News

ಮುನಿದ ಯುಮುನೆ; ನೀರಿನಲ್ಲಿ ಮುಳುಗಿದ ದೆಹಲಿ ಹೃದಯಭಾಗ!

18 July, 2023 2:23 PM IST By: Hitesh
Torrential rains in Delhi: Flooded Yamuna river, what is the reason for Delhi floods?

ದೆಹಲಿಯಲ್ಲಿ ಈಗ ಅಕ್ಷರಶಃ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಮಳೆಯಲ್ಲಿ ಆಟವಾಡಲು ಹೋದ ಮೂರು ಪುಟ್ಟ ಮಕ್ಕಳು ಸಾವನ್ನಪ್ಪಿದ್ದಾರೆ. ಸಾವಿರಾರು ಜನ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಈ ಪ್ರವಾಹಕ್ಕೆ ಕಾರಣವೇನು ಎನ್ನುವ ವಿವರ ಈ ಲೇಖನದಲ್ಲಿದೆ. 

ರಾಷ್ಟ್ರರಾಜಧಾನಿ ದೆಹಲಿ ಸುರಕ್ಷಿತ. ದೇಶದ ರಾಜಧಾನಿಯಂತಹ ಪ್ರದೇಶದಲ್ಲಿ ಮಳೆಯಾದರೂ ಅದನ್ನು ಅಲ್ಲಿನ ಆಡಳಿತ ನಿಭಾಯಿಸಬಲ್ಲದು. ಮೆಟ್ರೋ ಸಿಟಿ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಮಳೆಯಿಂದ ಅಂತಹ ಅನಾಹುತವೇನು ಸಂಭವಿಸಲಾರದು ಎಂದೇ ಎಲ್ಲರೂ ನಿರೀಕ್ಷಿಸಿದ್ದೆವು. ಆದರೆ, ಪರಿಸ್ಥಿತಿ ಮಾತ್ರ ತದ್ವಿರುದ್ಧವಾಗಿದೆ. ಉತ್ತರ ಭಾರತ ಹಾಗೂ ದೆಹಲಿಯಲ್ಲಿ ಸುರಿಯುತ್ತಿರುವ ಮಳೆ ದೆಹಲಿಯ ಜನರನ್ನು ಹಿಂಡಿಹಿಪ್ಪೆ ಮಾಡಿದೆ. ಮಳೆ ಅನಾಹುತದಿಂದ ಮೂವರು ಸಣ್ಣ ಮಕ್ಕಳ ಅಸುನೀಗಿದ್ದಾರೆ. 

ದೆಹಲಿಯ ರಿಂಗ್ ರಸ್ತೆ, ಐಟಿಒ, ರಾಜ್‌ಘಾಟ್, ಕೆಂಪು ಕೋಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೊಂಟದವರೆಗೆ ನೀರು ನಿಂತಿದೆ. ದೆಹಲಿಯಲ್ಲಿ ಎದುರಾಗಿರುವ ಪ್ರವಾಹದ ಪರಿಸ್ಥಿತಿ ಹಲವರನ್ನು ಬೆಚ್ಚಿಬೀಳಿಸಿದೆ.

ಯಮುನೆ ಮುನಿದಿದ್ದು, ದೆಹಲಿಯ ಹೃದಯ ಭಾಗ ನೀರಿನಲ್ಲಿ ಮುಳುಗಿದೆ. ಜನಜೀವನ ಅಸ್ತವ್ಯಸ್ತ ಹಾಗೂ ಸಾವು ನೋವುಗಳ ನಡುವೆಯೇ ಆಮ್‌ ಆದ್ಮಿ ಪಾರ್ಟಿ ಮತ್ತು ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟವೂ ನಡೆದಿದೆ. 

ಹತ್ನಿಕುಂಡ್ ಬ್ಯಾರೇಜ್ನಿಂದ ಭಾರೀ ಪ್ರಮಾಣದಲ್ಲಿ ನೀರು

ದೆಹಲಿಯಿಂದ ಬರೋಬ್ಬರಿ 180 ಕಿ.ಮೀ ದೂರದಲ್ಲಿರುವ ಹರಿಯಾಣದ ಯಮುನಾ ನಗರದಲ್ಲಿರುವ ಹತ್ನಿಕುಂಡ್ ಬ್ಯಾರೇಜ್ ನಿಂದ ನಿರಂತರವಾಗಿ ದೆಹಲಿ ಭಾಗಕ್ಕೆ ನೀರನ್ನು ಹರಿಬಿಡಲಾಗುತ್ತಿದೆ.

ದೆಹಲಿ ಮಾರ್ಗವಾಗಿ ಹರಿಯುವ ಯುಮುನಾ ನದಿಯ ನೀರಿನ ಹರಿವು ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಹರಿಯುತ್ತಿದೆ.

ಹಿಮಾಚಲ ಮತ್ತು ಉತ್ತರಾಖಂಡದಲ್ಲಿ ನದಿಯ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಯಮುನಾ ನದಿಯ ನೀರಿನ ಹರಿವು ಹೆಚ್ಚಳವಾಗಿದೆ. ಬ್ಯಾರೇಜ್‌ಗೆ ಭಾರಿ ಪ್ರಮಾಣದ ನೀರು ಬಿಡಲಾಗುತ್ತಿದೆ. ಎಲ್ಲಾ 18 ಬ್ಯಾರೇಜ್ ಗೇಟ್‌ಗಳನ್ನು ಜೂನ್ 9 ರಿಂದ ತೆಗೆಯಲಾಗಿದೆ.

ಇದರಿಂದ ಭಾರೀ ಪ್ರಮಾಣದಲ್ಲಿ ಒಳಹರಿವು ಹೆಚ್ಚಳವಾಗಿದೆ. ಇತ್ತೀಚಿನ ದಿನಗಳಲ್ಲಿ ದೆಹಲಿ-ಎನ್‌ಸಿಆರ್‌ ಸೇರಿದಂತೆ ವಿವಿಧೆಡೆ ಅನಿರೀಕ್ಷಿತವಾಗಿ ಮಳೆಯಾಗುತ್ತಿದ್ದು, ಸಣ್ಣ ಪ್ರಮಾಣದ ಮಳೆಗೂ ಜನ ಪರದಾಡುವ ಪರಿಸ್ಥಿತಿ ಎದುರಾಗುತ್ತಿದೆ.

ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಅಲ್ಲಿನ ಉಪನದಿಗಳು ಮತ್ತು ಜಲಾನಯನ ಪ್ರದೇಶಗಳು ಈಗಾಗಲೇ ತುಂಬಿ ಹರಿಯುತ್ತಿವೆ. ಈ ಮೂಲಕ ಯಮುನೆ ಉಕ್ಕಿ ಹರಿಯುತ್ತಿದ್ದಾಳೆ. ಯಮುನಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿರುವುದು ದೆಹಲಿಗರನ್ನು ಸಂಕಷ್ಟಕ್ಕೆ ದೂಡಿದೆ.  

ಮೂವರು ಮಕ್ಕಳ ಸಾವು; ಹಲವರು ಬದುಕು ಅತಂತ್ರ! 

ದೆಹಲಿಯಲ್ಲಿ ಕಳೆದ ಎರಡು ವಾರದಿಂದ ಸುರಿದ ಮಳೆಯಿಂದ ಓರ್ವ ಮಹಿಳೆ ಹಾಗೂ ಮೂವರು ಸಣ್ಣ ಮಕ್ಕಳು ಸಾವನ್ನಪ್ಪಿದ್ದು, ಹಲವರು ಬದುಕು ಅತಂತ್ರವಾಗಿದೆ. ದೆಹಲಿಯ ಮುಕುಂದಪುರದಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ.

ಮಳೆಯಿಂದ ಮುಕುಂದಪುರದ ಹೊಲವೊಂದರಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಆ ನೀರಿನಲ್ಲಿ ಸ್ನಾನ ಮಾಡಲು ಹೋದಾಗ ಈ ದುರಂತ ಸಂಭವಿಸಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ದುರಂತದಲ್ಲಿ ಮೃತಪಟ್ಟ ಮೂವರು ಮಕ್ಕಳು ಸಹ 12 ರಿಂದ 15 ವರ್ಷದ ಒಳಗಿನವರಾಗಿದ್ದಾರೆ. ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಹತ್ನಿಕುಂಡ್ ಬ್ಯಾರೇಜ್‌ನಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗಿದೆ.

ಹೀಗಾಗಿ, ದೆಹಲಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.  ಇನ್ನು ದೆಹಲಿಯ ಪ್ರವಾಹಕ್ಕೆ ಹತ್ನಿಕುಂಡ್ ಬ್ಯಾರೇಜ್ ಮಾತ್ರ ಕಾರಣವಲ್ಲ.  ಯಮುನಾ ನದಿಯ 22 ಕಿಮೀ ವ್ಯಾಪ್ತಿಯಲ್ಲಿ,

ವಜೀರಾಬಾದ್ ಬ್ಯಾರೇಜ್‌ನಿಂದ ದೆಹಲಿಯ ಓಖ್ಲಾ ಬ್ಯಾರೇಜ್‌ವರೆಗೆ ಸರಾಸರಿ 800 ಮೀಟರ್ ದೂರದಲ್ಲಿ 25 ಸೇತುವೆಗಳಿವೆ. ಸೇತುವೆಗಳು ಪ್ರವಾಹದ ನೀರಿನ ಸುಗಮ ಹಾದಿಗೆ ಅಡ್ಡಿಯಾಗಿದೆ.

ಅಲ್ಲದೇ ನದಿಗಳಲ್ಲಿ ಹೂಳು ಎತ್ತದಿರುವುದು ಸಹ ನೀರು ಸರಾಗವಾಗಿ ಹರಿದು ಹೋಗದೆ ಇರುವುದಕ್ಕೆ ಕಾರಣವಾಗಿದೆ. ಇದರೊಂದಿಗೆ ಎಲ್ಲ ನಗರಗಳಲ್ಲೂ ವರದಿ ಆಗುತ್ತಿರುವಂತೆ ಕೆರೆ ಭಾಗದ ಒತ್ತುವರಿ, ಅಸಮರ್ಪಕ ರಾಜಕಾಲುವೆ, ಒಳಚರಂಡಿ ವ್ಯವಸ್ಥೆ ಇಲ್ಲದೆ ಇರುವುದು ಸಹ ಈಗಿನ ಪರಿಸ್ಥಿತಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.  

ಒಡೆದ ರೆಗ್ಯುಲೇಟರ್‌; ಹೂಳು ತುಂಬಿದ ಬ್ಯಾರೇಟ್‌!

ದೆಹಲಿಯಲ್ಲಿ ಭಾರೀ ಮಳೆಯ ಹೊರತಾಗಿಯೂ ಇಲ್ಲಿ ನೀರು ಹರಿಯುವ ಬ್ಯಾರೇಜ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಇರುವುದು ಸಹ ಅನಾಹುತಕ್ಕೆ ಕಾರಣವಾಗಿದೆ.

ಬ್ಯಾರೇಜ್‌ನ ರೆಗ್ಯುಲೇಟರ್  ಒಡೆದಿದ್ದು, ಅಲ್ಲದೇ ಇಲ್ಲಿನ ಐಟಿಒನಲ್ಲಿ ಹೂಳು ತುಂಬಿದ ಬ್ಯಾರೇಜ್ನಿಂದ ಸಮಸ್ಯೆ ಹೆಚ್ಚಾಗಿದೆ.

ಐಟಿಒ ಬ್ಯಾರೇಜ್‌ನ ಒಟ್ಟು 32 ಗೇಟ್‌ಗಳಲ್ಲಿ ಐದು ಗೇಟ್‌ಗಳು ಹೂಳು ತುಂಬಿದ್ದರಿಂದ ಜಾಮ್‌ ಆಗಿದ್ದು, ನದಿ ನೀರಿನ ಹರಿವಿಗೆ ಅಡ್ಡಿಯಾ

ಗಿದೆ. ಸುಮಾರು ಮೂರು ದಶಕಗಳಿಂದ ತೆರೆಯದ ಐದು ಜಾಮ್ಡ್ ಗೇಟ್‌ಗಳನ್ನು ತೆರೆಯಲು ಮತ್ತೊಂದು ಸೇನಾ ತಂಡವನ್ನು ಕರೆಯಲಾಯಿತು.

ಡೈವಿಂಗ್ ತಂಡವು ಗೇಟ್‌ಗಳಿಂದ ಹೂಳನ್ನು ಹೊರತೆಗೆಯಿತು.  

ಪ್ರತಿ ಗೇಟ್ ಅಡಿಯಲ್ಲಿ  ಹಲವು ವರ್ಷಗಳಿಂದ ಸಂಗ್ರಹವಾದ ಸುಮಾರು 100-150 ಟನ್ ಹೂಳು ಗಟ್ಟಿಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಯಮುನಾ ನದಿ: ಸರ್ವಕಾಲಿಕ ದಾಖಲೆಯ ಹರಿವು!

ದೆಹಲಿಯ ಯಮುನಾ ನದಿ ತುಂಬಿ ಹರಿಯುತ್ತಿದ್ದು ಸೆಪ್ಟೆಂಬರ್ 6, 1978ರಂದು ದಾಖಲಾಗಿದ್ದ ಸಾರ್ವಕಾಲಿಕ ದಾಖಲೆಯ ಮಟ್ಟ 207.49 ಮೀಟರ್ ಪ್ರಮಾಣವನ್ನು ಮೀರಿ ಹರಿದಿದೆ.

ಈ ಪ್ರಮಾಣದಲ್ಲಿ ಯಮುನಾ ನದಿ ಮಟ್ಟ ಹೇರಿದ್ದನ್ನು ಹಲವು ವರ್ಷಗಳಿಂದ ಇಲ್ಲಿನ ಜನ ನೋಡಿಲ್ಲ. 

ಉತ್ತರ ಭಾರತದಾದ್ಯಂತ ಭಾರೀ ಮಳೆಯಾಗುತ್ತಿರುವ ಕಾರಣ ಯಮುನಾ ನದಿ ತುಂಬಿ ಹರಿಯುತ್ತಿದ್ದು ಪ್ರವಾಹ ಎದುರಾಗಿದೆ.   

41 ವರ್ಷದಲ್ಲಿ ದಾಖಲೆಯ ಮಳೆ!

ಉತ್ತರ ಭಾರತದಲ್ಲಿ ಭಾರೀ ಮಳೆಯಾಗುತ್ತಿದ್ದು, ದೆಹಲಿಯಲ್ಲೂ ಭಾರೀ ಮಳೆಯಾಗುತ್ತಿದ್ದು ಜನರ ಸಂಕಷ್ಟವನ್ನು ಹೆಚ್ಚಿಸಿದೆ.

ಕಳೆದವಾರ ಸುರಿದ 153 ಮಿ.ಮೀ ಮಳೆ ಪ್ರಮಾಣವನ್ನು ಕಳೆದ 41 ವರ್ಷಗಳಲ್ಲೇ ದಾಖಲೆಯ ಮಳೆ ಎನ್ನಲಾಗಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ 1982ರ  ಜುಲೈ 25ರ ನಂತರ ಒಂದೇ ದಿನದಲ್ಲಿ ಈ ಪ್ರಮಾಣದ ಮಳೆಯಾಗಿದೆ.

ಇನ್ನು ಕಳೆದ ಮೂರು ದಿನಗಳಿಂದಲೂ ಸಹ ಮಳೆಯಾಗುತ್ತಿದ್ದು, ಇನ್ನಷ್ಟೇ ದೆಹಲಿ ಚೇತರಿಸಿಕೊಳ್ಳಬೇಕಿದೆ.