News

ಕುತೂಹಲಕ್ಕೆ ಕೊನೆಗೂ ಬಿತ್ತು ತೆರೆ-ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಿ.ಎಸ್. ಯಡಿಯೂರಪ್ಪ

26 July, 2021 2:17 PM IST By:
B. S Yadiyurappa

ಕೆಲವು ತಿಂಗಳುಗಳಿಂದ  ನಡೆದ ನಾಯಕತ್ವ ಬದಲಾವಣೆ ಚರ್ಚೆಗೆ ಕೊನೆಗೂ ತೆರೆ ಬಿದ್ದಿದೆ.ನಾಲ್ಕು ಬಾರಿ ಸಿಎಂ ಸ್ಥಾನಕ್ಕೇರಿದ್ದ  ಬಿ.ಎಸ್. ಯಡಿಯೂರಪ್ಪನವರು ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕರ್ನಾಟಕ ಬಿಜೆಪಿ ಕಂಡ ಅಗ್ರಗಣ್ಯ ನಾಯಕ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡುವ ಮುನ್ನ ಭಾವುಕರಾಗುತ್ತಲೇ ವಿದಾಯ ಭಾಷಣ ಮಾಡಿದರು.

ಬಿಜೆಪಿ ಪಕ್ಷ ಸಂಘಟನೆ ಮತ್ತು ತಮ್ಮ ರಾಜಕೀಯ ಇತಿಹಾಸದ ಬಗ್ಗೆ ಮೆಲುಕು ಹಾಕುತ್ತಾ, ಭಾಷಣದ ಮಧ್ಯೆ ಮಧ್ಯೆ ಬಿ.ಎಸ್. ಯಡಿಯೂರಪ್ಪನವರು ಗದ್ಗತಿರಾದರು.  ಒಂದು ಕಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಕೇಂದ್ರದಲ್ಲಿ ಸಚಿವನಾಗೋಕೆ ಹೇಳಿದ್ದರು. ಆದರೆ ನಾನು ಅವರಿಗೆ ಕರ್ನಾಟಕದಲ್ಲಿ ಪಕ್ಷ ಕಟ್ಟಬೇಕಿದೆ. ಯಾವುದೇ ಕಾರಣಕ್ಕೂ ನಾನು ದೆಹಲಿಗೆ ಬರುವುದಿಲ್ಲ ಎಂದು ಹೇಳಿ ಪಕ್ಷ ಸಂಘಟನೆಯಲ್ಲಿ ತೊಡಗಿದೆ ಎಂದರು.

ಮಂಡ್ಯದಲ್ಲಿ ಹುಟ್ಟಿ ಶಿಕಾರಿಪುರದಲ್ಲಿ ಸಾಮಾಜಿಕ ಕಾರ್ಯ ಆರಂಭ ಮಾಡಿದೆ. ನನ್ನ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿತ್ತು. ಆಗ ಬದುಕುವುದೇ ಕಷ್ಟ ಎಂಬಂತಿತ್ತು. ರೈತಪರ, ದಲಿತಪರ ಹೋರಾಟ ಮಾಡಿದೆ. ನನ್ನ ಕಾರ್ಯಕ್ಕೆ ರಾಷ್ಟ್ರೀಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದರಷ್ಟೇ ಅಲ್ಲ, ರಾಜ್ಯದಲ್ಲಿ ಪಕ್ಷವನ್ನು ಬಲಿಷ್ಟವಾಗಿ ಮಾಡಿ ಆಧಿಕಾರಕ್ಕೆ ತಂದಿದ್ದರಿಂದಲೇ ತನ್ನನ್ನು ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ ಎಂದರು.

ಜೆಡಿಎಸ್ ಜೊತೆ ಅನಿವಾರ್ಯವಾಗಿ ಸಮ್ಮಿಶ್ರ ಸರ್ಕಾರ ಮಾಡಲಾಯಿತು. ಆದರೆ ಒಪ್ಪಂದದಂತೆ ನಡೆಯದ ಕಾರಣ ನಾನು ಸಿಎಂ ಸ್ಥಾನ ಪಡೆಯದೆ ಪಕ್ಷ ಸಂಘಟನೆ ಮಾಡಿದೆ. ನಮ್ಮದೇ ಕೆಲವು ತಪ್ಪುಗಳಿಂದ ಕಳೆದ ಸಲ ಬಹುಮತ ಪಡೆಯಕ್ಕಾಗಲಿಲ್ಲ. ನಂತರ ಎಲ್ಲರ ಸಹಕಾರದಿಂದ ಅಧಿಕಾರಕ್ಕೆ ಬರುವಂತಾಯಿತು. ತನಗೆ ಬಂದ ಹಲವಾರು ಅಗ್ನಿ ಪರೀಕ್ಷೆಗಳನ್ನು ಎಲ್ಲರ ಸಹಕಾರದಿಂದ ಎದುರಿಸಿದ್ದೇನೆ ಎಂದರು.

75 ವರ್ಷ ದಾಟಿದ್ದೇನೆಂದು ಅಧಿಕಾರದಿಂದ ಇಳಿಯುವಂತೆ ಕೇಂದ್ರದ ನಾಯಕರು ನನಗೆ ಹೇಳಿಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ 75 ವರ್ಷ ದಾಟಿದವರಿಗೆ ಯಾರಿಗೂ ರಾಜಕೀಯದಲ್ಲಿ ಅವಕಾಶ ಕೊಟ್ಟಿಲ್ಲ ಯುವಕರಿಗೆ ಅವಕಾಶ ಕೊಡಬೇಕೆಂಬ ಅವರ ಉದ್ದೇಶವಾಗಿದೆ. ಆದರೂ ಸಹ ನನಗೆ ನರೇಂದ್ರ ಮೋದಿ ಹಾಗೂ ಅಮಿತ್ ಶಾರವರು ಅವಕಾಶ ಕೊಟ್ಟಿದ್ದಾರೆ. ಅವರ ಆಶೀರ್ವಾದದಿಂದಲೇ ಸಾಧನೆ ಮಾಡಿದ್ದೇನೆ ಎಂದರು.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೇಂದ್ರದಿಂದ ಯಾವುದೇ ಒತ್ತಡ ಬಂದಿಲ್ಲ. ಎರಡು ತಿಂಗಳ ಹಿಂದೆಯೇ ನಾನೇ ರಾಜೀನಾಮೆ ನೀಡಲು ಉದ್ದೇಶಿಸಿದ್ದೆ. ಸರ್ಕಾರಕ್ಕೆ ಎರಡು ವರ್ಷ ತುಂಬಿದ್ದರಿಂದ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡುವುದು ಸರಿ ಎಂದು ಆ ದಿನವನ್ನು ಆಯ್ಕೆ ಮಾಡಿದ್ದೆ. ರಾಜ್ಯಪಾಲರು ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದಾರೆ. 4 ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ರಾಜ್ಯದ ಜನ ಅವಕಾಶ ನೀಡಿದ್ದಾರೆ. ಅದಕ್ಕೆ ಋಣಿಯಾಗಿದ್ದೇನೆ ಎಂದರು.