News

ಉದ್ಧವ್ ಠಾಕ್ರೆಗೆ ಸಿಎಂ ಸ್ಥಾನ ಹೋಗುವ ಭೀತಿ, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಅನಿವಾರ್ಯತೆ ಎದುರಾಗಿದೆ

25 April, 2020 4:27 PM IST By:

ನಾಟಕೀಯ ತಿರುವುಗಳನ್ನು ಕಂಡು, ಮಹಾರಾಷ್ಟ್ರ ಮುಖ್ಯಮಂತ್ರಿ ಗದ್ದುಗೆ ಏರಿದ್ದ ಉದ್ಧವ್‌ ಠಾಕ್ರೆಗೆ ಈಗ ಹುದ್ದೆ ಕಳೆದುಕೊಳ್ಳುವ ಭೀತಿ ಎದುರಾಗಿದೆ.  ಅತ್ತ ವಿಧಾನಸಭೆ, ಇತ್ತ ವಿಧಾನ ಪರಿಷತ್ತನ್ನೂ ಪ್ರತಿನಿಧಿಸದ ಠಾಕ್ರೆ, 6 ತಿಂಗಳ ಗಡುವಿನ ಅಂಚಿನಲ್ಲಿದ್ದು, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಅನಿವಾರ್ಯತೆ ಎದುರಾಗಿದೆ.

ಉದ್ಧವ್‌ ಠಾಕ್ರೆ ಸಿಎಂ ಆಗಿ ಮೇ 28ಕ್ಕೆ 6 ತಿಂಗಳು ಪೂರ್ಣ­ಗೊಳ್ಳುತ್ತದೆ. ಮಹಾರಾಷ್ಟ್ರದ ಎರಡೂ ವಿಧಾನ­ಸಭೆಗಳಲ್ಲಿ ಸದಸ್ಯರಾಗದೆ, ಎನ್‌ಸಿಪಿ- ಕಾಂಗ್ರೆಸ್‌ ಪಕ್ಷಗಳ ಬೆಂಬಲದೊಂದಿಗೆ ಸಿಎಂ ಪದವಿ ಸ್ವೀಕರಿಸಿದ್ದರು.

ಚುನಾವಣೆ ದೂರದ ಮಾತು: 164ನೇ ವಿಧಿಯಂತೆ ಅವರಿಗೆ ಶಾಸಕ ಸ್ಥಾನ ಹೊಂದಲು 6 ತಿಂಗಳ ಅವಕಾಶವಿತ್ತು. ಆದರೆ, ನಿರ್ಣಾಯಕ ಘಟ್ಟದಲ್ಲೇ ಕೋವಿಡ್ 19 ವೈರಸ್, ಮಹಾರಾಷ್ಟ್ರದಲ್ಲಿ ಅಟ್ಟಹಾಸ ಮೆರೆದಿದೆ. ಇಂಥ ಸಂದಿಗ್ಧತೆಯಲ್ಲಿ ಚುನಾವಣೆ ದೂರದ ಮಾತು.

ಕೊರೋನಾ ವೈರಸ್ ಬಿಕ್ಕಟ್ಟಿನಿಂದಾಗಿ ಎಲ್ಲಾ ಚುನಾವಣೆಗಳನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿದ್ದು, ಮಹಾರಾಷ್ಟ್ರದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆಯಿದೆ.

ದಾರಿಗಳೇ ಇಲ್ಲ: ಕೋವಿಡ್ 19 ವೈರಸ್ ಪೂರ್ವದಲ್ಲಿಯೇ ಠಾಕ್ರೆ, ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ಸ್ಪರ್ಧಿಸಿ ಗೆಲ್ಲ­ಬೇಕಿತ್ತು. ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಪ್ರಸ್ತುತ 2 ಶಾಸಕ ಹುದ್ದೆಗಳು ಖಾಲಿ ಇವೆ. ರಾಜ್ಯಪಾಲರು ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರ, ಆಂದೋಲನ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಅಲ್ಲಿಗೆ ಆರಿಸು­ತ್ತಾರೆ. ಈ ಯಾವ ಕ್ಷೇತ್ರಗಳಿಗೂ ಉದ್ಧವ್‌ ಹೊಂದುವುದೇ ಇಲ್ಲ.

ಮರು ಆಯ್ಕೆ?: ಉದ್ಧವ್‌ ಮೇ 28ಕ್ಕೆ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ, ಪುನಃ ಅಧಿಕಾರ ಹಿಡಿಯಬಹುದೇ ಎಂಬ ಜಿಜ್ಞಾಸೆಯೂ ಇದೆ. ಆದರೆ ಇದು ಸಾಧ್ಯವಾಗದ ಮಾತು. ಹೀಗಾಗಿ ಉದ್ಧವ್‌ ಸಿಎಂ ಸ್ಥಾನಕ್ಕೆ ಕೋವಿಡ್ 19 ವೈರಸ್ ಕುತ್ತು ತರುವ ಸಾಧ್ಯತೆಯೇ ದಟ್ಟವಾಗಿದೆ.