1. ಸುದ್ದಿಗಳು

ಮಣ್ಣು ತಪಾಸಣೆ ಮಾಡಿ ನಿಮ್ಮ ಜಮೀನಿನ ಆರೋಗ್ಯ ತಿಳಿಯಿರಿ

soil test

ಮನುಷ್ಯನ ಬದುಕು ನಿಂತಿರುವುದೇ ಮಣ್ಣಿನ ಮೇಲೆ, ಪ್ರತಿ ಮನುಕುಲದ ಆಹಾರದ ಅಗತ್ಯವನ್ನು ನೀಗಿಸುತ್ತಿರುವುದು ಮಣ್ಣು. ಮಣ್ಣು ಜೀವ ವೈವಿಧ್ಯದಲ್ಲಿ ವಹಿಸಿದ ಮಹತ್ತರ ಪಾತ್ರವನ್ನು ಗಮನಿಸಿ, ನಾವೆಲ್ಲರೂ ಸಹ ಮಣ್ಣಿನ ಸಂರಕ್ಷನೆಯತ್ತ ಹೆಜ್ಜೆ ಹಾಕಬೇಕು. ಸಸ್ಯಗಳ ಸರ್ವತೋಮುಖ ಬೆಳವಣಿಗೆಗಾಗಿ ಸಮತೋಲನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒದಗಿಸುವುದು ಅತಿ ಅವಶ್ಯಕವಾಗಿದೆ.

ಮುಖ್ಯ ಸಸ್ಯಪೋಷಕಾಂಶಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವುದರ ಜೊತೆಗೆ ಲಘು ಪೋಷಕಾಂಶಗಳನ್ನು ಕೂಡ ಬೆಳೆಗಳಿಗೆ ಪೂರೈಸುವದು ಅತೀ ಮಹತ್ವದ್ದಾಗಿದೆ.

ಭೂಮಿಯ ಮೇಲೆ ನಿರಂತರವಾಗಿ ಹಲವಾರು ಬೆಳೆಗಳನ್ನು ಬೆಳೆಯುವುದರಿಂದ ಬೆಳೆಯ ಅವಧಿಯಕಾಲದಲ್ಲಿ ಕೈಗೊಂಡ ಕೃಷಿ ಚಟುವಟಿಕೆಗಳಿಂದ ಭೂಮಿಯ ಮೇಲ್ಪದರು ಗಟ್ಟಿಯಾಗಿ ಭೂಮಿಯ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಕ್ರಿಯೆಗಳಲ್ಲಿ ವ್ಯತ್ಯಾಸವಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಆದ್ದರಿಂದ ಭೂಮಿಯ ತಯಾರಿಕೆಯ ಮೊದಲ ಹೆಜ್ಜೆಯೇ ಮಣ್ಣು ಪರೀಕ್ಷೆ. ಮಾಗಿ ಉಳುಮೆಯನ್ನು ಮಾಡುವುದಕ್ಕಿಂತ ಮೊದಲು ಅಂದರೆ, ಬೇಸಿಗೆಯ ಪೈರುಕಟಾವಾದ ಮೇಲೆ ಮಣ್ಣು ಮಾದರಿಯನ್ನು ತೆಗೆದು ಪರೀಕ್ಷೆ ಮಾಡಿಸುವುದು ತುಂಬಾ ಸೂಕ್ತ. ಆದ್ದರಿಂದ ಪ್ರತಿಯೊಬ್ಬ ರೈತರು ಮಣ್ಣು ಪರೀಕ್ಷೆಯನ್ನು ಮಾಡಿಸಲೇಬೇಕು.

ಮಣ್ಣು ಪರೀಕ್ಷೆಯ ಉದ್ಧೇಶಗಳು

  1. ಭೂಮಿಯ ಭೌತಿಕ ಮತ್ತು ರಾಸಾಯನಿಕ ಗುಣಧರ್ಮಗಳನ್ನು ತಿಳಿಯುವುದು.
  2. ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಭೂಮಿಯು ಯೋಗ್ಯವಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿಯುವುದು.
  3. ಭೂ ಫಲವತ್ತತೆಯನ್ನು ತಿಳಿಯುವದರ ಜೊತೆಗೆ ಗೊಬ್ಬರಗಳನ್ನು ಶಿಫಾರಸ್ಸು ಮಾಡುವುದು.
  4. ತೊಂದರೆದಾಯಕ ಭೂಮಿಗಳನ್ನು ತಿಳಿದು ಅವುಗಳಿಗೆ ಸೂಕ್ತ ಸಲಹೆಗಳನ್ನು ನೀಡುವುದು.

ಮಣ್ಣಿನ ಮಾದರಿ ತೆಗೆಯುವ ವಿಧಾನ

  1. ಮಣ್ಣಿನ ಮಾದರಿ ತೆಗೆಯುವದಕ್ಕಿಂತ ಮುಂಚೆ, ಒಂದು ಬಾರಿ ಹೊಲದತುಂಬ ತಿರುಗಾಡಿ ಭೂಮಿಯ ಸಾಮಾನ್ಯ ಗುಣಧರ್ಮಗಳನ್ನು ತಿಳಿದುಕೊಳ್ಳಬೇಕು.
  2. ಭೂಮಿಯ ಇಳಿಜಾರು, ಭೂಮಿಯ ಬಣ್ಣ, ಸವಳು, ಜವಳು, ಇತ್ಯಾದಿಗಳನ್ನು ಗಣನೆಗೆತೆಗೆದುಕೊಂಡು ಅದೇ ತೆರನಾಗಿ ಇರುವ ಭೂ-ಭಾಗಗಳನ್ನು ಬೇರೆ ಬೇರೆ ಉಪಭಾಗಗಳಾಗಿ ವಿಂಗಡಿಸಬೇಕು.
  3. ಈ ಉಪಭಾಗಗಳಿಂದ ಬೇರೆ ಬೇರೆಯಾಗಿ ಮಣ್ಣಿನ ಮಾದರಿಗಳನ್ನು ತೆಗೆಯಬೇಕು.
  4. ಈ ಪ್ರತಿಯೊಂದು ಉಪಭಾಗಗಳಲ್ಲಿ ಸುಮಾರು 8-10 ಸ್ಥಳಗಳನ್ನು ಗುರುತಿಸಿ, ಈ ಎಲ್ಲ ಸ್ಥಳಗಳಲ್ಲಿ ಗಿ ಆಕಾರದಲ್ಲಿ 15-20 ಅಥವಾ 30 ಸೆಂ.ಮೀ. ವರೆಗೆ ನೆಲವನ್ನು ಅಗೆದು ಅದರಲ್ಲಿರುವ ಮಣ್ಣನ್ನು ತೆಗೆದು ಚೆಲ್ಲಬೇಕು. ನಂತರ ಈ ಗಿ ಆಕಾರದ ಒಂದು ಬದಿ ಯಿಂದ ಮೇಲಿ ನಿಂದ ಕೆಳಗಿನವರೆಗೆ ಬರುವ ಹಾಗೆ ಸುಮಾರು 1 ಇಂಚು ದಪ್ಪವಾದ ಮಣ್ಣನ್ನು ತೆಗೆದು ಸಂಗ್ರಹಿಸಬೇಕು.
  1. ಇದೇ ರೀತಿ ಎಲ್ಲ 8-10 ಸ್ಥಳಗಳಿಂದ ಮಣ್ಣನ್ನು ತೆಗೆದು ಒಂದು ಅಗಲವಾದ ಪ್ಲಾಸ್ಟಿಕ್ ಹಾಳೆಯ ಮೇಲೆ ಹಾಕಬೇಕು. ಅದರಲ್ಲಿರುವ ಎಲ್ಲ ಕಸ-ಕಡ್ಡಿ ಹರಳುಗಳನ್ನು ಆರಿಸಿ ತೆಗೆಯಬೇಕು. ನಂತರ ಈ ಎಲ್ಲ ಮಣ್ಣನ್ನು ಚೆನ್ನಾಗಿ ಮಿಶ್ರಣ ಮಾಡಿ ಹಾಳೆಯ ಮೇಲೆ ಹರಡಬೇಕು. ಇದರಲ್ಲಿಅಡ್ಡಲಾಗಿ (+) ಎರಡು ಗೆರೆಗಳನ್ನು ಹಾಕಿ ಸಮನಾದ ನಾಲ್ಕು ಭಾಗಗಳನ್ನು ಮಾಡಬೇಕು.
  2. ಎದುರು ಬದರು ಇರುವ ಎರಡು ಭಾಗಗಳನ್ನು ಚಲ್ಲಬೇಕು ಹಾಗೂ ಉಳಿದ ಎರಡು ಭಾಗಗಳನ್ನು ಮತ್ತೆ ಚನ್ನಾಗಿ ಮಿಶ್ರಣ ಮಾಡಿ ಮೇಲೆ ತಿಳಿಸಿದ ಹಾಗೆ ಮಾಡಬೇಕು. ಇದೇ ರೀತಿ ಮಾಡುತ್ತಾ ಹೋಗಿ ಸುಮಾರು 0.5 ರಿಂದ 1.0 ಕಿ. ಗ್ರಾಂ. ಮಣ್ಣು ಉಳಿಯುವವರೆಗೆ ಮಾಡಬೇಕು.
  3. ಈ ಮಣ್ಣನ್ನು ಪಾಲಿಥೀನಚೀಲ ಅಥವಾ ಹೊಸ ಬಟ್ಟೆಯ ಚೀಲದಲ್ಲಿ ಹಾಕಬೇಕು. ಮಣ್ಣನ್ನು ಶೇಕರಿ ಸಿಡಲು ಬೀಜ, ಗೊಬ್ಬರ ಚೀಲ ಇತ್ಯಾದಿಗಳನ್ನು ಉಪಯೋಗಿಸಬಾರದು.
  4. ಮಣ್ಣಿನ ಮಾದರಿ ಶೇಖರಣೆಯಾದ ನಂತರ, ಲೇಬಲ್ ಮಾಡಬೇಕು. ಇದರಲ್ಲಿ ರೈತನ ಹೆಸರು, ವಿಳಾಸ, ಸರ್ವೆ ನಂಬರ್, ದಿನಾಂಕ ಈ ಮೊದಲು ಬೆಳೆದ ಬೆಳೆ, ಗೊಬ್ಬರ ಹಾಕಿದ ವಿವರ ಇತ್ಯಾದಿಗಳನ್ನು ಬರೆದು ಚೀಲದ ಒಳಗಡೆ ಹಾಕಿ ಪ್ಯಾಕ್ ಮಾಡಬೇಕು. ಮತ್ತು ಇನ್ನೊಂದನ್ನು ಮೇಲೆ ಕಟ್ಟಿ, ಮಣ್ಣು ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಿಕೊಡಬೇಕು.

ಮಣ್ಣು ಪರೀಕ್ಷೆಯ ಉಪಯೋಗಗಳು

  1. ಮಣ್ಣು ಪರೀಕ್ಷೆಯಿಂದ ಮಣ್ಣಿನ ಭೌತಿಕ, ರಾಸಾಯನಿಕ ಗುಣಧರ್ಮಗಳನ್ನು ಹಾಗೂ ಫಲವತ್ತತ್ತೆಯನ್ನು ತಿಳಿಯಬಹುದು.
  2. ಮಣ್ಣಿನ ಫಲವತ್ತತೆ ಹಾಗೂ ಗುಣಧರ್ಮಕ್ಕನುಸಾರವಾಗಿ ಲಾಭದಾಯಕ ಬೆಳೆಯನ್ನು ಆಯ್ಕೆ ಮಾಡಿ ಬೆಳೆದು ಕೃಷಿಯಿಂದ ಲಾಭ ಗಳಿಸಬಹುದು.
  3. ಅನಾವಶ್ಯಕ ಅಥವಾ ಹೆಚ್ಚಿನ ಪ್ರಮಾಣದಗೊಬ್ಬರ ಬಳಕೆ ತಪ್ಪಿಸಿ ಖರ್ಚುಕಡಿಮೆ ಮಾಡಬಹುದು.
  4. ಮಣ್ಣು ಪರೀಕ್ಷೆ ಆಧಾರಿತ ಪೋಷಕಾಂಶಗಳ ಬಳಕೆ ಯಿಂದ ಅಧಿಕ ಇಳುವರಿ ಪಡೆಯಬಹುದು ಹಾಗೂ ಭೂಮಿಯ ಫಲವತ್ತತೆಯನ್ನು ಬಹು ವರ್ಷಗಳವರೆಗೆ ಕಾಪಾಡಿಕೊಳ್ಳಬಹುದು ಮತ್ತು ಫಲವತ್ತತೆಯ ಅಸಮ ತೋಲನವನ್ನು ನಿವಾರಿಸಬಹುದು.

ಲೇಖನ: ಡಾ. ಶಿಲ್ಪಾ ವಿ. ಚೋಗಟಾಪೂರ, Subject Matter Specialist (Agrometeorology) ಕೃಷಿ ವಿಜ್ಞಾನಕೇಂದ್ರ ,ಕವಡಿಮಟ್ಟಿ, ತಾ: ಸುರಪುರ   ಜಿ: ಯಾದಗಿರ

Published On: 26 May 2021, 10:19 PM English Summary: test your soil and Check Soil Health

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.