1. ಅಗ್ರಿಪಿಡಿಯಾ

ಸೂರ್ಯಕಾಂತಿ ಬೆಳೆಗೆ ಬರುವ ಪ್ರಮುಖ ರೋಗಗಳು, ಅವುಗಳ ನಿಯಂತ್ರಣ ಕ್ರಮಗಳು

ಭಾರತದ ಬಹುತೇಕ ಮನೆಗಳಲ್ಲಿ ಈಗ ಬಳಸುತ್ತಿರುವ ಅಡುಗೆ ಎಣ್ಣೆ ಸೂರ್ಯಕಾಂತಿ ರೀಫೈನ್ಡ್ ಆಯಿಲ್. ಈ ಹಿಂದೆ ಅಡುಗೆ ಮನೆಗಳಲ್ಲಿ ಪಾರುಪತ್ಯ ಸಾಧಿಸಿದ್ದ ಶೇಂಗಾ ಎಣ್ಣೆಯನ್ನು ಸದ್ದಿಲ್ಲದೆ ಹಿಂದೆ ಸರಿಸಿದ ಸೂರ್ಯಕಾಂತಿ ಎಣ್ಣೆ, ಗ್ರಾಮ, ಪಟ್ಟಣ, ನಗರವೆನ್ನದೆ ದೇಶದ ಮೂಲೆ ಮೂಲೆಯನ್ನೂ ಆವರಿಸಿದೆ. ಇತ್ತೀಚೆಗಂತೂ ಈ ಖಾದ್ಯ ತೈಲದ ಬೆಲೆ ಮುಗಿಲು ಮುಟ್ಟಿದ್ದು, ಮಾರುಕಟ್ಟೆಯಲ್ಲಿ ಒಂದು ಲೀಟರ್ ಎಣ್ಣೆಯ ಬೆಲೆ ಕನಿಷ್ಠ 170 ರೂ. ಇದೆ. ನಾವಿಂದು ನಿತ್ಯ ಮೂರು ಹೊತ್ತು ರುಚಿಯಾದ ಅಡುಗೆ ಮಾಡಲು ಬಳಸುತ್ತಿರುವ ಸೂರ್ಯಕಾಂತಿ ಎಣ್ಣೆಯ ಮೂಲ ನಮ್ಮ ರೈತ ತನ್ನ ಹೊಲಗಳಲ್ಲಿ ಬೆಳೆಯಯತ್ತಿರುವ ಸೂರ್ಯಕಾಂತಿ ಬೆಳೆ.

ಅದರಲ್ಲೂ ನಮ್ಮ ಕರ್ನಾಟಕ ಅತಿ ಹೆಚ್ಚು ಸೂರ್ಯಕಾಂತಿ ಬೆಳೆಯುವ ರಾಜ್ಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಹಸಿರು ದಂಟು, ಹಸಿರು ಎಲೆ, ಹಳದಿ ಹೂವು ಹಾಗೂ ಕಪ್ಪು ಕಾಳುಗಳನ್ನು ಒಳಗೊಂಡು ವರ್ಣರಂಜಿತವಾಗಿ ಕಂಗೊಳಿಸುವ ಸೂರ್ಯಕಾಂತಿ, ರೈತರು ಬೆಳೆಯುತ್ತಿರುವ ಅತ್ಯಂತ ಆಕರ್ಷಕ ಹಾಗೂ ಸುಂದರ ಬೆಳೆಗಳಲ್ಲಿ ಒಂದು. ಈ ಗಿಡದ ಹಳದಿ ಹೂವುಗಳು ಸೂರ್ಯ ಸಾಗುವ ದಿಕ್ಕಿಗೇ ಮುಖ ಮಾಡುವ ಕಾರಣ ಇದಕ್ಕೆ ಸೂರ್ಯಕಾಂತಿ ಎಂಬ ಹೆಸರು ಬಂದಿದೆ. ಹೀಗೆ ಸೂರ್ಯ ಬೆಳಗುವಷ್ಟು ಕಾಲ ಆತನ ಕಿರಣಗಳಿಗೆ ಮೈವೊಡ್ಡಿ ಬೆಳೆಯುವ ಸೂರ್ಯಕಾಂತಿಯನ್ನು ಕೀಟಗಳು ಹಾಗೂ ರೋಗಗಳು ಕಾಡದೇ ಬಿಟ್ಟಿಲ್ಲ. ಈ ನಿಟ್ಟಿನಲ್ಲಿ ಸೂರ್ಯಕಾಂತಿ ಬೆಳೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ರೋಗಗಳು ಮತ್ತು ಅವುಗಳನ್ನು ನಿವಾರಿಸುವ ವಿಧಾನಗಳ ಕುರಿತು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿ (ಕೃಷಿ ವಿಸ್ತರಣೆ) ಡಾ.ನಾಗೇಶ್ ಬಸಪ್ಪ ಜಾನೇಕಲ್ ಅವರು ಇಲ್ಲಿ ಮಾಹಿತಿ ನೀಡಿದ್ದಾರೆ.

ಎಲೆ ಚುಕ್ಕಿ ರೋಗ

ಸಾಮಾನ್ಯವಾಗಿ ಸೂರ್ಯಕಾಂತಿ ಗಿಡದ ಕೆಳಗಿನ ಎಲೆಗಳಿಂದ ಈ ರೋಗ ಆರಂಭವಾಗಲಿದ್ದು, ಎಲೆಗಳ ಮೇಲೆ ಹಳದಿ ಉಂಗುರದಿಂದ ಸುತ್ತುವರಿದ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಈ ಚುಕ್ಕೆಗಳು ಒಂದಕ್ಕೊAದು ಕೂಡಿ ದೊಡ್ಡ ಮಚ್ಚೆಗಳಂತಾಗುತ್ತವೆ. ನಂತರ ಕಾಂಡ ಹಾಗೂ ಎಲೆಗಳ ಮೇಲೆ ಚುಕ್ಕಿ ಕಾಣಿಸಿಕೊಂಡು ಆ ಭಾಗಗಳೆಲ್ಲ ಒಣಗಿ ಹೋಗುತ್ತವೆ.

ನಿಯಂತ್ರಣ ವಿಧಾನ

ಬಿತ್ತನೆ ವೇಳೆ 1 ಕಿ.ಗ್ರಾಂ ಬೀಜಕ್ಕೆ 2 ಗ್ರಾಂ ಕಾರ್ಬೊಕ್ಸೀನ್ 75 ಡಬ್ಲೂಪಿ ಅಥವಾ 2 ಗ್ರಾಂ ಕ್ಯಾಪ್ಟನ್ 80ಡಬ್ಲೂಪಿ ಅಥವಾ 2ಗ್ರಾಂ ಮ್ಯಾಂಕೋಜೆಬ್ 75ಡಬ್ಲೂö್ಯಪಿ ಬಳಸಿ ಬೀಜೋಪಚಾರ ಮಾಡಬೇಕು. 2ಗ್ರಾಂ ಜೈನೆಬ್ 80ಡಬ್ಲೂಪಿ ಅಥವಾ 2ಗ್ರಾಂ ಮ್ಯಾಂಕೊಜೆಬ್ ಅಥವಾ 1 ಮಿ.ಲೀ ಹೆಕ್ಸಾಕೋನೋಜೋಲ್ ಶಿಲೀಂಧ್ರ ನಾಶಕ ಔಷಧವನ್ನು ಡಬ್ಲೂಪಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದರೆ ಈ ರೋಗವು ನಿಯಂತ್ರಣಕ್ಕೆ ಬರುತ್ತದೆ.

ತುಕ್ಕುರೋಗ

ಎಲೆಗಳ ಕೆಳಭಾಗದಲ್ಲಿ ಕಬ್ಬಿಣದ ತುಕ್ಕು ಬಣ್ಣದ ಬಟ್ಟೆಗಳ ರೂಪದಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡು ನಂತರ ಎಲೆ ಹಾಗೂ ಕಾಂಡಗಳ ಬಹು ಭಾಗವನ್ನು ಆಕ್ರಮಿಸಿಕೊಳ್ಳುತ್ತದೆ. ಸೊಂಕು ಉಂಟಾದ ಎಲೆ, ದೇಟು, ಹೂ ಕಾಂಡದ ಭಾಗಗಳು ಒಣಗಿ ಹೋಗುತ್ತವೆ. ಇದನ್ನು ನಿಯಂತ್ರಿಸಲು 2 ಗ್ರಾಂ. ಜೈನೆಬ್ ಅಥವಾ 2 ಗ್ರಾಂ. ಮ್ಯಾಂಕೋಜೆಬ್ ಅಥವಾ 1 ಮಿ.ಲೀ ಹೆಕ್ಸಾಕೋನೋಜೋಲ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗೆ ಸಿಂಪಡಣೆ ಮಾಡಬೇಕು.

ಕೆದಿಗೆ ರೊಗ

ಗಿಡದ ಎಲೆಗಳ ಕೆಳಭಾಗದಲ್ಲಿ ಹತ್ತಿಯಂತೆ ಬಿಳಿ ಶಿಲೀಂಧ್ರದ ಬೆಳವಣಿಗೆ ಕಂಡುಬಂದು ಗಿಡದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಎಲೆಯ ನರಗಳು ತಿಳಿ ಹಳದಿ ವರ್ಣಕ್ಕೆ ತಿರುಗಿ ಗಿಡಗಳು ಗಿಡ್ಡವಾಗಿ ತೆನೆಯಲ್ಲಿ ಕಾಳು ತುಂಬದೆ ಇಳುವರಿ ಕಡಿಮೆಯಾಗುತ್ತದೆ. ಇದರ ನಿಯಂತ್ರಣಕ್ಕೆ, ಬಿತ್ತನೆಗೆ ಮುನ್ನ ಪ್ರತಿ ಕಿ.ಗ್ರಾಂ ಬೀಜಕ್ಕೆ ನೀರಿನಲ್ಲಿ ಕರಗುವ 6 ಗ್ರಾಂ ಶೇ.8ರ ಮೆಟಲಾಕ್ಸಿಲ್ ಪುಡಿಯಿಂದ ಬೀಜೋಪಚಾರ ಮಾಡಬೇಕು. ಅಥವಾ 3 ಗ್ರಾಂ ಮೆಟಲಾಕ್ಸಿಲ್ (4%)+ ಮೆಂಕೋಜೆಬ್ (64%) 68ಡಬ್ಲ್ಯೂಪಿ 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಿದರೆ ಈ ರೋಗವನ್ನು ನಿಯಂತ್ರಿಸಬಹುದು.

ಬೂದಿರೋಗ

ಗಿಡದ ಎಲೆಗಳ ಮೇಲ್ಭಾಗದಲ್ಲಿ ಬಿಳಿ ಅಥವಾ ಬೂದು ಬಣ್ಣದ ಕಲೆಗಳು ಕಾಣಿಸಿಕೊಂಡು, ನಂತರ ಈ ಲಕ್ಷಣಗಳು ತೆನೆಗಳ ಮೇಲೆ ಗೋಚರಿಸಿ ಬೆಳೆಗೆ ಹಾನಿ ಉಂಟುಮಾಡುತ್ತವೆ. ಈ ಲಕ್ಷಣಗಳು ಎಲೆ ಕಾಂಡ ಮತ್ತು ತನೆಯ ಮೇಲೆ ಹರಡಿ ಪೂರ್ತಿ ಸಸ್ಯವನ್ನು ಬೂದು ಬಣ್ಣ ಆವರಿಸುತ್ತದೆ. ಪ್ರತಿ ಲೀಟರ್ ನೀರಿಗೆ 1 ಮಿ.ಲೀ ಡೈಫೆನಾಕೋನಾಜೋಲ್ ಅಥವಾ 0.5 ಗ್ರಾಂ. ಮೈಕ್ಲೋಬ್ಲುಟಾನಿಲ ಬೆರೆಸಿ ಬೆಳೆಗೆ ಸಿಂಪಡಿಸಿದರೆ ಈ ರೋಗ ನಿಯಂತ್ರಣಕ್ಕೆ ಬರುತ್ತದೆ.

ನಂಜಾಣು ರೋಗ

ಎಲೆಗಳ ಅಂಚಿನಿಂದ ಒಣಗುವಿಕೆ ಪ್ರಾರಂಭವಾಗಿ ಕಾಂಡದ ಮೂಲಕ ಬೆಳೆಯುವ ಚಿಗುರಿಗೆ ವ್ಯಾಪಿಸಿ, ಗಿಡಗಳ ಬೆಳವಣಿಗೆ ನಿಂತು ಹೋಗುತ್ತದೆ. ಗಿಡಗಳು ಕಾಳು ಕಟ್ಟುವುದಿಲ್ಲ. ಇದರ ನಿಯಂತ್ರಣಕ್ಕೆ ಪ್ರತಿ ಕಿ.ಗ್ರಾಂ ಬೀಜಕ್ಕೆ 5 ಗ್ರಾಂ ಇಮಿಡಾಕ್ಲೋಪ್ರಿಡ್ ಕೀಟನಾಶಕದಿಂದ ಬೀಜೋಪಚಾರ ಮಾಡಬೇಕು. ಹೊಲದ ಸುತ್ತಲೂ 3-4 ಸಾಲು ಎತ್ತರಕ್ಕೆ ಬೆಳೆಯುವ ಜೋಳ ಅಥವಾ ಮೆಕ್ಕೆಜೋಳ ಅಥವಾ ಸಜ್ಜೆಯನ್ನು ಹದಿನೈದು ದಿನಗಳ ಮುಂಚಿತವಾಗಿ ಬಿತ್ತಬೇಕು. ಸೂರ್ಯಕಾಂತಿ ಬಿತ್ತಿದ ಮೂವತ್ತು ದಿನಗಳ ನಂತರ 0.25 ಮಿ.ಲೀ ಇಮಿಡಾಕ್ಲೋಪ್ರಿಡ್ ಕೀಟನಾಶಕವನ್ನು ಅಥವಾ 1.5 ಮಿ.ಲೀ ಆಕ್ಸಿ ಡೆಮೆಟಾನ ಮಿಥೈಲ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದರೆ ಈ ರೋಗ ಹತೋಟಿಗೆ ಬರುತ್ತದೆ.

ಸೂಚನೆ: ಸೂರ್ಯಕಾಂತಿ ಹೊಲದಲ್ಲಿ ಪಾರ್ಥೇನಿಯಂ ಮತ್ತು ಕ್ಷಾಂತಿಯA ಕಳೆಗಳು ಬೆಳೆಯದಂತೆ ಎಚ್ಚರ ವಹಿಸಬೇಕು. ರೋಗಗ್ರಸ್ಥ ಗಿಡಗಳು ಕಂಡುಬಂದಲ್ಲಿ ಅವುಗಳನ್ನು ಕಿತ್ತು ನಾಶಪಡಿಸಬೇಕು. ಜೂನ್ ಮೊದಲ ವಾರ ಅಥವಾ ಆಗಸ್ಟ್ ಎರಡನೇ ವಾರ ಸೂರ್ಯಕಾಂತಿ ಬಿತ್ತನೆ ಮಾಡಬಾರದು. ಹಿಂಗಾರು ಹಂಗಾಮಿನಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿತ್ತನೆ ಕೈಗೊಳ್ಳಬೇಕು. ನೀರಾವರಿ ಸೌಲಭ್ಯವಿದ್ದಲ್ಲಿ ಮೇ ತಿಂಗಳಲ್ಲಿ ಬಿತ್ತನೆ ಮಾಡುವುದು ಸೂಕ್ತ.

Published On: 03 July 2021, 09:02 PM English Summary: major diseases in sunflower crop and control measures

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.