1. ಸುದ್ದಿಗಳು

ಅತಿವೃಷ್ಠಿ ಹಾನಿ: ವಾರದಲ್ಲಿ ರೈತರ ಖಾತೆಗೆ 29.58 ಕೋಟಿ ರೂ. ಜಮಾ -ಬಿ.ಸಿ.ಪಾಟೀಲ

B. C Patil

ಅತಿವೃಷ್ಠಿಯಿಂದ ಬೆಳೆ ಹಾನಿಗೊಳಗಾಗಿ ಕಂಗಾಲಾಗಿರುವ ಕಲಬುರಗಿ ಜಿಲ್ಲೆಯ 41 ಸಾವಿರ ರೈತರಿಗೆ ಬರುವ ಒಂದು ವಾರದಲ್ಲಿ 29.58 ಕೋಟಿ ರೂ. ಹಣ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ರವಿವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಕೃಷಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪ್ರಮುಖವಾಗಿ ತೊಗರಿ, ಹೆಸರು, ಉದ್ದು, ಸೋಯಾಬಿನ್ ಸೇರಿದಂತೆ ಅತಿವೃಷ್ಠಿಯಿಂದ ವಿವಿಧ ಬೆಳೆಗಳ ಒಟ್ಟಾರೆ 442626 ಹೆಕ್ಟೇರ್ ಪ್ರದೇಶ ಹಾನಿಗೊಳಗಾಗಿದೆ. ಇದರಲ್ಲಿ ಈಗಾಗಲೆ ಪರಿಹಾರಕ್ಕೆ ನೋಂದಣಿಯಾದ 150409 ರೈತರ ಪೈಕಿ 139158 ರೈತರಿಗೆ 6 ಹಂತಗಳಲ್ಲಿ 97.07 ಕೋಟಿ ರೂ. ಪರಿಹಾರ ನೀಡಲಾಗಿದೆ. ಇದರ ಮುಂದುವರೆದ ಭಾಗವಾಗಿ 7ನೇ ಹಂತದಲ್ಲಿ 41 ಸಾವಿರ ರೈತರಿಗೆ 29.58 ಕೋಟಿ ರೂ. ಪರಿಹಾರ ವಾರದಲ್ಲಿ ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 14 ಮಣ್ಣು ಪರೀಕ್ಷಾ ಕೇಂದ್ರಗಳಿದ್ದು, ಮಣ್ಣು ಪರೀಕ್ಷೆ ಮಾಡಿಕೊಂಡು ಬೆಳೆ ಬೆಳೆಯಲು ರೈತರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಮನುಷ್ಯ ಹುಷಾರಿಲ್ಲದ ಸಮಯದಲ್ಲಿ ವೈದ್ಯನನ್ನು ಕಂಡಾಗ ರಕ್ತ ಪರೀಕ್ಷೆ ಮಾಡಿದ ನಂತರವೆ ರೋಗದ ಮೂಲ ಕಂಡುಹಿಡಿದು ಹೇಗೆ ಚಿಕಿತ್ಸೆ ನೀಡುತ್ತಾರೋ ಅದೇ ರೀತಿಯಲ್ಲಿ ಮಣ್ಣು ಪರೀಕ್ಷೆ ಮಾಡಿ ಯಾವ ಬೆಳೆ ಬೆಳೆದರೆ ನಿಮಗೆ ಅನುಕೂಲ ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡಿ ಎಂದು ಸಚಿವ ಬಿ.ಸಿ.ಪಾಟೀಲ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಗಳಿಗೆ 108 ಮಾದರಿಯಲ್ಲಿ ಕೃಷಿ ರೈತನ ಸಮಸ್ಯೆಗಳ ತಕ್ಷಣಕ್ಕೆ ಸ್ಪಂದಿಸಲೆಂದೆ ರೈತ ಸಂಜೀವಿನಿ ವಾಹನಗಳನ್ನು ನೀಡಲಾಗಿದ್ದು, ಇದರ ಸದ್ಬಳಕ್ಕೆ ಮಾಡಿಕೊಳ್ಳಬೇಕು. ಪ್ರತಿ ರೈತನ ಕರೆಗೆ ಸ್ಪಂದಿಸಬೇಕು. ಇದು ರೈತಪರ ಸರ್ಕಾರವಾಗಿದ್ದು, ರೈತ ಸ್ನೇಹಿಯಾಗಿ ಆಡಳಿತ ನೀಡಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ವರ್ಷ ಬೆಳೆ ಸಮೀಕ್ಷೆಯನ್ನು ರೈತರಿಂದಲೆ ಮಾಡಿಸಲಾಗುತ್ತದೆ. ಇವರಿಗೆ ನೆರವು ನೀಡಲು 10 ತಿಂಗಳ ಸೇವೆಗೆ ರಾಜ್ಯಾದ್ಯಂತ 6000 ಕೃಷಿಯಲ್ಲಿ ಡಿಪ್ಲೋಮಾ ಪಡೆದ ಯುವಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಈ ಸಂಬಂಧ ಈಗಾಗಲೆ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಒಪ್ಪಿಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನದ ಯೋಜನೆಯಡಿ ಜಿಲ್ಲೆಯಲ್ಲಿ ಹಸು, ಕುರಿ ಖರೀದಿಗೆ ಪ್ರೋತ್ಸಾಹಧನ ನೀಡಬೇಕು. ರೈತರು ಖರೀದಿ ಮಾಡಿದ ನಂತರವೇ ಹಣ ಪಾವತಿಸಬೇಕು ಎಂದರು.

ನಕಲಿ ಬೀಜ, ಗೊಬ್ಬರ ಹಾವಳಿಗೆ ಕಡಿವಾಣ ಹಾಕಿ: ಮುಂದೆ ಏಪ್ರಿಲ್-ಮೇ ನಲ್ಲಿ ಬರುವ ಮುಂಗಾರು ಹಂಗಾಮಿಗೆ ಈಗಲೆ ಸಿದ್ಧತೆ ಮಾಡಿಕೊಳ್ಳಬೇಕು. ರೈತರಿಗೆ ಮಾರಕವಾಗಿರುವ ಮತ್ತು ಅವರ ಜೀವ ಹಿಂಡುವ ನಕಲಿ ಬೀಜ, ಗೊಬ್ಬರ, ಔಷಧಿ ಮಾರಾಟಕ್ಕೆ ಕಡಿವಾಣ ಹಾಕಬೇಕು. ರಾಜ್ಯದಲ್ಲಿ ನಕಲಿ ಕೀಟನಾಶಕ ಮಾರಾಟದ ಸರಾಸರಿ ನೋಡಿದಾಗ ಜಿಲ್ಲೆಯಲ್ಲಿ ಇದರ ಪ್ರಮಾಣ ಶೇ.45 ರಷ್ಟಿದ್ದು, ನಕಲಿ ಮಾರಾಟದ ಜಾಲಕ್ಕೆ ಇತಿಶ್ರೀ ಹಾಡಬೇಕು. ನಕಲಿ ಮಾರಾಟ ಪ್ರಕರಣಗಳಲ್ಲಿ ಮುಲಾಜಿಲ್ಲದೆ ಮಾರಾಟಗಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಸಚಿವರು ಕಳೆದ ವರ್ಷ 17 ಕೋಟಿ ರೂ. ಮೊತ್ತದ ನಕಲಿ ಬೀಜಗಳನ್ನು ಇಲಾಖೆಯ ಜಾಗೃತ ದಳ ಪತ್ತೆ ಹಚ್ಚಿದೆ ಎಂಬುದನ್ನು ಯಾರು ಮರೆಯದಿರಿ ಎಂದರು.

Published On: 22 February 2021, 10:12 AM English Summary: Rs 29.58 crore deposit in farmers' account in a week-B.C. Patil

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.