News

ಕೃಷಿ ವಲಯಕ್ಕೆ ಬಂಪರ್‌ ಕೊಡುಗೆ ರೈತರಿಂದ ಕೃಷಿ ಉತ್ಪನ್ನ ಖರೀದಿಗಾಗಿಯೇ 1.72 ಲಕ್ಷ ಕೋಟಿ ರೂಪಾಯಿ ಮೀಸಲು

01 February, 2021 1:38 PM IST By:

2021ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಕೃಷಿರಂಗಕ್ಕೆ ಬಂಪರ್‌ ಕೊಡುಗೆ ನೀಡಿದ್ದಾರೆ. ರೈತರಿಂದ ಕೃಷಿ  ಉತ್ಪನ್ನ ಖರೀದಿಗಾಗಿಯೇ 1.72 ಲಕ್ಷ ಕೋಟಿ ರೂಪಾಯಿ ಮೀಸಲಿಡುವುದಾಗಿ ಘೋಷಣೆ ಮಾಡಿದ್ದಾರೆ.

ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡುವುದಾಗಿ ಹಾಗೂ ಕೃಷಿ ವಲಯಕ್ಕೆ 16.6 ಲಕ್ಷ ಕೋಟಿ ರೂಪಾಯಿ ಸಾಲ ಸೌಲಭ್ಯ ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಸಾಮಾನ್ಯವಾಗಿ ಆಹಾರ ಧಾನ್ಯ ಖರೀದಿಗೆ 1,41,930 ಕೋಟಿ ರೂಪಾಯಿ ತಗುಲುತ್ತದೆ. ಆದರೆ ಈ ವರ್ಷ ಈ ಮೊತ್ತವನ್ನು 1,72, 081 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಭತ್ತ ಮತ್ತು ಗೋದಿ ಖರೀದಿಗೆ ಹೆಚ್ಚಿನ ಹಣ ಮೀಸಲಿಡಲಾಗಿದೆ.

ಕೃಷಿ ವಲಯಕ್ಕೆ ಮಹತ್ವದ ಘೋಷಣೆಗಳಿವು:


ಆಹಾರ ಧಾನ್ಯ ಖರೀದಿಗೆ 1,41,930 ಕೋಟಿ ರೂಪಾಯಿ

ಬೇಳೆಕಾಳುಗಳ ಖರೀದಿಗೆಂದೇ 10,530 ಕೋಟಿ ರೂಪಾಯಿ ಮೀಸಲು

ಗೋದಿ ಖರೀದಿಗಾಗಿಯೇ 33,000 ಕೋಟಿ ರೂ. ಮೀಸಲು

ದೇಶದಲ್ಲಿ 5 ಮೀನುಗಾರಿಕಾ ಬಂದರುಗಳ ಅಭಿವೃದ್ಧಿ

ಈ ವರ್ಷ ಧಾನ್ಯಗಳ ಖರೀದಿ ಹಣ 1,72, 081 ಕೋಟಿ ರೂ.ಗೆ ಹೆಚ್ಚಳ

ಪಶುಸಂಗೋಪನೆ ಮೀನುಗಾರಿಗೆಕೆ ₹40 ಸಾವಿರ ಕೋಟಿ

ಕೃಷಿ ಕಾರ್ಮಿಕರ ಆರ್ಥಿಕ ಸಬಲೀಕರಣಕ್ಕೆ ಒತ್ತು

ಕೃಷಿ ನೀರಾವರಿಗೆ ಹೆಚ್ಚುವರಿ 5 ಸಾವಿರ ಕೋಟಿ ರೂ.

ಕೃಷಿ ಬೆಳೆಗಳಿಗೆ ವಿಮೆ ವಿಸ್ತರಣೆ

ಕೃಷಿ ಸಾಲದ ಮೊತ್ತವನ್ನು 16.5 ಲಕ್ಷ ಕೋಟಿ ರೂಪಾಯಿಗೆ ವಿಸ್ತರಣೆ

ಕಳೆದ ಕೆಲ ತಿಂಗಳಿಂದ ನೂತನ ಕೃಷಿ ಕಾಯಿದೆಗಳನ್ನು ರದ್ದುಗೊಳಿಸುವಂತೆ ರೈತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಕೃಷಿ ಉತ್ಪನ್ನಗಳ ಬೆಂಬಲ ಬೆಲೆಯಲ್ಲಿ ಹೆಚ್ಚಳ ಗೋಷಿಸಿರುವುದು ರೈತರಿಗೆ ಕೊಂಚ ನಿರಾಳ ತಂದರೂ ತರಬಹುದು.