1. ಸುದ್ದಿಗಳು

ಕಾಡಾನೆ ದಾಳಿಗೆ ರೈತ ಸಾವು: ಅರಣ್ಯ ಇಲಾಖೆ ಎದುರು ಶವವಿಟ್ಟು ಪ್ರತಿಭಟನೆ

ಕಾಡಾನೆ ದಾಳಿಗೆ ರೈತ ಸಾವು: ಅರಣ್ಯ ಇಲಾಖೆ ಎದುರು ಶವವಿಟ್ಟು ಪ್ರತಿಭಟನೆ

ಮೂಡಿಗೆರೆ : ಕಾಡಾನೆ ದಾಳಿಗೆ ತುತ್ತಾಗಿ ಮಂಗಳವಾರ ಸಂಜೆ ಮೃತಪಟ್ಟ ತಾಲೂಕಿನ ಹಳ್ಳಬೈಲ್‌ ಗ್ರಾಮದ ರೈತ ಸುನೀಲ್‌ (40) ಅವರ ಮೃತದೇಹವನ್ನು ಬುಧವಾರ ಎಂಜಿಎಂ ಆಸ್ಪತ್ರೆಯಿಂದ ಅರಣ್ಯ ಇಲಾಖೆ ಕಚೇರಿವರೆಗೆ ಬೃಹತ್‌ ಮೆರವಣಿಗೆ ನಡೆಸುವ ಮೂಲಕ ವಿವಿಧ ಸಂಘ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷ ಗಳ ಮುಖಂಡರು ಪ್ರತಿಭಟನೆ ನಡೆಸಿದರು.

ಉದ್ರಿಕ್ತಗೊಂಡಿದ್ದ ಪ್ರತಿಭಟನಾಕಾರರು ಮೆರವಣಿಗೆಯುದ್ದಕ್ಕೂ ಆರ್‌ಎಫ್‌ಒ ಪ್ರಹ್ಲಾದ್‌ ಹಾಗೂ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ಲಯನ್ಸ್‌ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ 173ರ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅರಣ್ಯ ಇಲಾಖೆ ಕಚೇರಿ ಎದುರು ಮೃತ ದೇಹವನ್ನು ತೆರೆದ ವಾಹನದಲ್ಲಿಟ್ಟು, ಪ್ರತಿಭಟನೆ ನಡೆಸಿದರು.

ಬೈರಾಪುರ, ಊರುಬಗೆ, ಮೂಲರಹಳ್ಳಿ, ಹಳ್ಳಿಬೈಲು ಮತ್ತಿತರ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯ ಇಲಾಖೆ ಹಿಡಿದು ಸಾಗಿಸಬೇಕು. ಹಿಂದೆ ಕಾಡಾನೆಗಳನ್ನು ನಿಯಂತ್ರಿಸಬೇಕೆಂದು ಅರಣ್ಯಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲೆಂದು ಬಂದಿದ್ದ ವೇಳೆ ಮೃತಪಟ್ಟ ಸುನೀಲ್‌ ಸಹಿತ 13 ಮಂದಿ ರೈತರ ವಿರುದ್ಧ ಅರಣ್ಯಾಧಿಕಾರಿ ಪ್ರಹ್ಲಾದ್‌ ವಿನಾಕಾರಣ ಮೊಕದ್ದಮೆ ದಾಖಲಿಸಿದ್ದಾರೆ. ಕಾಡಾನೆ ನಿಯಂತ್ರಿಸಲು ವಿಫಲರಾಗಿದ್ದಾರೆ. ಇಂತಹ ಅರಣ್ಯ ಅಧಿಕಾರಿ ನಮಗೆ ಅಗತ್ಯವಿಲ್ಲ. ಆವರನ್ನು ಕೂಡಲೇ ಅಮಾನತುಪಡಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಸರಕಾರದ ನಿರ್ಲಕ್ಷ್ಯದಿಂದಾಗಿ ಕಾಡಾನೆಗಳು ತಾಲೂಕಿನಾದ್ಯಂತ ಕಾಫಿ ತೋಟ ಮತ್ತು ಭತ್ತದ ಗದ್ದೆಗಳನ್ನು ಸಂಪೂರ್ಣ ನಾಶ ಮಾಡುತ್ತಿವೆ. ಅನೇಕ ರೈತರನ್ನು ಬಲಿ ಪಡೆದಿದೆ. ಕಾಡಾನೆ ನಿಯಂತ್ರಣಕ್ಕೆ ಸರಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು. ದಾಳಿಗೆ ತುತ್ತಾಗಿ ಮೃತಪಟ್ಟ ಸುನೀಲ್‌ ಅವರ ಇಬ್ಬರ ಮಕ್ಕಳ ಶಿಕ್ಷ ಣದ ಖರ್ಚನ್ನು ಸರಕಾರವೇ ನೋಡಿಕೊಳ್ಳಬೇಕು. ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ನೌಕರಿ ನೀಡಬೇಕೆಂದು ಒತ್ತಾಯಿಸಿದರು.

ಎಂಎಲ್‌ಸಿ ಎಂ.ಕೆ.ಪ್ರಾಣೇಶ್‌ ಮಾತನಾಡಿ, ಕಾಡಾನೆ ಬೀಡು ಬಿಟ್ಟಿರುವ ಪ್ರದೇಶದಲ್ಲಿ ಅರಣ್ಯ ಇಲಾಖೆ ನಿರ್ಮಿಸಿರುವ ಐಬೆಕ್ಸ್‌ ಬೇಲಿ ಕಳಪೆ ಗುಣಮಟ್ಟದ್ದಾಗಿದ್ದರಿಂದ ಬೇಲಿ ದಾಟಿ ಕಾಡಾನೆಗಳು ಲಗ್ಗೆ ಇಡುತ್ತಿವೆ. ಹಾಗಾಗಿ, ರೈತರು ಗದ್ದೆಯನ್ನು ಪಾಳು ಬಿಡುತ್ತಿದ್ದಾರೆ. ಇದಕ್ಕೆ ಪರಿಹಾರ ನೀಡಬೇಕು. ಕಾಡಾನೆ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್‌ಗೆಂದು ಕೇಂದ್ರ ಸರಕಾರ 550 ಕೋಟಿ ರೂ. ಅನುದಾನ ನೀಡಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕು. 13 ರೈತರ ಮೇಲೆ ಅರಣ್ಯ ಅಧಿಕಾರಿ ದಾಖಲಿಸಿರುವ ಸುಳ್ಳು ಮೊಕದ್ದಮೆ ಕೈಬಿಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಚ್‌.ಎಚ್‌.ದೇವರಾಜು, ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌ ಕುಮಾರ್‌, ಬಿಜೆಪಿ ಮುಖಂಡರಾದ ಕೆಂಜಿಗೆ ಕೇಶವ, ವಿ.ಕೆ.ಶಿವೇಗೌಡ, ಸಿಪಿಐ ಮುಖಂಡರಾದ ಬಿ.ಕೆ.ಲಕ್ಷ ್ಮಣ್‌ಕುಮಾರ್‌, ದೇವವೃಂದ ರವಿ, ಜಿ.ಪಂ. ಸದಸ್ಯೆ ಸುಧಾ ಯೋಗೇಶ್‌, ತಾ.ಪಂ. ಸದಸ್ಯರಾದ ಸುಂದರ್‌ ಕುಮಾರ್‌, ದೇವರಾಜು, ಭಾರತೀ ರವೀಂದ್ರ, ಬಿಎಸ್‌ಪಿ ಮುಖಂಡ ಮರಗುಂದ ಪ್ರಸನ್ನ, ನೇಪಾ ಆದಿತ್ಯ ಬಾಳೆಗದ್ದೆ ರವೀಂದ್ರ, ಎಸ್‌.ಎ.ವಿಜೇಂದ್ರ, ಶಬ್ಬೀರ್‌ ಅಹಮ್ಮದ್‌ ಬೇಗ್‌, ಎಂ.ಸಿ.ನಾಗೇಶ್‌, ರೈತ ಸಂಘದ ಲಕ್ಷ ್ಮಣ್‌ಗೌಡ, ಬಿಳ್ಳೂರು ನಾಗೇಶ್‌, ಭರತ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮುಂಜಾಗ್ರತ ಕ್ರಮವಾಗಿ ಹೆಚ್ಚುವರಿ ಎಸ್‌ಪಿ ಅಣ್ಣಪ್ಪ ನಾಯಕ್‌, ಡಿವೈಎಸ್‌ಪಿ ಚಂದ್ರಶೇಖರ್‌, ವೃತ್ತ ನಿರೀಕ್ಷ ಕ ಜಗದೀಶ್‌, ಪಿಎಸ್‌ಐ ಕೆ.ಟಿ.ರಮೇಶ್‌, ಗೋಣಿಬೀಡು ಪಿಎಸ್‌ಐ ರಾಕೇಶ್‌ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು.

ಹಾಸನ ಮತ್ತು ಸಕಲೇಶಪುರ ಭಾಗದಿಂದ ಕಾಡಾನೆಗಳ ಹಿಂಡು ತಾಲೂಕಿಗೆ ಹಿಂದಿನಿಂದಲೂ ಲಗ್ಗೆಯಿಡುತ್ತಿದೆ. ಮೂಲರಹಳ್ಳಿ ಭಾಗದಲ್ಲಿ 3, ಕುಂದೂರಿನಲ್ಲಿ 6 ಕಾಡಾನೆಗಳು ಬೀಡುಬಿಟ್ಟಿವೆ. ಕಾಡಾನೆ ನಿಯಂತ್ರಣಕ್ಕೆ ಐಬೆಕ್ಸ್‌ ಬೇಲಿ ನಿರ್ಮಿಸಲಾಗಿದೆ. ಅದು ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ. ಹಾಗಾಗಿ, ಅವಘಡ ಸಂಭವಿಸಿದೆ. ಇನ್ನು ಮುಂದೆ ಕಾಡಾನೆ ನಿಯಂತ್ರಿಸಲು ಅರಣ್ಯ ಇಲಾಖೆ ತುಕಡಿಗಳನ್ನು ಆಯಾ ಪ್ರದೇಶಗಳಲ್ಲಿ ನಿಯೋಜಿಸಲಾಗುವುದು. ಮೃತ ಸುನೀಲ್‌ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಮತ್ತು ಸುನೀಲ್‌ ಪತ್ನಿಗೆ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನವನ್ನು ಇಲಾಖೆಯಿಂದ ಒದಗಿಸಲಾಗುವುದು. -ಎಚ್‌.ಆರ್‌.ಕುಮಾರ್‌, ಉಪ ಅರಣ್ಯ ಸಂರಕ್ಷ ಣಾಧಿಕಾರಿ, ಚಿಕ್ಕಮಗಳೂರು.

Published On: 25 October 2018, 01:25 PM English Summary: Farmer death to wild elephant attack: protest against forest department

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.