News

Millets : ರಾಷ್ಟ್ರೀಯ ಯುವಜನೋತ್ಸವದಲ್ಲಿ ಸಿರಿಧಾನ್ಯ ವೈಭವ - ಪ್ರದರ್ಶನ ಮತ್ತು ಮಾರಾಟ

10 January, 2023 11:08 AM IST By: Kalmesh T
Millets Glory at the National Youth Festival - Display and Sale

ಜನವರಿ 12 ರಿಂದ 16 ರ ವರೆಗೆ ಧಾರವಾಡದಲ್ಲಿ ನಡೆಯಲಿರುವ 26 ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಸಿರಿಧಾನ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.

PM Fasal Bima Yojana: ಫಸಲ್‌ ಬಿಮಾ ಯೋಜನೆಯಡಿ ಸಣ್ಣ ಮೊತ್ತದ ಕ್ಲೈಮ್‌ ಕುರಿತು ಶೀಘ್ರದಲ್ಲೆ ಹೊಸ ನೀತಿ! ಏನಿದು?

ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ, ದೃಢ ಮನಸ್ಸಿನಿಂದ ಅಸಾಧಾರಣ ಸಾಧನೆ ಸಾಧ್ಯ ಎಂಬ ನಾಣ್ಣುಡಿಯಂತೆ ಯುವ ಜನಾಂಗದ ಆರೋಗ್ಯ ರಕ್ಷಣೆಗೆ ಸಿರಿ ಧಾನ್ಯಗಳ ಮಹತ್ವ ಕುರಿತು ಮೇಳದಲ್ಲಿ ವಿಶೇಷ ಬೆಳಕು ಚೆಲ್ಲಲಾಗುತ್ತಿದೆ. ಸಿರಿಧಾನ್ಯಗಳ ತವರೂರಾದ ಕರ್ನಾಟಕದ ವೈಶಿಷ್ಟ್ಯಗಳನ್ನು ಇಲ್ಲಿ ಅನಾವರಣಗೊಳಿಸಲಾಗುತ್ತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿರುವ ಯುವಜನೋತ್ಸವದಲ್ಲಿ ಸಿರಿಧಾನ್ಯಕ್ಕೆ ವಿಶೇಷ ಒತ್ತು ನೀಡಿದ್ದು, ವಿವಿಧ ರಾಜ್ಯಗಳಿಂದ ಆಗಮಿಸುವ ಪ್ರತಿನಿಧಿಗಳು ಮತ್ತು ಗಣ್ಯರಿಗೆ ಸಿರಿಧಾನ್ಯಗಳ ವಿಶೇಷತೆಗಳನ್ನು ಪರಿಚಯಿಸುಲಾಗುತ್ತಿದೆ.

ಕರ್ನಾಟಕ ಸಿರಿಧಾನ್ಯಗಳ ಕಣಜವಾಗಿದ್ದು, ಇಲ್ಲಿನ ಉತ್ಪನ್ನಗಳ ಮಾರಾಟಕ್ಕೆ 20 ಕ್ಕೂ ಹೆಚ್ಚು ವಿಶೇಷ ಮಳಿಗೆಗಳನ್ನು ಸಜ್ಜುಗೊಳಿಸಲಾಗಿದೆ. ಪ್ರತಿನಿಧಿಗಳು ಮತ್ತು ಗಣ್ಯರಿಗೆ ಪೌಷ್ಟಿಕ ಆಹಾರದ ಪರಿಚಯ ಮಾಡಲಾಗುತ್ತಿದೆ.

ತುಮಕೂರು, ಉತ್ತರ ಕನ್ನಡ, ವಿಜಯಪುರ, ಧಾರವಾಡ ಜಿಲ್ಲೆಯ ರಾಯಾಪುರದ ಸಿರಿಧಾನ್ಯಗಳ ವಿಶೇಷ ಸಹಉತ್ಪನ್ನಗಳ ಉತ್ಪಾದಕರು ತಮ್ಮ ವಿಶೇಷತೆಗಳೊಂದಿಗೆ ಈಗಾಗಲೇ ಆಗಮಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಯತ್ನದ ಫಲವಾಗಿ ಈ ವರ್ಷವನ್ನು ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದ್ದು, ಕರ್ನಾಟಕ ಸಿರಿಧಾನ್ಯಗಳನ್ನು ಬೆಳೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

ಪಿಎಂ ಕಿಸಾನ್‌ ಅಪ್ಡೇಟ್‌: ಕೋಟಿಗಟ್ಟಲೆ ರೈತರಿಗೆ ಪಿಎಂ ಕಿಸಾನ್ 13ನೇ ಕಂತಿನ ಕುರಿತು ಮಹತ್ವದ ಮಾಹಿತಿ

ಸಿರಿಧಾನ್ಯ ವಲಯದಲ್ಲಿ ನವೋದ್ಯಮಗಳಿಗೂ ಸಹ ಹೆಚ್ಚಿನ ಅವಕಾಶಗಳಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಲು ಸರ್ಕಾರ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ.

ಇದರಿಂದ ರೈತರ ಆದಾಯ ಹೆಚ್ಚುವುದಲ್ಲದೇ ಕೃಷಿ ಸಮುದಾಯಕ್ಕೂ ಅನುಕೂಲವಾಗಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಇದೇ ಆಶಯದಿಂದ ಯುವ ಜನೋತ್ಸವದಲ್ಲಿ ಸಿರಿಧಾನ್ಯ ಉತ್ಸವ ಏರ್ಪಡಿಸಲಾಗಿದೆ.

ಸಿರಿ ಧಾನ್ಯಗಳ ಉತ್ಪಾದನೆ ಮತ್ತು ಸೇವನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯದ 16.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುತ್ತಿದ್ದು, 8.46 ಲಕ್ಷ ಹೆಕ್ಟೇರ್‍ನಲ್ಲಿ ರಾಗಿ, 6.16 ಲಕ್ಷ ಹೆಕ್ಟೇರ್‍ನಲ್ಲಿ ಜೋಳ, 1.48 ಲಕ್ಷ ಹೆಕ್ಟೇರ್ ಸಜ್ಜೆ, 0.29 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಕಿರುಧಾನ್ಯ, ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದು, ಒಟ್ಟಾರೆ 20.55 ಲಕ್ಷ ಟನ್ ಸಿರಿಧಾನ್ಯ ಉತ್ಪಾದನೆಯಾಗುತ್ತಿದೆ.

ವಿವಿಧ ಕಾರ್ಯಕ್ರಮಗಳ ಮೂಲಕ ಸಿರಿಧಾನ್ಯಗಳನ್ನು ಭವಿಷ್ಯದ ಆಹಾರವನ್ನಾಗಿಸಲು ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಇದನ್ನು ಸ್ಮಾರ್ಟ್ ಆಹಾರವಾಗಿ ಪ್ರಚಾರ ಮಾಡುತ್ತಿದ್ದು, ರಾಷ್ಟ್ರೀಯ ಯುವಜನೋತ್ಸವದಲ್ಲಿ ರಾಜ್ಯದ ಸಿರಿಧಾನ್ಯದ ಸಿರಿಯನ್ನು ವೈಭವದಿಂದ ಪ್ರದರ್ಶಿಸಲಾಗುತ್ತಿದೆ.

81.35 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರಧಾನ್ಯ ವಿತರಣೆ - 2 ಲಕ್ಷ ಕೋಟಿ ಸಬ್ಸಿಡಿ!

ಸಿರಿಧಾನ್ಯಗಳು ಪೌಷ್ಠಿಕ ಆಹಾರವಾಗಿದ್ದು, ಅಪೌಷ್ಟಿಕತೆಯಂತಹ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸಲಿದೆ. ಹೀಗಾಗಿ ಇವು ಗ್ರಾಹಕರಿಗೆ ಉತ್ತಮವಾಗಿವೆ, ಪರಿಸರಕ್ಕೆ ಒಳ್ಳೆಯದು, ರೈತರ ಆದಾಯ ಹೆಚ್ಚಳಕ್ಕೆ ಪೂರಕವಾಗಿದೆ.

ರಾಜ್ಯದ ಹಲವೆಡೆ ಬೆಳೆಯುತ್ತಿರುವ ಹಾರಕ. ಸಾಮೆ, ಊದಲು, ಕೊರಲು, ಬರಗು, ನವಣೆಯಂತಹ ವೈವಿಧ್ಯಮಯ ಸಿರಿಧಾನ್ಯಗಳ ಮಾರಾಟ ಮತ್ತು ಖಾದ್ಯಗಳ ಮಳಿಗೆಗಳನ್ನು ಆಕರ್ಷಣೀಯವಾಗಿ ರೂಪಿಸಲಾಗುತ್ತಿದೆ.

ಸಿರಿಧಾನ್ಯಗಳ ಸಂಸ್ಕರಣೆ, ಮಾರುಕಟ್ಟೆಗೆ ಸಂಬಂಧಿಸಿದಂತೆ ಸರ್ಕಾರ ವಿವಿಧ ಕಾರ್ಯಚಟುವಟಿಕೆಗಳನ್ನು ಕೈಗೊಂಡಿದ್ದು, 9 ಪ್ರಾಂತೀಯ ಒಕ್ಕೂಟಗಳ ಮೂಲಕ ಈ ಪ್ರಕ್ರಿಯೆ ನಡೆಯುತ್ತಿದೆ.

ರೈತ ಸಿರಿ ಯೋಜನೆ ಮೂಲಕ ಸಿರಿಧಾನ್ಯಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡುತ್ತಿದ್ದು, ಇದರಿಂದ ಬೇಡಿಕೆ ಹೆಚ್ಚಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ಹೆಚ್ಚಿನ ಬೆಲೆ ದೊರಕಿಸಿಕೊಡಲು ಸಿರಿಧಾನ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಗುಡ್‌ನ್ಯೂಸ್‌: ಕಳಸಾ ಬಂಡೂರಿ ಯೋಜನೆಗೆ ಕೇಂದ್ರದ ಒಪ್ಪಿಗೆ– ಸಿಎಂ ಬಸವರಾಜ ಬೊಮ್ಮಾಯಿ

ಜನವರಿ 20 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯ ಮೇಳ ಆಯೋಜಿಸುತ್ತಿದ್ದು, ಬರುವ ತಿಂಗಳು ಬೆಂಗಳೂರಿನಲ್ಲಿ ಭಾರತ ಅಧ್ಯಕ್ಷತೆ ವಹಿಸಿರುವ ಜಿ.20 ಶೃಂಗ ಸಭೆಯ ಕೇಂದ್ರೀಯ ಬ್ಯಾಂಕ್ ಗಳ ಗವರ್ನರ್ ಗಳ ಸಭೆಯ ಅಂಗವಾಗಿ ಸಿರಿಧಾನ್ಯ ನವೋದ್ಯಮಗಳಿಗೆ ಪ್ರೋತ್ಸಾಹ ನೀಡಲು ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ.

ಇದಕ್ಕೂ ಮುನ್ನ ಧಾರವಾಡದ ಯುವಜನೋತ್ಸವದಲ್ಲಿ 5 ದಿನ ಸಿರಿ ಧಾನ್ಯ ಉತ್ಸವ ಆಚರಿಸುತ್ತಿರುವುದು ವಿಶೇಷವಾಗಿದೆ.

ಆರ್.ಎನ್.ಶೆಟ್ಟಿ ಕಾಲೇಜು ಮೈದಾನದಲ್ಲಿ ಸಿರಿಧಾನ್ಯ ಮೇಳ

ಆರ್.ಎನ್.ಶೆಟ್ಟಿ ಕಾಲೇಜು ಮೈದಾನದಲ್ಲಿ ಸಿರಿಧಾನ್ಯ ಮೇಳಕ್ಕಾಗಿ ವಿಶೇಷ ವ್ಯವಸ್ಥೆ ಮಾಡಿದ್ದು, 20 ಕ್ಕೂ ಹೆಚ್ಚು ಮಳಿಗೆಗಳನ್ನು ಸಜ್ಜುಗೊಳಿಸಲಾಗಿದೆ. ಧಾರವಾಡ ಕೃಷಿ ವಿ.ವಿ, ಹಾವೇರಿ ಕೃಷಿ ವಿಜ್ಞಾನ ಕೇಂದ್ರ ಸೇರಿ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮೇಳ ಆಯೋಜಿಸಲಾಗಿದೆ.

ದಾರವಾಡದ ಕೃಷಿ ವಿ.ವಿ ನೆರವಿನಿಂದ ಸಿರಿಧಾನ್ಯ ಕೈಗಾರಿಕೆ ನಡೆಸುತ್ತಿರುವ 2 ನವೋದ್ಯಮಗಳಿಗೆ ಸಿರಿಧಾನ್ಯ ಮತ್ತು ಸಿರಿಧಾನ್ಯ ಉಪಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಲು ವೇದಿಕೆ ಕಲ್ಪಿಸಲಾಗಿದೆ. ರಾಜ್ಯದ ಪ್ರಮುಖ ತೃಣಧಾನ್ಯ ಉತ್ಪನ್ನಗಳ ಮಾರಾಟ ಮತ್ತು ಅದರ ವಿಶೇಷತೆಗಳ ಕುರಿತು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಆರೋಗ್ಯ ವರ್ಧಕ ಉತ್ಪನ್ನಗಳಿಗೆ ವಿಶೇಷ ಮನ್ನಣೆ

ಸಿರಿಧಾನ್ಯ ಮೌಲ್ಯವರ್ಧಿತ ಉತ್ಪನ್ನಗಳಾದ ಮಿಲೆಟ್ ಮಿಕ್ಸ್, ಇಡ್ಲಿ ದೋಸಾ ಮಿಕ್ಸ್, ಡಯಾಬಿಟಿಕ್ ಮಿಕ್ಸ್ ಸೇರಿ ಸವಿಯಲು ಸಿದ್ಧವಾದ ಉತ್ಪನ್ನಗಳು, ಬೇಕರಿ ಉತ್ಪನ್ನಗಳಾದ ಬಿಸ್ಕತ್ತು, ರಸ್ಕು ಸಿರಿಧಾನ್ಯ ಮೇಳದ ವೈಶಿಷ್ಟ್ಯ. ಆರೋಗ್ಯ ವರ್ಧನೆಗಾಗಿ ಡಯಾಬಿಟಿಕ್ ಹಾಗೂ ಪಿಸಿಓಡಿ ಕಿಟ್ ಕೂಡ ಒಂದು ವಿಶೇಷ ಆಕರ್ಷಣೆ. ಸಿರಿಧಾನ್ಯಗಳ ಹಲವಾರು ಉತ್ಪನ್ನಗಳು ಈ ಕಿಟ್‍ನಲ್ಲಿದ್ದು, ಇವು ಡಯಾಬಿಟಿಕ್ ಹಾಗೂ ಪಿಸಿಓಡಿ ನಿಯಂತ್ರಿಸಲು ಸಹಾಯಮಾಡುತ್ತವೆ.

ನಾರಿನಾಂಶ ಹೆಚ್ಚಿರುವ ಕಾರಣ ಇದು ಹೃದಯ ಸಂಬಂಧಿ ಸಮಸ್ಯೆ ನಿವಾರಣೆ ಮತ್ತು ಮಧುಮೇಹದಿಂದಲೂ ರಕ್ಷಣೆ ನೀಡುತ್ತದೆ. ಸಿರಿಧಾನ್ಯಗಳಲ್ಲಿ ಖನಿಜ, ಲವಣಾಂಶ ಹೆಚ್ಚಿರುವುದರಿಂದ ಮಾನವನ ಆರೋಗ್ಯಕ್ಕೆ ಇದು ಪೂರಕವಾಗಿದೆ.