News

ಉತ್ತರ ಭಾರತದಲ್ಲಿ ಧಾರಾಕಾರ ಮಳೆ: ದೆಹಲಿಯಲ್ಲಿ ಇನ್ನೆರಡು ದಿನ ನಿರ್ಣಾಯಕ!

12 July, 2023 12:38 PM IST By: Hitesh
Torrential rains in North India: Two more days are crucial in Delhi!

ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಕಳೆದ ಒಂದು ವಾರದಲ್ಲಿ ಮಳೆಯಿಂದ ಸಂಭವಿಸಿದ ಅವಘಡದಲ್ಲಿ

ಬರೋಬ್ಬರಿ 25ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.

ಮಳೆಯ ಅವಘಡದಿಂದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಉತ್ತರಖಂಡದ ಹಲವು ಭಾಗದಲ್ಲಿ ಭೂಕುಸಿತವಾಗಿರುವುದು ವರದಿ ಆಗಿದೆ.  

ಕಳೆದ ಒಂದು ವಾರದಿಂದಲೂ ಉತ್ತರದಲ್ಲಿ ಭಾರೀ ಮಳೆ ಆಗುತ್ತಿದೆ. ಹಲವು ಪ್ರದೇಶಗಳಲ್ಲಿ ಮರಗಳು ಧರೆಗುರುಳಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

ಭಾರೀ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ ಮತ್ತು ಹಲವಾರು ರಾಜ್ಯಗಳಲ್ಲಿ ಪ್ರಮುಖ ರಸ್ತೆಗಳು ಬಂದಾಗಿವೆ.  

ಮಂಗಳವಾರ, ಯಮುನಾ ನದಿಯಲ್ಲಿ ನೀರಿನ ಮಟ್ಟವು ಅಪಾಯಕಾರಿ ಮಟ್ಟಕ್ಕೆ ಏರಿದ್ದರಿಂದ ಪ್ರವಾಹದ ಬಗ್ಗೆ ದೆಹಲಿಯನ್ನು ಹೈ ಅಲರ್ಟ್ ಘೋಷಿಸಲಾಗಿತ್ತು.

ಇದನ್ನೇ ಈಗಲೂ ಮುಂದುವರಿಸಲಾಗಿದೆ.  

ಅಧಿಕಾರಿಗಳು ದೆಹಲಿಯ ಯುಮುನಾ ನದಿ ತೀರದಲ್ಲಿ ವಾಸಿಸುತ್ತಿದ್ದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.

ಮಳೆಯಿಂದ ನೀರು ನುಗ್ಗಿ ಹಾನಿಯಾಗುವ ತಗ್ಗು ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳು ಅಗತ್ಯವಿದ್ದಲ್ಲಿ ಸ್ಥಳಾಂತರಿಸಲು ಸಿದ್ಧರಾಗಿರುವಂತೆ ಮುನ್ಸೂಚನೆ ನೀಡಲಾಗಿದೆ.

ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಯುಮುನಾ ನದಿಯ ಮೇಲೆ ಹಾದು ಹೋಗುವ ಪ್ರಮುಖ ಸೇತುವೆಯ ಮೇಲಿನ ಸಂಚಾರವನ್ನು

ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಶಾಲಾ- ಕಾಲೇಜಿನ ರಜೆಯನ್ನು ಮುಂದುವರಿಸಲಾಗಿದೆ. 

Milk price rise ಹಾಲಿನ ದರ 5 ರೂ. ಹೆಚ್ಚಳಕ್ಕೆ ಮನವಿ: 2ರಿಂದ 3ರೂ. ಹೆಚ್ಚಳ ಫಿಕ್ಸ್‌ !

ಮುಂದಿನ ಎರಡು ದಿನ ನಿರ್ಣಾಯಕ

ಮಳೆ ಹಾನಿ ಹಾಗೂ ಮಳೆ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಮುಂದಿನ ಎರಡು ದಿನಗಳು ಬಹಳಷ್ಟು ಪ್ರಮುಖವಾಗಿದೆ

ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಆದರೆ, ಇದೇ ಸಂದರ್ಭದಲ್ಲಿ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ತಮ್ಮ ಸರ್ಕಾರ ಸಿದ್ಧವಾಗಿದೆ ಎಂದಿದ್ದಾರೆ.  

ವಾರಾಂತ್ಯದವರೆಗೂ ದೆಹಲಿ ಸೇರಿ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಮುಂದುವರಿಯುವ ನಿರೀಕ್ಷೆಯಿದೆ

ಎಂದು ಭಾರತದ ಹವಾಮಾನ ಇಲಾಖೆ ಎಚ್ಚರಿಸಿದೆ.

ಹಿಮಾಲಯದ ರಾಜ್ಯಗಳಾದ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ, ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ರಸ್ತೆಗಳು ಮತ್ತು ಕಟ್ಟಡಗಳು

ಹಾನಿಗೊಳಗಾದ ನಂತರ ಭಾರತೀಯ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ.

ಹಿಮಾಚಲ ಪ್ರದೇಶದಲ್ಲಿ ಭೂಕುಸಿತದಿಂದಾಗಿ 700ಕ್ಕೂ ಹೆಚ್ಚು ರಸ್ತೆಗಳು ಮತ್ತು ಪ್ರಮುಖ ಹೆದ್ದಾರಿಗಳನ್ನು ಮುಚ್ಚಲಾಗಿದೆ.

Rain ರಾಜ್ಯದ ಕರಾವಳಿ ಭಾಗದಲ್ಲಿ ಮುಂದುವರಿದ ವರ್ಷಧಾರೆ!

ರಾಜಸ್ಥಾನ, ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿಯೂ ಸಹ ಭಾರೀ ಪ್ರಮಾಣದ ಜಲಪ್ರಳಯ ವರದಿಯಾಗಿದೆ.

ಅಮರನಾಥ ಯಾತ್ರೆ     

ಕಾಶ್ಮೀರದಲ್ಲಿ ಹಿಮಾಲಯದ ಅಮರನಾಥ ದೇವಸ್ಥಾನಕ್ಕೆ ಪ್ರತಿ ವರ್ಷ ಹಿಂದೂಗಳು ತೀರ್ಥಯಾತ್ರೆ ನಡೆಸುತ್ತಾರೆ. ಭಾರೀ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ

ಹಾನಿಗೊಳಗಾದ ನಂತರ ಸತತ ನಾಲ್ಕನೇ ದಿನಕ್ಕೆ ತೀರ್ಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಸಾವಿರಾರು ಯಾತ್ರಾರ್ಥಿಗಳು ಹತ್ತಿರದ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ.

ಕಾಲೋಚಿತ ಮಾನ್ಸೂನ್ ಮಳೆಯು ಜೂನ್ ನಿಂದ ಸೆಪ್ಟೆಂಬರ್ ವರೆಗೆ  ಇರಲಿದೆ ಎಂದು ಹೇಳಲಾಗಿದೆ.    

ಭಾರೀ ಮಳೆ ನಡುವೆ ಜಟಾಪಟಿ

ಇನ್ನು ದೆಹಲಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ನೀರು ಮನೆಗಳಿಗೆ ನುಗ್ಗಿ ಜನರು ಪರದಾಡುತ್ತಿದ್ದಾರೆ.ಆದರೆ, ದೆಹಲಿಯಲ್ಲಿ ರಾಜಕೀಯ ಜಟಾಪಟಿ ಮುಂದುವರಿದಿದೆ.

ಆಮ್‌ ಆದ್ಮಿ ಪಾರ್ಟಿ ಹಾಗೂ ದೆಹಲಿಯ ಲೆಫ್ಟಿನೆಂಟ್‌ ಗರ್ವನ್‌ನರ ನಡುವೆ ಮಳೆ ಅವಘಡಕ್ಕೆ ಸಂಬಂಧಿಸಿದಂತೆ ಜಟಾಪಟಿ ಮುಂದುವರಿದಿದೆ.

ಮಳೆ ಅವಘಡವನ್ನು ತಪ್ಪಿಸುವಲ್ಲಿ ಆಮ್‌ ಆದ್ಮಿ ಪಾರ್ಟಿಯು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಲೆಫ್ಟಿನೆಂಟ್‌ ಗವರ್ನರ್‌ ಆರೋಪಿಸಿದ್ದಾರೆ.

ಮಳೆ ಬರುವುದಕ್ಕೂ  ಮುನ್ನವೇ ಒಳಚರಂಡಿಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕಿತ್ತು. ಆದರೆ, ಇದನ್ನು ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಇದಕ್ಕೆ ಅಷ್ಟೇ ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿರುವ ಎಎಪಿ ನಾಯಕರು ಮಳೆಗಾಲಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ.

ಈಗ ಯಾವುದೇ ಪರಿಸ್ಥಿತಿ ಎದುರಾದರೂ, ನಾವು ಎದುರಿಸಲಿದ್ದೇವೆ ಎಂದು ಉತ್ತರಿಸಿದೆ.