News

ರೈತರ ಜೀವನಾಡಿ ಎತ್ತುಗಳನ್ನು ಪೂಜಿಸುವ ಹಬ್ಬ “ಮಣ್ಣೆತ್ತಿನ ಅಮವಾಸೆ”; ಏನಿದರ ವಿಶೇಷತೆ ಗೊತ್ತೆ?

28 June, 2022 11:34 AM IST By: Kalmesh T
ಮಣ್ಣೆತ್ತಿನ ಅಮಾವಾಸ್ಯೆ

ಮಣ್ಣೆತ್ತಿನ ಅಮಾವಾಸ್ಯೆ ರೈತರ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಭ್ರಮ ಪಡುವ ಹಬ್ಬವಾಗಿದೆ. ಇಲ್ಲಿದೆ ಈ ಕುರಿತು ಸಂಪೂರ್ಣ ಮಾಹಿತಿ

ಇದನ್ನೂ ಓದಿರಿ: ಶ್ರಮಜೀವಿ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ “ಕಾರಹುಣ್ಣಿಮೆ”..! ಏನಿದರ ವಿಶೇಷತೆ ?

ರೈತ ನಮ್ಮೆಲ್ಲರ ಅನ್ನದಾತ. ಈ ಅನ್ನದಾತನ ಹೆಗಲಿಗೆ ಹೆಗಲು ಕೊಟ್ಟು ನಮ್ಮೆಲ್ಲರನ್ನು ಸಲಹುವ ಜೀವಿಗಳು ಎತ್ತುಗಳು. ಇಂತಹ ಎತ್ತುಗಳನ್ನು ಸ್ಮರಿಸುವ ಸಲುವಾಗಿ ಆಚರಿಸಲಾಗುವ ಹಬ್ಬವೇ “ಮಣ್ಣೆತ್ತಿನ ಅಮಾವಾಸ್ಯೆ.

ರೈತಾಪಿ ವರ್ಗಕ್ಕೆ ಕಾರ ಹುಣ್ಣಿವೆಯ ನಂತರ ಬರುವ ಮಣ್ಣೆತ್ತಿನ ಅಮಾವಾಸ್ಯೆ ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಭ್ರಮ ಪಡುವ ಹಬ್ಬವಾಗಿದೆ.

ಏನಿದು ಮಣ್ಣೆತ್ತಿನ ಅಮಾವಾಸ್ಯೆ:

ಮಣ್ಣೆತ್ತಿನ ಅಮಾವಾಸ್ಯೆ ದಿನದಂದು ರೈತರು ಕೃಷಿ ಕಾರ್ಯಗಳಿಗೆ ಬಿಡುವು ನೀಡಿ, ಎತ್ತುಗಳಿಗೂ ವಿಶ್ರಾಂತಿ ನೀಡುತ್ತಾರೆ.  ರೈತರು ಹೊಲ, ಕೆರೆಗಳಿಗೆ ಹೋಗಿ ಜಿಗುಟಿನಿಂದ ಕೂಡಿದ ಮಣ್ಣನ್ನು ತಂದು ಎತ್ತುಗಳನ್ನು ತಯಾರಿಸುತ್ತಾರೆ.

ಗ್ರಾಮಾಂತರ ಪ್ರದೇಶಗಳಲ್ಲಿ ಊರ ಕುಂಬಾರ ಮನೆಗಳಿಂದಲೂ ತಯಾರಿಸಿದ ಜೋಡಿ ಎತ್ತುಗಳನ್ನು ಜೋಳ, ಹಣಕೊಟ್ಟು ಖರೀದಿಸಿ ತರುವ ವಾಡಿಕೆಯೂ ಇದೆ. ಕುಂಬಾರರು ಎತ್ತುಗಳೊಂದಿಗೆ ಒಂದಿಷ್ಟು ಹಸಿ ಮಣ್ಣನ್ನೂ ಕೊಡುತ್ತಾರೆ.

ಜೂನ್ 21 ವರ್ಷದ ಅತಿ ದೊಡ್ಡ ಹಗಲು ಇರುವ ದಿನ..! ಇದರ ವಿಶೇಷತೆ ಏನು ಗೊತ್ತೆ? 

ಮಣ್ಣೆತ್ತಿನ ಅಮವಾಸ್ಯೆ

ಮಳೆ-ಬೆಳೆ ಚೆನ್ನಾಗಿ ಆಗಲೆಂದು ಮನದುಂಬಿ ಬೇಡಿಕೊಳ್ಳುತ್ತಾರೆ..

ಈ ಹಸಿ ಮಣ್ಣಲ್ಲಿ ದನಗಳಿಗೆ ಹುಲ್ಲು ತಿನ್ನಲು ಗ್ವಾದಲಿ ಮಾಡುತ್ತಾರೆ. ಬಣ್ಣಗಳ ಬ್ಯಾಗಡಿ ಚೂರು ,ಬಣ್ಣದಲ್ಲಿ ತೊಯಿಸಿದ ಜೋಳ, ಕುಸುಬಿ, ಅಕ್ಕಿ ಕಾಳುಗಳಿಂದ ಎತ್ತುಗಳಿಗೆ ಕೊಂಬಣಸು, ಇಣಿಗವಚ, ಜೂಲು, ತೋಡೆ, ಗಂಟೆ ಸರಗಳಿಂದ ಸಿಂಗರಿಸುತ್ತಾರೆ.

ಸಿಂಗರಿಸಿದ ಜೋಡೆತ್ತುಗಳನ್ನು ನೋಡುವದೇ ಒಂದು ಸೊಗಸು. ನಂತರ ದೇವರ ಜಗುಲಿಯ ಮೇಲಿಟ್ಟು ಪೂಜೆ ಮಾಡಿ ಪ್ರಸಕ್ತ ವರ್ಷವಾದರೂ ಮಳೆ-ಬೆಳೆ ಸಮೃದ್ಧಿಯಾಗಿ ಆಗಲೆಂದು ಪ್ರಾರ್ಥಿಸುತ್ತಾರೆ.

ಹಬ್ಬ ಸಂಭ್ರಮ ಜೋರು:

ಗ್ರಾಮೀಣ ಭಾಗದಲ್ಲಿ ರೈತನ ಜೀವನಾಡಿಗಳಾದ ಎತ್ತುಗಳ ಹಬ್ಬ ಎಂದರೆ ಸಾಕು ಎಲ್ಲಿಲ್ಲದ ಸಂಭ್ರಮದಿಂದ ಮನೆಮಾಡಿರುತ್ತದೆ. ಬೆಳಿಗ್ಗೆ ಎತ್ತುಗಳಿಗೆ ಜಳಕ ಮಾಡಿಸಲಾಗುತ್ತಿದೆ. ಅವುಗಳಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಮಣ್ಣಿನಿಂದ ತಯಾರು ಮಾಡಿದ ಎತ್ತುಗಳಿಗೂ ಪೂಜೆ ಮಾಡುತ್ತಾರೆ. ಇಡೀ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ.

ಕೆ.ಜಿ ಜೇನು ತುಪ್ಪಕ್ಕೆ 8.8 ಲಕ್ಷ ಎಂದರೆ ನೀವು ನಂಬುತ್ತೀರಾ?

ಭಾವನಾತ್ಮಕ ಸಂಬಂಧ:

ಸಾಮಾನ್ಯವಾಗಿ ರೈತರು ಮಣ್ಣೆತ್ತಿನ ಅಮಾವಾಸ್ಯೆ ದಿನ ಎತ್ತುಗಳಿಗೆ ಬಿಡುವು ನೀಡಿ, ಇತರೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇತ್ತೀಚೆಗೆ ಕೃಷಿ ಯಾಂತ್ರಿಕೃತಗೊಂಡ ಹಿನ್ನೆಲೆಯಲ್ಲಿ ಎತ್ತುಗಳ ಬಳಕೆ ತೀರಾ ವಿರಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎತ್ತುಗಳಿಲ್ಲದ ಕೃಷಿಕರು ಮಣ್ಣೆತ್ತಿನ ಪೂಜೆ ಸಲ್ಲಿಸಿ, ಭಕ್ತಿಭಾವ ಮೆರೆಯುತ್ತಾರೆ.

ದೇಶಕ್ಕೆ ಅನ್ನ ನೀಡುವ ರೈತನ ಬದುಕು ಹಸನಾಗಲಿ ಹಾಗೂ ಈ ವರ್ಷ ಉತ್ತಮ ಮಳೆಯಾಗಿ ಎಲ್ಲೆಡೆ ಹಚ್ಚಹಸಿರು ಪಸರಿಸಲಿ, ರೈತರ ಆದಾಯ ದ್ವಿಗುಣವಾಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ.