News

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಬೆಳೆ ವಿಮೆ ಕುರಿತು ಜುಲೈ 24ರಂದು ಕಾರ್ಯಾಗಾರ

23 July, 2021 7:25 PM IST By:

ಅತಿವೃಷ್ಠಿ, ಅನಾವೃಷ್ಠಿ, ಅಕಾಲಿಕ ಮಳೆ ಮುಂತಾದ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಉಂಟಾದಾಗ ರೈತರ ನೇರವಿಗೆ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ ಕುರಿತು ರೈತ ಬಾಂಧವರಿಗೆ ಸಮಗ್ರ ಮಹಿತಿ ನೀಡುವ ಉದ್ದೇಶದಿಂದ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಬೀದರ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಬೆಳೆ ವಿಮೆ’ ಕುರಿತು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಬೀದರ್ ಕೃಷಿ ವಿಜ್ಞಾನ ಕೇಂದ್ರದ ಸರಣಿ ಕಾರ್ಯಕ್ರಮವಾಗಿರುವ ‘ಕೆವಿಕೆ ಕೃಷಿ ಪಾಠ ಶಾಲೆ’ ಅಡಿಯಲ್ಲಿ ಆಯೋಜಿಸಿರುವ ವಿಷಯ ಮಂಡನೆ ಹಾಗೂ ಚರ್ಚೆ ಕಾರ್ಯಾಗಾರವು, ಜುಲೈ 24ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಗೂಗಲ್ ಮೀಟ್ ವೇದಿಕೆಯಲ್ಲಿ ನಡೆಯಲಿದೆ.

ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಬೆಳೆ ವಿಮೆ ಯೋಜನೆ ಅಧಿಕಾರಿ (ಕೃಷಿ) ವಿನಯಕುಮಾರ ಮತ್ತು ಕಲಬುರಗಿ-ಬೀದರ್ ಜಿಲ್ಲೆಯ ಬೆಳೆ ವಿಮೆ ಯೋಜನೆ ಅಧಿಕಾರಿ (ಕೃಷಿ) ಮಹಮದ್ ಮನ್ಸುರ್ ಶೇಖ್ ಅವರು ಭಾಗವಹಿಸಿ ಬೆಳೆ ವಿಮೆ ಕುರಿತು ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಉದ್ದೇಶಗಳು ಹಾಗೂ ರೈತರಿಗೆ ದೊರೆಯುವ ಸೌಲಭ್ಯಗಳು, ಮುಖ್ಯವಾಗಿ ಬೆಳೆ ವಿಮೆ ಮಾಡಿಸುವುದು ಹೇಗೆ, ಬೆಳೆ ವಿಮೆ ಮಾಡಿಸುವ ಅಂತಿಮ ದಿನಾಂಕ, ಯಾವ ಬ್ಯಾಂಕಿನಲ್ಲಿ ಮಾಡಿಸಬೇಕು, ಯಾವ ಯಾವ ಬೆಳಗಳು ವಿಮೆ ವ್ಯಾಪ್ತಿಗೆ ಬರಲಿವೆ, ಯಾವ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಈ ಯೋಜನೆಯ ಉಪಯುಕ್ತತೆ ಪಡೆಯಬಹುದು ಮತ್ತು ಇದನ್ನು ಅನುಷ್ಠಾನಗೊಳಿಸಲು ಗುರುತಿಸಿರುವ ವಿಮೆ ಕಂಪನಿಗಳು ಯಾವುವು, ವಿಮೆ ಮಾಡಿಸಲು ಬೇಕಾಗುವ ದಾಖಲೆಗಳು ಯಾವುವು ಎಂಬುದು ಸೇರಿದಂತೆ ಯೋಜನೆ ಕುರಿತಂತೆ ಸಮಗ್ರ ಮಾಹಿತಿಯನ್ನು ಈ ಕಾರ್ಯಾಗಾರದ ಮೂಲಕ ರೈತರಿಗೆ ನೀಡಲಾಗುತ್ತದೆ.

ಮಳೆ, ಚಂಡಮಾರುತ, ಗಾಳಿ, ಬೆಂಕಿ ಮತ್ತಿತರ ಪ್ರಕೃತಿ ವಿಕೋಪಗಳು ಹಾಗೂ ಅನಿರೀಕ್ಷಿತ ಘಟನೆಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಬೆಳೆಗಳನ್ನು ವಿಮೆಯ ವ್ಯಾಪ್ತಿಗೆ ಒಳಪಡಿಸುವುದು ಅತ್ಯಗತ್ಯವಾಗಿದ್ದು, ಈ ಕುರಿತು ಮಾಹಿತಿ ಒದಗಿಸಲು ಆಯೋಜಿಸಿರುವ ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಪಾಲ್ಗೊಂಡು ಪ್ರಯೋಜನ ಪಡೆಯಬೇಕು. ಗೂಗಲ್ ಮೀಟ್ ವೇದಿಕೆಯಲ್ಲಿ ಕಾರ್ಯಾಗಾರವು ನಡೆಯಲಿದ್ದು, ಆಸಕ್ತ ರೈತರು  https://meet.google.com/rkr-pbvj-psz ಈ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಲಕ ಪಾಲ್ಗೊಳ್ಳಬಹುದು. ವಿಮಾ ಯೋಜನೆ ಕುರಿತು ಮಾಹಿತಿ ಪಡೆಯುವ ಜೊತೆಗೆ, ಯೋಜನೆ ಬಗ್ಗೆ ತಮಗೆ ಇರುವ ಅನುಮಾನಗಳನ್ನು ಸಹ ರೈತರು ಈ ವೇದಿಕೆಯಲ್ಲಿ ಪರಿಹರಿಸಿಕೊಳ್ಳಬಹುದು ಎಂದು ಬಿದರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳಾಗಿರುವ ಡಾ. ಸುನೀಲಕುಮಾರ ಎನ್.ಎಂ ಅವರು ತಿಳಿಸಿದ್ದಾರೆ.

ರೈತರಿಗೆ ಆರ್ಥಿಕ ಭದ್ರತೆ

ಬೆಳೆ ನಷ್ಟ, ಬೆಳೆ ವಿಫಲಗೊಂಡ ಸಂದರ್ಭದಲ್ಲಿ ನಷ್ಟ ಹೊಂದಿದ ರೈತರ ಕೈಹಿಡಿಯಲು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಿದೆ. ಮುಂಗಾರು ಹಂಗಾಮಿನಲ್ಲಿ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆಗಳಿಂದ ಬೆಳೆ ನಷ್ಟವಾದಲ್ಲಿ ವಿಮೆಗೆ ಒಳಪಟ್ಟ ಬೆಳೆಗಳಿಗೆ ಯೋಜನೆ ಅಡಿಯಲ್ಲಿ ನಷ್ಟ ಪರಿಹಾರ ನೀಡಲಾಗುವುದು. ನಷ್ಟ ಸಮಭವಿಸಿದ 48 ಗಂಟೆಗಳ ಒಳಗಾಗಿ ರೈತರು ಸಂಬAಧಿಸಿದ ವಿಮಾ ಸಂಸ್ಥೆಗೆ ಮಾಹಿತಿ ನೀಡುವುದು ಇಲ್ಲಿ ಕಡ್ಡಾಯವಾಗಿದೆ. ವಿಮೆ ವ್ಯಾಪ್ತಿಗೆ ಒಳಪಟ್ಟಿರುವ ಬೆಳೆಯು ನೈಸರ್ಗಿಕ ವಿಕೋಪಗಳು, ಕೀಟಗಳು ಮತ್ತು ರೋಗ ಬಾಧೆಗಳಿಗೆ ತುತ್ತಾಗಿ ವಿಫಲವಾದರೆ ಅಥವಾ ರೈತರಿಗೆ ನಷ್ಟ ಸಂಭವಿಸಿದೆ ವಿಮಾ ರಕ್ಷಣೆಯನ್ನು ಮತ್ತು ಆರ್ಥಿಕ ಬೆಂಬಲ ಒದಗಿಸುವುದು, ಆ ಮೂಲಕ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು, ರೈತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.