1. ಸುದ್ದಿಗಳು

ಪರಪ್ಪನ ಅಗ್ರಹಾರ ಸೇರಿದ ಕಂಪ್ಲಿ ಶಾಸಕ ಗಣೇಶ್

ಬೆಂಗಳೂರು, ಫೆ.21: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಆರೋಪ ಪ್ರಕರಣ ಸಂಬಂಧ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ರಾಮನಗರದ ಸಿಜೆಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ಗುಜರಾತಿನ ಸೋಮನಾಥಪುರದಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿ ಗಣೇಶ್‌ಅನ್ನು ಗುರುವಾರ ಬೆಳಗ್ಗೆ 11:15ಕ್ಕೆ ಇಲ್ಲಿನ ಬಿಡದಿ ಪೊಲೀಸ್ ಠಾಣೆಗೆ ಕರತರಲಾಯಿತು. ಬಳಿಕ, ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಮುಖ್ಯ ಜ್ಯುಡಿಷಿಯಲ್ ನ್ಯಾಯಾಧೀಶೆ ಅನಿತಾ ಅವರ ಮುಂದೆ ಹಾಜರುಪಡಿಸಲಾಯಿತು. ತದನಂತರ, ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಸಂಜೆ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ಪೊಲೀಸರು ಗಣೇಶ್ ಅನ್ನು ಕರೆತಂದು, ವೈದ್ಯಕೀಯ ತಪಾಸಣೆಗೊಳಪಡಿಸಿ, ವಿಶೇಷ ಕೊಠಡಿಗೆ ಕಳುಹಿಸಿದರು ಎಂದು ತಿಳಿದುಬಂದಿದೆ.

ನ್ಯಾಯಾಲಯದಲ್ಲಿ ಗಣೇಶ್, ನನಗೆ ಉಸಿರಾಟದ ತೊಂದರೆ ಇದೆ. ಚಿಕಿತ್ಸೆ ಅಗತ್ಯವಿದ್ದು, ಜಾಮೀನು ನೀಡಬೇಕು ಎಂದು ಕೋರಿದರು. ಇದೇ ವೇಳೆ, ಗಣೇಶ ಪರ ವಕೀಲರು ಧ್ವನಿಗೂಡಿಸಿ, 2016ರಿಂದ ಶಾಸಕರು ಅಸ್ತಮ ತೊಂದರೆಯಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯದ ಉದ್ದೇಶದಿಂದ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.

ವಾದವನ್ನು ಆಲಿಸಿದ ನ್ಯಾಯಾಧೀಶರು ಆರೋಪಿ ಗಣೇಶ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು.

ಎರಡು ಗಂಟೆ ಸತತ ವಿಚಾರಣೆ
ರೆಸಾರ್ಟ್‌ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಎರಡು ಗಂಟೆಗಳ ಕಾಲ ಕಂಪ್ಲಿ ಶಾಸಕ ಗಣೇಶ್ ಅವರ ವಿಚಾರಣೆ ನಡೆಸಲಾಯಿತು. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ನ್ಯಾಯಾಂಗ ಬಂಧನದಲ್ಲಿರುವ ಕಂಪ್ಲಿ ಶಾಸಕ ಗಣೇಶ್ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು ತಕ್ಷಣವೇ ಜೈಲಾಸ್ಪತ್ರೆಗೆ ದಾಖಲಿಸಲಾಗಿದೆ.
Published On: 21 February 2019, 09:07 PM English Summary: ಪರಪ್ಪನ ಅಗ್ರಹಾರ ಸೇರಿದ ಕಂಪ್ಲಿ ಶಾಸಕ ಗಣೇಶ್

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.