News

ನಿವೃತ್ತರಾಗಿ ತವರಿಗೆ ಮರಳಿದ ಯೋಧನನ್ನು ಅದ್ಧೂರಿಯಾಗಿ ಸ್ವಾಗತಿಸಿದ ಜನತೆ

02 March, 2019 8:45 PM IST By:
ಕೋಲಾರ: ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಆಗಮಿಸಿದ ಯೋಧ ಸುರೇಶ್ ಅವರನ್ನು ಜಿಲ್ಲೆಯ ಜನರು ಅದ್ಧೂರಿಯಾಗಿ ಸ್ವಾಗತಿಸಿದರು.

ಯೋಧ ಸುರೇಶ್ ಕೋಲಾರ ಅವರು ಶ್ರೀನಿವಾಸಪುರ ತಾಲೂಕಿನ ಶೆಟ್ಟಿಹಳ್ಳಿ ನಿವಾಸಿ. ಸುರೇಶ್ ಅವರು ಪಂಜಾಬ್, ನಾಸಿಕ್, ಅರುಣಾಚಲ ಪ್ರದೇಶ, ಹರಿಯಾಣ, ಜಮ್ಮು-ಕಾಶ್ಮೀರ ಸೇರಿದಂತೆ ವಿವಿಧ ಕಡೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಸೇವೆಯಿಂದ ನಿವೃತ್ತಿ ಹೊಂದಿದ ಸುರೇಶ್ ಅವರು ಇಂದು ತಾಯ್ನಾಡಿಗೆ ಆಗಮಿಸಿದ್ದಾರೆ.

ಕೋಲಾರದ ಹೊಸ ಬಸ್ ನಿಲ್ದಾಣಕ್ಕೆ ಸುರೇಶ್ ಬರುತ್ತಿದ್ದಂತೆ, ಅವರನ್ನ ಭುಜದ ಮೇಲೆ ಹೊತ್ತು ಜನರು ಮೆರವಣಿಗೆ ಮಾಡಿ ಸಂಭ್ರಮಿಸಿ ಗೌರವ ಸಲ್ಲಿಸಿದರು. ಇದೇ ವೇಳೆ ಸುರೇಶ್ ಅವರಿಗೆ ಶಾಲು ಹೊದಿಸಿ, ಮೈಸೂರು ಟೋಪಿ ಹಾಕಿ ಸನ್ಮಾನಿಸಿದರು.

ಸುರೇಶ್ ಅವರು ಮಾತನಾಡಿ, ನಾನು ಉದ್ಯೋಗಕ್ಕೆ ಮಾತ್ರ ನಿವೃತ್ತಿ ಕೊಟ್ಟಿದ್ದೇನೆ. ದೇಶ ಸೇವೆಗೆ ನಿವೃತ್ತಿ ಕೊಟ್ಟಿಲ್ಲ. ದೇಶ ಹಾಗೂ ದೇಶ ಸೇವೆ ವಿಚಾರ ಬಂದರೆ ಮರಳಿ ಭಾರತೀಯ ಸೇನೆಗೆ ತೆರಳಿ ಸೇವೆ ಮಾಡುತ್ತೇನೆ. ಯುವಕರು ಸೇನೆಗೆ ಸೇರುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.