News

ಭತ್ತಕ್ಕೆ ಬೆಂಬಲ ಬೆಲೆ; ರೈತರಿಂದ ಖರೀದಿ ಅವಧಿ ವಿಸ್ತರಣೆ

14 April, 2023 3:24 PM IST By: Maltesh
support price for paddy; Extension of purchase period from farmers

1.. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಜೊತೆ ದೂರವಾಣಿ ಮುಖಾಂತರ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ

2.. 2021-22ನೇ ಹಣಕಾಸು ವರ್ಷದಲ್ಲಿ ದಾಖಲೆಯ ನೇರ ತೆರಿಗೆ ಸಂಗ್ರಹ

3.. ಭತ್ತಕ್ಕೆ ಬೆಂಬಲ ಬೆಲೆ; ರೈತರಿಂದ ಖರೀದಿ ಅವಧಿ ವಿಸ್ತರಣೆ

4.. ಪಿಂಚಣಿ ಕುಂದುಕೊರತೆಗಳ ಪರಿಹಾರಕ್ಕಾಗಿ ಕಂಪ್ಲಿಯಲ್ಲಿ ಏ.27ರಂದು ನಿಧಿ ಅಪ್ಕೆ ನಿಕಟ್

5.. ತೋಟಗಾರಿಕೆ ತರಬೇತಿ ಕೇಂದ್ರ ಶಿಕ್ಷಣಾರ್ಥಿಗಳ ಆಯ್ಕೆ ಸಂದರ್ಶನ ಮೇ 25ಕ್ಕೆ ಮುಂದೂಡಿಕೆ

6.. ಕರಾಳಿಯ ಈ ಭಾಗಗಳಲ್ಲಿ ಮಳೆ ಸಾಧ್ಯತೆ - ಹವಾಮಾನ ಇಲಾಖೆ ಮುನ್ಸೂಚನೆ 

7..ಡೇರಿ ಫಾರ್ಮ್‌ನಲ್ಲಿ ಭೀಕರ ಸ್ಫೋಟ: 18 ಸಾವಿರಕ್ಕೂ ಹೆಚ್ಚು ರಾಸುಗಳು ಸಾವು

1..ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.

ಭಾರತ ಮತ್ತು ಯುನೈಟೆಡ್ ಕಿಂಗ್ ಡಮ್ ರೋಡ್ ಮ್ಯಾಪ್ ಕುರಿತು ಸಮಾಲೋಚನೆ ನಡೆಸಿದರು. ಇತ್ತೀಚಿನ ದಿನಗಳಲ್ಲಿ ಉಭಯ ದೇಶಗಳ ನಡುವೆ ಕೈಗೊಳ್ಳಲಾಗುತ್ತಿರುವ ದ್ವಿಪಕ್ಷೀಯ ಸಹಕಾರ ಸಂಬಂಧಗಳ ವೃದ್ಧಿ ಕಾರ್ಯಕ್ರಮಗಳು ತೃಪ್ತಿಕರವಾಗಿದೆ ಎಂದು ಪ್ರಧಾನಿ ಮೋದಿ ಮತ್ತು ರಿಷಿ ಸುನಕ್ ತಿಳಿಸಿದ್ದಾರೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಇತ್ತೀಚೆಗೆ ಭಾರತ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಿಷಿ ಸುನಕ್ ಗಮನಕ್ಕೆ ತಂದರು, ಮತ್ತು ಈ ರೀತಿಯ ಬೆಳವಣಿಗೆ ತೀವ್ರ ಆತಂಕಕ್ಕೆ ಕಾರಣವಾಗುತ್ತದೆ, ಇದನ್ನು ನಿಯಂತ್ರಿಸಬೇಕಾದ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದರು.

2..2021-22 ಸಾಲಿನಲ್ಲಿ ಒಟ್ಟು ನೇರ ತೆರಿಗೆ ಸಂಗ್ರಹ 14 ಲಕ್ಷ 12 ಸಾವಿರದ 422 ಕೋಟಿ ರೂಪಾಯಿಗೆ ತಲುಪಿದೆ. 2013-14ನೇ ಸಾಲಿಗೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇಕಡ 121ರಷ್ಟು ವೃದ್ಧಿಯಾಗಿದೆ.  ಮತ್ತೊಂದೆಡೆ 2021-22 ನೇ ಸಾಲಿನಲ್ಲಿ ಒಟ್ಟಾರೆ ನೇರ ತೆರಿಗೆ ಸಂಗ್ರಹ 16 ಲಕ್ಷದ 36 ಸಾವಿರದ 71 ಕೋಟಿ ತಲುಪಿದೆ. 2013-14ನೇ ಸಾಲಿಗೆ ಹೊಲಿಸಿದರೆ, ತೆರಿಗೆ ಸಂಗ್ರಹದಲ್ಲಿ 123ರಷ್ಟು ಏರಿಕೆಯಾಗಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ-ಸಿಬಿಡಿಟಿ ಈ ಮಾಹಿತಿಯನ್ನು ಇಂದು ಬಿಡುಗಡೆ ಮಾಡಿದ್ದು, 2013-14ನೇ ಸಾಲಿನಲ್ಲಿ ಶೇಕಡ 5.62ರಷ್ಟಿದ್ದ ನೇರ ತೆರಿಗೆ-ಜಿಡಿಪಿ ಅನುಪಾತ 2021-22ನೇ ಸಾಲಿನಲ್ಲಿ ಶೇಕಡ 5.92ಕ್ಕೆ ಏರಿಕೆ ಕಂಡಿದೆ.

3..2022-23ನೇ ಸಾಲಿನ ಮುಂಗಾರುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿಸಲು ಭತ್ತ ಖರೀದಿ ಕೇಂದ್ರಗಳನ್ನ ಪ್ರಾರಂಭಿಸಲಾಗಿದೆ. ಪ್ರತಿ ಎಕರೆಗೆ 25 ಕ್ವಿಂಟಾಲ್‍ನಂತೆ ಹಾಗೂ ಗರಿಷ್ಠ 40 ಕ್ವಿಂಟಾಲ್ ಮೀರದಂತೆ ಸಾಮಾನ್ಯ ಭತ್ತಕ್ಕೆ  ರೂ. 2040/- ಮತ್ತು ಗ್ರೇಡ್ ಎ ಭತ್ತಕ್ಕೆ ರೂ. 2060/- ನಿಗಧಿಪಡಿಸಲಾಗಿದ್ದು, ರೈತರಿಂದ ಭತ್ತ ಖರೀದಿಸುವ ಅವಧಿಯನ್ನು ಏ. 30ರವರೆಗೆ ವಿಸ್ತರಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.ರೈತರು ಈ ಸದವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ  ಹಾಗೂ ಹೆಚ್ಚಿನ ಮಾಹಿತಿಗಾಗಿ ಈಗಾಗಲೇ ತಾಲೂಕು ಎ.ಪಿ.ಎಂ.ಸಿ. ಯಾರ್ಡ್‍ಗಳಲ್ಲಿ ತೆರೆಯಲಾಗಿರುವ ಭತ್ತ ಖರೀದಿ ಕೇಂದ್ರಗಳನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

4..ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಜಿಲ್ಲಾ ಪ್ರಾದೇಶಿಕ ಕಚೇರಿಯು ಉದ್ಯೋಗಿಗಳ ಭವಿಷ್ಯನಿಧಿ ಮತ್ತು ಪಿಂಚಣಿ ಇತ್ಯಾದಿಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಬಗೆಹರಿಸಲು ಏ.27ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ‘ನಿಧಿ ಆಪ್ಕೆ ನಿಕಟ್' ಕಾರ್ಯಕ್ರಮವನ್ನು ಕಂಪ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಹಾಯಕ ಭವಿಷ್ಯನಿಧಿ ಆಯುಕ್ತ ಟಿ.ಎನ್.ನಂದನ್‍ಸಿಂಗ್ ಅವರು ತಿಳಿಸಿದ್ದಾರೆ. ಈ ಕಾರ್ಯಕ್ರಮವು ಕಾರ್ಮಿಕರ, ಪಿಂಚಣಿದಾರರ ಮತ್ತು ಉದ್ಯೋಗದಾತರ ಕುಂದುಕೊರತೆ ಪರಿಹಾರ ಮತ್ತು ಮಾಹಿತಿ ವಿನಿಮಯಕ್ಕೆ ಅರಿವು ಮೂಡಿಸುವ ಮತ್ತು ಪ್ರಭಾವ ಬೀರುವ ಕಾರ್ಯಕ್ರಮವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ:08392-226304ಗೆ ಸಂಪರ್ಕಿಸಬಹುದಾಗಿದೆ.

5..ಕೊಪ್ಪಳ ತೋಟಗಾರಿಕೆ ಇಲಾಖೆಯ 2023-24ನೇ ಸಾಲಿನ ತೋಟಗಾರಿಕೆ ತರಬೇತಿ ಕೇಂದ್ರ ಶಿಕ್ಷಣಾರ್ಥಿಗಳ ಆಯ್ಕೆಯ ಸಂದರ್ಶನವನ್ನು ಮೇ 25ಕ್ಕೆ ಮುಂದೂಡಲಾಗಿದೆ. ತಾಲ್ಲೂಕಿನ ಮುನಿರಾಬಾದ್ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 2023ರ ಜೂನ್ 1ರಿಂದ 2024ರ ಮಾರ್ಚ್ 30ರವರೆಗೆ ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿ ನೀಡಲು ಕೊಪ್ಪಳ ಜಿಲ್ಲೆಯ ಆಸಕ್ತ ಶಿಕ್ಷಣಾರ್ಥಿಗಳಿಂದ ಅರ್ಜಿಯನ್ನು ಸ್ವೀಕೃತವಾಗಿದ್ದು, ಈ ಕುರಿತು ಏಪ್ರಿಲ್ 15 ರಂದು ಏರ್ಪಡಿಸಲಾಗಿದ್ದ ಸಂದರ್ಶನವನ್ನು ಮೇ 25ಕ್ಕೆ ಮುಂದೂಡಲಾಗಿದೆ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಜೊತೆಗೆ ಕುರಿ ಸಾಕಾಣಿಕೆ: 7ರಿಂದ 8 ಲಕ್ಷದವರೆಗೆ ಗಳಿಸುತ್ತಿರುವ ಮಹಿಳೆ!

6..ನಾಳೆ ಕರಾವಳಿಯ ಭಾಗದ ಕೆಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನಲ್ಲಿ ಒಣಹವೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳು, ಉತ್ತರ ಒಳನಾಡಿನ ಬೆಳಗಾವಿ,ಧಾರವಾಡ, ಬಾಗಲಕೋಟೆ, ಕಲಬುರ್ಗಿ, ವಿಜಯಪುರ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಹಾಸನ, ಕೊಡಗು ಜಿಲ್ಲೆಗಳ ಒಂದೆರೆಡು ಕಡೆಗಳಲ್ಲಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

7..ಡೇರಿ ಫಾರ್ಮ್ ಒಂದರಲ್ಲಿ ಭೀಕರ ಸ್ಪೋಟ ಸಂಭವಿಸಿದ ಪರಿಣಾಮ ಸುಮಾರು 18 ಸಾವಿರಕ್ಕೂ ಹೆಚ್ಚು ಹಸುಗಳು ಮೃತಪಟ್ಟಿರುವ ಘಟನೆ ಅಮೆರಿಕದ ಪಶ್ಚಿಮ ಟೆಕ್ಸಾಸ್‌ನಲ್ಲಿ ನಡೆದಿದೆ. ಈಸ್ಟ್‌ ಟೆಕ್ಸಾಸ್‌ನ ಸೌತ್ ಪೋರ್ಕ್ ಡೇರಿ ಎಂಬಲ್ಲಿ ಬಾಯ್ಲರ್ ಸ್ಪೋಟಗೊಂಡ ಪರಿಣಾಮ ಸಂಪೂರ್ಣ ಫಾರ್ಮ್ ಹೊತ್ತಿ ಉರಿದಿದೆ. ಇದರಿಂದ  ಫಾರ್ಮ್‌ನಲ್ಲಿದ್ದ 18 ಸಾವಿರ ಹಸುಗಳು ಮೃತಪಟ್ಟಿವೆ.ಅಗ್ನಿಶಾಮಕ ಇಲಾಖೆಯವರು ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದು ತನಿಖೆ ಕೈಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Turkey Farming: ಇಲ್ಲಿದೆ ಲಾಭದಾಯಕ “ಟರ್ಕಿ ಕೋಳಿ ಸಾಕಾಣಿಕೆ” ಕುರಿತಾದ ಮಾಹಿತಿ