಟುನೀಶಿಯಾ, ಇಸ್ರೇಲ್, ಆಗ್ನೇಯ ಏಷ್ಯಾಯದ ಶುಷ್ಕ ಪ್ರದೇಶಗಳು, ಪೆನಿನ್ಸುಲರ್ ಮಲೇಷಿಯಾ, ಈಸ್ಟ್ ಇಂಡಿಯಾ ಮತ್ತು ಉಷ್ಣವಲಯದ ಆಫ್ರಿಕಾ ಇತ್ಯಾದಿ ದೇಶಗಳಲ್ಲಿ ಹೇರಳವಾಗಿ ಬೆಳೆಯಲಾಗುತ್ತಿದೆ. ಭಾರತ ದಾಳಿಂಬೆ ಉತ್ಪಾದನೆಯಲ್ಲಿ ವಿಶ್ವದ ಪ್ರಮುಖ ರಾಷ್ಟ್ರವಾಗಿದೆ.ಭಾರತದಲ್ಲಿ ಕಳೆದ ಎರಡು ದಶಕಗಳ ಅವಧಿಯಲ್ಲಿ ದಾಳಿಂಬೆ ವಿಸ್ತೀರ್ಣ, ಉತ್ಪಾದನೆ ಮತ್ತು ರಫ್ತುಗಳಲ್ಲಿ ಸ್ಥಿರವಾದ ಹೆಚ್ಚಳವಾಗುತ್ತಿದೆ.

ದೇಶದಲ್ಲಿ ಮಹಾರಾಷ್ಟ್ರ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಮುಂಚುಣಿಯಲ್ಲಿದೆ ನಂತರದ ಸ್ಥಾನದಲ್ಲಿ  ಕರ್ನಾಟಕ, ಗುಜರಾತ್ ಮತ್ತು ಆಂಧ್ರಪ್ರದೇಶ ರಾಜ್ಯಗಳಿವೆ.ದಾಳಿಂಬೆ ವಿಜಯಪುರ ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆ.ಇತ್ತಿಚಿಗೆ ಜಿಲ್ಲೆಯಲ್ಲಿ ದಾಳಿಂಬೆ ಕ್ಷೇತ್ರ ಹೆಚ್ಚಳವಾಗಿದೆ.2018-19 ನೇ ಸಾಲಿನಲ್ಲಿ 4708 ಹೇ.ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, 48055 ಮೆಟ್ರಿಕ್‍ ಟನ್‍ನಷ್ಟು ಉತ್ಪಾದನೆ ಇದೆ.ಈ ಬೆಳೆಯು ಹವಾಗುಣದ ಕಠಿಣ ಪರಿಸ್ಥಿತಿಯನ್ನು ತಡೆದುಕೊಳ್ಳುವ ಬೆಳೆಯಾಗಿದ್ದು, ಸಲ್ಪ ಪ್ರಮಾಣದಲ್ಲಿ ಬರನಿರೋಧಕ ಶಕ್ತಿ ಕೂಡ ಹೊಂದಿದೆ. ಹೈಟೆಕ್-ತೋಟಗಾರಿಕಾ ಅಭ್ಯಾಸಗಳಿಗೆ ಉತ್ತಮ ಪ್ರತಿಕ್ರಿಯೆ, ಹೆಚ್ಚಿನ ಇಳುವರಿ, ಶುಷ್ಕ ಪ್ರದೇಶಗಳ ಅನೇಕ ಬೆಳೆಗಳಿಗಿಂತ ಹೆಚ್ಚಿನ ಆದಾಯ, ಔಷಧಿಯ ಗುಣಗಳು, ರಫ್ತು ಮತ್ತು ಸ್ವದೇಶಿ ಮಾರುಕಟ್ಟೆಯಲ್ಲಿ, ತಾಜಾ ಹಣ್ಣು ಮತ್ತು ಸಂಸ್ಕರಿಸಿದ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಇತ್ಯಾದಿ ಗುಣಲಕ್ಷಣಗಳಿಂದ ದಾಳಿಂಬೆಯ ಪ್ರಾಮುಖ್ಯತೆ ಹೆಚ್ಚಾಗುತ್ತಿದೆ ಹಾಗೂ ಉಷ್ಣವಲಯದ ಮತ್ತು ಉಷ್ಣವಲಯ ಪ್ರದೇಶಗಳ ಜನಪ್ರಿಯ ಹಣ್ಣನ್ನಾಗಿ ಮಾಡಿದೆ.

ಆದರೆ, ದಾಳಿಂಬೆಯನ್ನು ಕಾಡುವ ದುಂಡಾಣು ಅಂಗಮಾರಿ ರೋಗ ಎಷ್ಟೋ ರೈತರು ದಾಳಿಂಬೆ ಬೆಳೆಯನ್ನು ಬಿಟ್ಟ್ಟು ಬೇರೆ ಬೆಳೆಗಳತ್ತ ಮುಖ ಮಾಡುವಂತೆ ಮಾಡಿದೆ.ಇಂತಹ ಪರಿಸ್ಥಿತಿಯಲ್ಲಿ ಇಲ್ಲೊಬ್ಬ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೆರೂಗಿ ಗ್ರಾಮದ 28 ವರ್ಷ ವಯಸ್ಸಿನ ಯುವ ಉತ್ಸಾಹಿ ರಮೇಶ ಗುರುಬಾಳ ಶರಣಪ್ಪ ಮರಡಿ. ಇವರು ದಾಳಿಂಬೆಯಲ್ಲಿ ವೈಜ್ಞಾನಿಕ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡು ಲಕ್ಷಾಂತರ ರೂಪಾಯಿ ಆದಾಯವನ್ನು ಗಳಿಸುತ್ತಿದ್ದಾರೆ.ಇವರು 15 ಎಕರೆ ನೀರಾವರಿ ಜಮೀನು ಹೊಂದಿದ್ದು, ಇವರಿಗೆ ಬೋರವೆಲ್, ಕೃಷಿ ಹೊಂಡ ನೀರಿನ ಮೂಲವಾಗಿವೆ. ಅವಿಭಕ್ತ ಕುಟುಂಬದಲ್ಲಿ ತಂದೆ, ತಾಯಿ, ಅಣ್ಣ, ತಮ್ಮ, ಅತ್ತಿಗೆ, ಹೆಂಡತಿ, ಮಕ್ಕಳೊಂದಿಗೆ ವಾಸಿಸುತ್ತಿದ್ದು ಇವರೆಲ್ಲರೂ ಕೃಷಿಯಲ್ಲಿ ಇವರಿಗೆ ಆಸರೆಯಾಗಿದ್ದಾರೆ.

ದಾಳಿಂಬೆ ಬೆಳೆ ಬೆಳೆಯಲು ಪ್ರೇರಣೆ:

ಶ್ರೀ. ರಮೇಶ ಗುರುಬಾಳ ಶರಣಪ್ಪ ಮರಡಿ ಇವರು ತಮ್ಮ ಪೂರ್ವಜರ ಕಾಲದಿಂದತಮ್ಮ ಹೊಲದಲ್ಲಿ ಸಾಂಪ್ರದಾಯಿಕ ಬೆಳೆಗಳಾದ ಜೋಳ, ತೊಗರಿ, ಶೇಂಗಾ, ಸಜ್ಜೆ, ಗೋಧಿ,ಕಡಲೆ ಇತ್ಯಾದಿಗಳನ್ನು ಮಾತ್ರ ಬೆಳೆಯುತ್ತಿದ್ದರು.ಈ ಬೆಳೆಗಳು ಇವರಿಗೆ ಅಷ್ಟೊಂದು ಲಾಭದಾಯಕ ಅನಿಸಲಿಲ್ಲ. ಏನಾದರೂ ಮಾಡಿ ಹೆಚ್ಚು ಆದಾಯ ಗಳಿಸಬೇಕೆಂದು ನಿರ್ಧರಿಸಿ, ಇವರು ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕೆಂದು ಬಯಸಿದಾಗ ಅವರಿಗೆ ಹೊಳೆದಿದ್ದು, ಏಕೆ ದಾಳಿಂಬೆ ಬೇಸಾಯ ಮಾಡಬಾರದು ಎಂದು ಯೋಚಿಸಿ, ತದನಂತರ 2012ನೇ ಇಸವಿಯಲಿ ನಾಲ್ಕು ಎಕರೆ ಪ್ರದೇಶದಲ್ಲಿ ದಾಳಿಂಬೆ ಬೇಸಾಯ ಪ್ರಾರಂಭಿಸಿದರು. 2016 ನೇ ಇಸವಿಯಲ್ಲಿ 6 ಎಕರೆ ಪ್ರದೇಶದಲ್ಲಿ ದಾಳಿಂಬೆ ಕ್ಷೇತ್ರ ವಿಸ್ತರಿಸಿ,ಒಟ್ಟು 10 ಎಕರೆ ಪ್ರದೇಶದಲ್ಲಿ 2700 ಗಿಡಗಳನ್ನು ನಾಟಿ ಮಾಡಿದ್ದಾರೆ.ಆರಂಭದಲ್ಲಿ ಇವರು 14x 8 ಅಡಿಅಂತರದಲ್ಲಿ ನಾಟಿ ಮಾಡಿದ್ದರು, ನಂತರ ಇವರು 15 x10 ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ.

ಶ್ರೀಯುತರು ಪಿ.ಯು.ಸಿ.ನಂತರತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.ಹೊಸ ಹೊಸ ತಂತ್ರಜ್ಞಾನಗಳನ್ನು ದಾಳಿಂಬೆ ಬೇಸಾಯದಲ್ಲಿ ಅಳವಡಿಸಿಕೊಳ್ಳಲು ಉತ್ಸುಕರಾಗಿದ್ದು, ಟಿ.ವಿ. ರೇಡಿಯೊ, ದಿನ ಪತ್ರಿಕೆ, ಇತ್ಯಾದಿಗಳಿಂದ ತಮ್ಮಜ್ಞಾನವನ್ನು ವೃದ್ದಿಸಿಕೊಳ್ಳುವ ಜೊತೆಗೆ ಕೃಷಿ ವಿಜ್ಞಾನ ಕೇಂದ್ರ ಇಂಡಿಗೆ  ನಿಯಮಿತವಾಗಿ  ಭೇಟಿ ನೀಡಿ, ತರಬೇತಿಯಲ್ಲಿ ಭಾಗವಹಿಸುವಿಕೆ ಮತ್ತು  ವಿಜ್ಞಾನಿ (ತೋಟಗಾರಿಕೆ) ಗಳೊಂದಿಗೆ ಸಂಪರ್ಕದಲ್ಲಿದ್ದು ಕಾಲ ಕಾಲಕ್ಕೆ ದಾಳಿಂಬೆಯನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಕೃಷಿ ವಿಜ್ಞಾನ ಕೇಂದ್ರ, ಇಂಡಿ ವತಿಯಿಂದ ನೀಡಲಾಗುವ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ತಮ್ಮ ಹೊಲದಲ್ಲಿ ಅಳವಡಿಸಿಕೊಂಡು ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಶ್ರೀ. ರಮೇಶ ಇವರು ದಾಳಿಂಬೆ ಬೆಳೆಯಲ್ಲಿ ಅಳವಡಿಸಿದ ವೈಜ್ಞಾನಿಕ ತಂತ್ರಜ್ಞಾನಗಳು:

  • ದಾಳಿಂಬೆಯಲ್ಲಿ ವರ್ಷಕ್ಕೆಒಂದೇ ಬೆಳೆಯನ್ನು ತೆಗೆದುಕೊಳ್ಳುವುದು,ಜೂನ್

--ಜುಲೈ (ಮೃಗ ಬಹಾರ) ತಿಂಗಳುಗಳಲ್ಲಿ ಚಾಟನಿ ಮಾಡುವುದು ಮತ್ತುಕಟಾವಾದ ನಂತರ ಗಿಡಗಳಿಗೆ ಸಂಪೂರ್ಣವಾದ ವಿಶ್ರಾಂತಿಯನ್ನು ಒದಗಿಸುವುದು.

  • ಎಲೆಗಳನ್ನು ಉದುರಿಸಲು 1.5 ಮಿ.ಲೀ. ಇಥ್ರೇಲ್ ಮತ್ತು 0:52:34 5 ಗ್ರಾಂ. ಗೊಬ್ಬರವನ್ನು ಸಿಂಪಡಿಸುತ್ತಾರೆ.
  • ವಿಶ್ರಾಂತಿ ಸಮಯದಲ್ಲಿ 1 ಬಾರಿ ಲಘು ಪೋಷಕಾಂಶಗಳÀನ್ನು ಮತ್ತು 2 ಬಾರಿ 6 ಬಿ. ಎ. ಯನ್ನು 35 ದಿನಗಳ ಅಂತರದಲ್ಲಿ ಸಿಂಪಡಿಸುತ್ತಾರೆ ಮತ್ತು 1 ಬಾರಿ 6 ಬಿ. ಎ. (1 ಗ್ರಾಂ./100 ಲೀ) ಅನ್ನು ಹೂಗಳು ಬರುವ ಹಂತದಲ್ಲಿ ಸಿಂಪಡಿಸುತ್ತಾರೆ.
  • ಚಾಟನಿ ಮಾಡಿ ಮೊದಲ ಬಾರಿ ನೀರುಕೊಡುವ ಹಂತದಲ್ಲಿ ಬೇವಿನ ಹಿಂಡಿ (300-400 ಗ್ರಾಂ) + ಸುಪರ್ ಫಾಸ್ಪೇಟ್ (200-300 ಗ್ರಾಂ) ಅನ್ನು ಪ್ರತಿಗಿಡಕ್ಕೆಕೊಡುತ್ತಾರೆ.
  • ಕೇವಲ ರಾಸಯನಿಕಗೊಬ್ಬರ ಮತ್ತು ಕೀಟನಾಶಗಳ ಮೇಲೆ ಅವಲಿಂಬಿತರಾಗದೇ, ಸಾವಯವ ಪದ್ದತಿಯನ್ನುಕೂಡ ಅಳವಡಿಸಿಕೊಂಡಿದ್ದಾರೆ. ಜೀವಾಮೃತವನ್ನು ಸಿಂಪರಣೆ ಮತ್ತು ಡ್ರಿಪ್ ಮುಖಾಂತರ ಎಕರೆಗೆ200-300ಲೀ ಬಿಡುತ್ತಾರೆ (ಚಾಟನಿ ಆದ 61-180ದಿನಗಳವರೆಗೆ).
  • ಪ್ರತಿ ಗಿಡಕ್ಕೆ 25-30 ಕೆ.ಜಿ. ತಿಪ್ಪೆಗೊಬ್ಬರವನ್ನು ಹಾಕುತ್ತಾರೆ. ಮಣ್ಣು ಪರೀಕ್ಷೆಯಆಧಾರದ ಮೇಲೆ ವಿಜ್ಞಾನಿಗಳ ಶಿಫಾರಸ್ಸಿನಂತೆ ರಾಸಯನಿಕ ಗೊಬ್ಬರವನ್ನು ಒದಗಿಸುವುದು. ಚಾಟನಿ ಮಾಡಿದ 10-15 ದಿನಗಳ ನಂತರ ಎಕರೆಗೆ ಅಮೋನಿಯಂ ಸಲ್ಪೇಟ್ 25 ಕೆ.ಜಿ. ಮತ್ತು 10 ಕೆ.ಜಿ. ಸತುವಿನ ಸಲ್ಫೇಟ್‍ಅನ್ನು ಹಿಂಡಿ ಜೊತೆಗೆ ಸೇರಿಸಿ ತಿಳಿ (sಟuಡಿಥಿ) ರೂಪದಲ್ಲಿ ಪ್ರತಿಗಿಡಕ್ಕೆ ಅರ್ಧ ಲೀ. ಕೊಡುತ್ತಾರೆ.
  • ಚಾಟನಿ ಆದ 35-45 ದಿನಗಳಲ್ಲಿ 12:61:0 (5 ಕೆ.ಜಿ./ಎ) ಗೊಬ್ಬರವನ್ನುಕೊಡುತ್ತಾರೆ.
  • ಹೂ ಉದುರುವುದನ್ನು ತಡೆಗಟ್ಟಲು ಬೋರಾನ 1 ಗ್ರಾಂ. + ಕ್ಯಾಲ್ಸಿಯಂ 1 ಗ್ರಾಂ. ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸುತ್ತಾರೆ. ಹಣ್ಣಿನಗಾತ್ರವನ್ನು ಹೆಚ್ಚಿಸಲು 0:52:34, ಮ್ಯುರೇಟಆಫ್ ಪೊಟ್ಯಾಷ್, ಕ್ಯಾಲ್ಸಿಯಂ ನೈಟ್ರೆಟ್, ಮೆಗ್ನೆಷಿಯಂ ಸಲ್ಪೇಟ್ ಮುಂತಾದ ಗೊಬ್ಬರಗಳನ್ನು ಡ್ರಿಪ್ ಮುಖಾಂತರ ನೀಡುತ್ತಿದ್ದಾರೆ.
  • 61-120 ದಿನಗಳಲ್ಲಿ 0:52:34 ಗೊಬ್ಬರವನ್ನು 5 ಕೆ.ಜಿ. ಎಕರೆಗೆ ವಾರಕ್ಕೊಮ್ಮೆಕೊಡುತ್ತಾರೆ.
  • ದಾಳಿಂಬೆ ಹಣ್ಣಿನತೊಗಟೆಗೆಉತ್ತಮ ಬಣ್ಣ ಬರುಲು 0:52:34 (5 ಗ್ರಾಂ./ಲೀ) ಗೊಬ್ಬರವನ್ನು 50 ದಿನದಿಂದ 145 ದಿನಗಳವರೆಗೆ ವಾರಕ್ಕೊಮ್ಮೆ ಸಿಂಪಡಿಸುತ್ತಾರೆ ಮತ್ತು 13:0:45 (5 ಗ್ರಾಂ/ಲೀ) ಗೊಬ್ಬರವನ್ನು ಕಟಾವು ಮಾಡುವುದಕ್ಕಿಂತ 40-45 ದಿನಗಳ ಮುಂಚಿತವಾಗಿ 10 ದಿನಕ್ಕೊಮ್ಮೆ 2 ಬಾರಿ ಸಿಂಪಡಿಸುತ್ತಾರೆ ಹಾಗೂ 0:0:50 (5ಗ್ರಾಂ/ಲೀ)ಗೊಬ್ಬರವನ್ನು 2 ಬಾರಿಸಿಂಪಡಿಸುತ್ತಾರೆ.
  • ರೋಗಗಳ ನಿರ್ವಹಣೆಗೆ ಅರ್ಕಾ ಮೈಕ್ರೊಬಿಯಲ್‍ಕನ ಸೋರಷಿಯಾ (ಎ.ಎಂ.ಸಿ.) 5 ಕೆ.ಜಿ. ಪ್ರತಿ ಎಕರೆಗೆ ಮಣ್ಣಿನಲ್ಲಿ ಸೇರಿಸುತ್ತಾರೆ. ಟ್ರೈಕೊಡರ್ಮಾ, ಸುಡೊಮೊನಾಸ್ ಮತ್ತು ಬ್ಯಾಸಿಲಸ್ (5 ಮಿ.ಲೀ./ಲೀ.) ನೀರಿಗೆ ಬೆರೆಸಿ ಸಿಂಪಡಿಸುತ್ತಾರೆ. ಇವರುಜಂತುರೋಗದ ನಿರ್ವಹಣೆಗಾಗಿ ದಾಳಿಂಬೆ ಗಿಡಗಳ ಸಾಲಿನ ಮಧ್ಯದಲ್ಲಿಚೆಂಡು ಹೂಗಳನ್ನು ಬೆಳೆಯುತ್ತಿದ್ದಾರೆ.

ದಾಳಿಂಬೆ ಬೆಳೆಯ ಇಳುವರಿ, ಖರ್ಚು ಮತ್ತುಆದಾಯದ ವಿವರ:

ಗಿಡಗಳ ಸಂಖ್ಯೆ

ನಾಟಿ ಮಾಡಿದ ಪ್ರದೇಶ

ಇಳುವರಿ

ಮಾರುಕಟ್ಟೆದರ

ಒಟ್ಟು ಆದಾಯ (ರೂ.)

 

ಬೇಸಾಯಖರ್ಚು

2700

10 ಎಕರೆ

150 ಟನ್

(40000/ಟನ್)

60,00,000

20,00,000

ನಿವ್ವಳ ಲಾಭ

40,00,000

ಶ್ರೀ. ರಮೇಶ ಗುರುಬಾಳ ಶರಣಪ್ಪ ಮರಡಿ ಇವರುತಮ್ಮ ಹೊಲದಲ್ಲಿ ಲಭ್ಯವಿರುವಷ್ಟು ನೀರನ್ನು ಬಳಸಿಕೊಂಡು ದಾಳಿಂಬೆ ಬೆಳೆ ಬೆಳೆದು ಭರ್ಜರಿ ಲಾಭ ಗಳಿಸಿ ಆರ್ಥಿಕ ಸದೃಡರಾಗಿದ್ದಾರೆ. ಶ್ರಿಯುತರು ಕೃಷಿ ವಿಶ್ವವಿದ್ಯಾಲಯ ಧಾರವಾಡ ವತಿಯಿಂದ ನೀಡಲಾಗುವ ಶ್ರೇಷ್ಠ ಯುವ ಕೃಷಿಕ ಮತ್ತು ವಿ.ಕೆ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಇವರ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ.ಇವರು ತೋಟಗಾರಿಕೆ ಬೆಳೆ ಬೆಳೆದು ಕೃಷಿ ಯಾವ ಉದ್ಯೋಗಕ್ಕಿಂತ ಕಡಿಮೆ ಇಲ್ಲ ಎಂದು ಸಾಧಿಸಿ ತೋರಿಸಿದ್ದಾರೆ.ಇತರರು ಸಹ ದಾಳಿಂಬೆ ಬೆಳೆಯಲು ಪ್ರೇರಣೆಯಾಗಿದ್ದಾರೆ.

ಲೇಖನ: ಹೀನಾ ಎಂ.ಎಸ್.,ಆರ್.ಬಿ. ನೆಗಳೂರ, ಮಜೀದ್, ಜಿ., ಎಸ್.ಎಸ್. ಅಂಜುಮ್ ಮತ್ತು ಸವಿತಾ ಬಿ, ಐ.ಸಿ.ಎ.ಆರ್.- ಕೃಷಿ ವಿಜ್ಞಾನಕೇಂದ್ರ, ಇಂಡಿ (ವಿಜುಪುರ-II), ಸ್ಟೇಷನ ರಸ್ತೆ, ಇಂಡಿ - 586 209 ಮೊಬೈಲ್ ಸಂಖ್ಯೆ: 7019095720

Published On: 03 February 2021, 03:46 PM English Summary: Success story of Ramesh

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.