News

ರೈತರ ಬೇಡಿಕೆ ಈಡೇರಿಸುವವರಿಗೆ ರೈತರ ಬೆಂಬಲ: ಮೇ 6 ರಂದು ಅಂತಿಮ ಘೋಷಣೆ!

03 May, 2023 9:33 AM IST By: Kalmesh T
Support of farmers' unions to meet farmers' demands: Final announcement on May 6!

ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ರೈತ ಬೇಡಿಕೆಗಳನ್ನು ಈಡೇರಿಸುವವರಿಗೆ ಮಾತ್ರ ರೈತರ ಮತ್ತು ರೈತ ಸಂಘಟನೆಗಳ ಬೆಂಬಲ ನೀಡಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಮೂರು ಕೋಟಿಗೂ ಹೆಚ್ಚು ರೈತ ಮತದಾರರಿದ್ದಾರೆ. ರೈತರ ಓಟು ಕೇಳುವ ರಾಜಕೀಯ ಪಕ್ಷಗಳು.ರೈತ ಸಮಸ್ಯೆಗಳ ಪ್ರಣಾಳಿಕೆ ಬಗ್ಗೆ ಯಾಕೆ ಬದ್ಧತೆ ತೋರುತ್ತಿಲ್ಲ.

ಒಂದುವರೆ ತಿಂಗಳು ಪ್ರಣಾಳಿಕೆ ಬದ್ಧತೆ ಬಗ್ಗೆ ಕಾಲಾವಕಾಶ ನೀಡಿದರೂ, ಯಾವ ಪಕ್ಷದವರು ಬದ್ಧತೆ ತೋರಲಿಲ್ಲ.

ಇ೦ದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಕ್ತಾರರು ಮಾಜಿ ಸಂಸದರು ಉದಿತ್ ರಾಜ್ ವರು ದೂರವಾಣಿ ಕರೆ ಮಾಡಿ 6ನೇ ತಾರೀಖಿನಂದು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಜೊತೆಯಲ್ಲಿ ರೈತ ಮುಖಂಡರ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

ರೈತರ ಬೆಂಬಲ ಕೋರುವುದಾಗಿ ಮನವಿ ಮಾಡಿರುವ ಕಾರಣ ಅವರ ಜೊತೆ ಚರ್ಚಿಸಿದ ನಂತರ ರೈತರ ಬೆಂಬಲ ಯಾರಿಗೆ ಎಂದು ತಿಳಿಸಲಾಗುವುದು. 

ಪ್ರಜಾಪ್ರಭುತ್ವದ ಹೆಸರಿನಲ್  ಕ್ರಿಮಿನಲ್‌ಗಳು, ಗೂ೦ಡಗಳು

ಗಡಿಪಾರಾದವರು, ಭೂಮಾಫಿಯ ಅಬಕಾರಿ, ಸಕ್ಕರೆ, ಶಿಕ್ಷಣ ಮಾಫಿಯಾದವರು ಅಧಿಕಾರ ಹಿಡಿಯಲು ಬಂಡವಾಳ ಹೂಡುತ್ತಿದ್ದಾರೆ.ಅಧಿಕಾರಕ್ಕೆ ಬಂದು ಕೊಳ್ಳೆಹೊಡೆಯಲು ಮುಂದಾಗುತ್ತಿದ್ದಾರೆ.

ಕೆಲವು ರೈತ ಸಂಘಟನೆಗಳು ಕೆಲವು ರಾಜಕೀಯ ಪಕ್ಷಗಳ ಮುಖವಾಡದ ಸಂಘಟನೆಗಳಾಗಿವೆ. ಈ ರೈತ ಸಂಘಟನೆಗಳ ನಿರ್ಧಾರ ಬಗ್ಗೆ ರೈತರು ಎಚ್ಚರಿಕೆಯಿಂದ  ಜಾಗೃತರಾಗಿರಬೇಕು ಮೋಸ ಹೋಗಬಾರದು.

75 ವರ್ಷದಲ್ಲಿ ಯಾವ ಪಕ್ಷ ರೈತರಿಗೆ ನ್ಯಾಯ ನೀಡಿದೆ ಹೇಳಿ!

ರೈತರ ಮತ ಭಿಕ್ಷೆ ಬೇಡುವ ರಾಜಕೀಯ ಪಕ್ಷಗಳಿಗೆ, ರೈತರ ಪ್ರಣಾಳಿಕೆ ಬಗ್ಗೆ ಬದ್ಧತೆ ಯಾಕೆ ಕಾಣುತ್ತಿಲ್ಲ.

ಕರ್ನಾಟಕದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತೇವೆ,ಯಾವುದೇ ಸುಳ್ಳು ಪೂಳ್ಳು ಭರವಸೆಗಳನ್ನು ಕೊಡುವುದಿಲ್ಲ ಎನ್ನುವ ರಾಜಕೀಯ ಪಕ್ಷಗಳು. ಒ೦ದುವರೆ ತಿಂಗಳಾದರು ಬಹಿರಂಗವಾಗಿ ಯಾಕೆ ರೈತ ಪ್ರಣಾಣಿಕೆ ಬಗ್ಗೆ ಬದ್ಧತೆ ತೋರುತ್ತಿಲ್ಲ.

ಪ್ರಣಾಳಿಕೆ ಬಗ್ಗೆ ರಾಜ್ಯದ ರೈತರು ಹಳ್ಳಿ ಹಳ್ಳಿಗಳಲ್ಲಿ ರಾಜಕೀಯ ಪಕ್ಷಗಳಿಗೆ ಪ್ರಶ್ನೆ ಮಾಡಬೇಕು.  ಯಾವುದೇ ಪಕ್ಷ ಬಹಿರಂಗವಾಗಿ ಪ್ರಶ್ನಿಸಬೇಕು ಎಂದು ಕರೆ ನೀಡುತ್ತೇವೆ.

ರೈತರ ಪ್ರತಿ ಓಟಿಗೂ ಮೌಲ್ಯವಿದೆ. ಕೇವಲ ಒಂದೇ ‌ಒಂದು  ಓಟಿನಿಂದ ಎಂಎಲ್ಎ ಸೋತಿರುವುದು ಕಂಡಿದ್ದೇವೆ. ಒಂದು ಓಟಿನಿಂದ ಕೇಂದ್ರ ಸರ್ಕಾರ ಬಿದ್ದು ಹೋದ ಸ್ಥಿತಿಯನ್ನು ಕೂಡ ಕಂಡಿದ್ದೇವೆ.

ಇದನ್ನು ಅರಿತು, ರಾಜಕೀಯ ಪಕ್ಷದವರಿಗೆ ಎಚ್ಚರಿಕೆ ನೀಡಬೇಕು. ರಾಜ್ಯದ ರೈತರು ಮನಸ್ಸು ಮಾಡಿದರೆ ಸರ್ಕಾರಗಳನ್ನು ಬುಡಮೇಲು ಮಾಡುತ್ತವೆ.

ರೈತರು ಯಾರ ಗುಲಾಮರು ಅಲ್ಲ ದೇಶದ ಅನ್ನದಾತರು,  ರಾಜಕೀಯ ಪಕ್ಷದ ಮುಖಂಡರ ಮೊಸಳೆ ಕಣ್ಣೀರಿಗೆ ಬಲಿಯಾಗಬೇಡಿ. ಹಳ್ಳಿ ಹಳ್ಳಿಗಳಲ್ಲಿ ರಾಜಕೀಯ ಪಕ್ಷಗಳನ್ನು ಪ್ರಶ್ನೆ ಮಾಡಬೇಕು ಎಂದು ರೈತರಿಗೆ ಕರೆ ನೀಡಲಾಯಿತು.

ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ರೈತ ರತ್ನ ಕುರುಬೂರು ಶಾಂತಕುಮಾರ್ ಕರೆ ನೀಡಿದರು.   

ರೈತರ ಚುನಾವಣಾ ಪ್ರಣಾಳಿಕೆಗಳು ಈ ಕೆಳಕಂಡತಿವೆ

  •  ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡುವ ಶಾಸನ ಜಾರಿ,  ಡಾ. ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು.
  • ಸರ್ಕಾರಿ ನೌಕರರಿಗೆ, ಎಂಎಲ್ಎಗಳು ಮಂತ್ರಿಗಳಿಗೆ ಎಲ್ಲ ವರ್ಗದವರಿಗೂ ಪ್ರತಿ ತಿಂಗಳು ಸಂಬಳ ರೂಪದಲ್ಲಿ ಕನಿಷ್ಠ ಆದಾಯ ಬರುತ್ತದೆ, ಅದೇ ರೀತಿ ದಿನದಲ್ಲಿ ಹಗಲು ರಾತ್ರಿ ದುಡಿಯುವ ರೈತರಿಗೆ ಕನಿಷ್ಠ ಆದಾಯ ಖಾತರಿ ಭದ್ರತೆ ಯೋಜನೆ ಜಾರಿಗೆ ಬರಬೇಕು.
  • ಪ್ರಾಣಿಗಳ ಹಾವಳಿ, ಹಾಗೂ ದಾಳಿಯಿಂದ ರೈತನ ಬದುಕು ಹಾಳಾಗುತ್ತಿದೆ. ಆದಕಾರಣ ಹಗಲು ವೇಳೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ 12 ಗಂಟೆಗಳ ನಿರಂತರ ವಿದ್ಯುತ್ ನೀಡುವ ಭರವಸೆ ಬೇಕು.
  • ದೇಶದ ಉದ್ಯಮಿಗಳಿಗೆ 10 ಲಕ್ಷ ಕೋಟಿ ಸಾಲ ಮನ್ನ ಮಾಡಿದ ರೀತಿಯಲ್ಲಿಯೇ ಅತಿವೃಷ್ಟಿ ಹಾನಿ ಕರೋನ ಸಂಕಷ್ಟದಿಂದ ತತ್ತರಿಸಿರುವ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಆಗಬೇಕು , ಕೃಷಿ ಸಾಲ ನೀತಿ ಬದಲಾಗಬೇಕು.
  • ದೇಶದ 140 ಕೋಟಿ ಜನರಿಗೆ ಆಹಾರ ಉತ್ಪಾದನೆ ಮಾಡುವ ರೈತನಿಗೆ ಬಡ್ಡಿ ರಹಿತವಾಗಿ ಕೃಷಿ ಸಾಲ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನೀಡುವಂತಾ ಯೋಜನೆ ಜಾರಿಗೆ ಬರಬೇಕು .
  • ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣನೆ ಕೈ ಬಿಡುವುದಾಗಿ ಭರವಸೆ ನೀಡಬೇಕು. ಫಸಲ್ ಭೀಮಾ ಬೆಳೆ ವಿಮೆ ಯೋಜನೆ ತಿದ್ದುಪಡಿ ಮಾಡಬೇಕು, ಎಲ್ಲಾ ಬೆಳೆಗಳಿಗೂ ಬೆಳೆ ವಿಮೆ ಅನ್ವಯ ಮಾಡಬೇಕು.
  • ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಭೂಮಿ ಭೂಸ್ವಾದಿನ ಪ್ರಕ್ರಿಯೆ ನಿಲ್ಲಿಸಬೇಕು, ಅಗತ್ಯ ಸಂದರ್ಭಗಳಲ್ಲಿ ರೈತರ ಅನುಮತಿ ಪಡೆಯಬೇಕು ಆಂತಹ ರೈತರಿಗೆ ಜೀವನ ಭದ್ರತೆ ರೂಪಿಸಬೇಕು.
  • ಕಬ್ಬು ಕಟಾವು ಸಾಗಾಣಿಕೆ ದುಬಾರಿ ವೆಚ್ಚ, ಹಾಗೂ  ರೈತರ ಸುಲಿಗೆ ತಪ್ಪಿಸಲು ಕಬ್ಬಿನ ಎಪ್ ಆರ್ ಪಿ ಧರ ರೈತರ ಹೊಲದಲ್ಲಿನ ಧರ ಎಂದು ನಿಗದಿ ಪಡಿಸಬೇಕು.
  • ರೈತರು ಆಲೆಮನೆಗಳಲ್ಲಿ ಕಬ್ಬಿನಿಂದ ಎಥನಾಲ್ ಉತ್ಪಾದನೆಗೆ , ಟ್ಯಾಕ್ಟರ್ ಮತ್ತಿತರ ಯಂತ್ರಗಳಿಗೆ ಬಳಸಿಕೊಳ್ಳಲು ರೈತರಿಗೆ ಅವಕಾಶ ನೀಡಬೇಕು.
  • ಬಾಳೆ ಬೆಳೆಗೆ ನೀಡುವ ರೀತಿಯಲ್ಲಿ ಕಬ್ಬು ಬೆಳೆಯ ಉತ್ಪಾದನೆಗೆ ಎನ್ಆರ್‌ಇಜಿ ಯೋಜನೆಯನ್ನು ಲಿ೦ಕ ಮಾಡಬೇಕು.
  • ಗ್ರಾಮೀಣ ಯುವಕರನ್ನು ವಲಸೆ ತಪ್ಪಿಸಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು, ಗ್ರಾಮೀಣ ಭಾಗದಲ್ಲಿ ಕೃಷಿ ಪೂರಕ ಯೋಜನೆಗಳನ್ನು ಕೈಗೆತ್ತಿಕೊಳ್ಳುವ  ಭರವಸೆ ಬೇಕು.
  • ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ರೈತರ ಗಂಡು ಮಕ್ಕಳ ಮದುವೆಯಾಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಕೆಲಸದಲ್ಲಿ ಮೀಸಲಾತಿ ನೀಡಬೇಕು.
  • ಕೃಷಿ ಉತ್ಪನ್ನ, ಹಾಗೂ ಕೃಷಿ ಉಪಕರಣಗಳ ಮೇಲೆ ವಿಧಿಸಿರುವ ಜಿಎಸ್‌ಟಿ ರದ್ದುಗೊಳಿಸಬೇಕು. ಸಾವಯವ ಉತ್ಪನ್ನಗಳು, ಸಿರಿಧಾನ್ಯಗಳಿಗೆ ಪ್ರತ್ಯೇಕ ಮಾರುಕಟ್ಟೆ , ಪ್ರತ್ಯೇಕ ಹೆಚ್ಚುವರಿ ಧರ ನಿಗದಿ  ಯೋಜನೆ ಜಾರಿಗೆ ಬರಬೇಕು.
  • ಬಹುರಾಷ್ಟ್ರೀಯ ಕಂಪನಿಗಳ FDI ಬಂಡವಾಳಶಾಹಿ ಕಂಪನಿಗಳು ಚಿಲ್ಲರೆ ಮಾರಾಟ ವ್ಯವಸ್ಥೆಗೆ ಕಡಿವಾಣ ಹಾಕಬೇಕು,  ಈ ಕ೦ಪನಿಗಳ.ಕೃಷಿ  ಕ್ಷೇತ್ರದಲ್ಲಿ ಹೂಡಿಕೆ ನಿಷೇಧ ಹೇರಬೇಕು.
  • ರಾಜ್ಯದ ಕಬ್ಬು ಬೆಳೆಗಾರರಿಗೆ ವಂಚನೆ ಎಸೆಗುತ್ತಿರುವ ಕಾನೂನುಗಳನ್ನ ಉಲ್ಲಂಘನೆ ಮಾಡುತ್ತಿರುವ ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕುಟುಂಬಸ್ಥರನ್ನು ಸಚಿವ ಸಂಪುಟಕ್ಕೆ ಸೇರಿಸಿ ಕೂಳ್ಳಬಾರದು.
  • ರಾಜ್ಯದಲ್ಲಿ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವ ಭರವಸೆ ನೀಡಬೇಕು. 60 ವರ್ಷ ತುಂಬಿದ ರೈತರಿಗೆ ತಿಂಗಳಿಗೆ ಕನಿಷ್ಠ 5000 ಪಿಂಚಣಿ ಯೋಜನೆ ಜಾರಿಗೆ ತರಬೇಕು.
  • 2022-23 ರ ಸಾಲಿನಲ್ಲಿ ಕಬ್ಬಿಗೆ ಹೆಚ್ಚುವರಿ 150ರೂ ನಿಗದಿ ಆದೇಶ ತಡೆಯಾಜ್ಞೆ ತೆರವುಗೊಳಿಸಿ ಕಬ್ಬು ಬೆಳೆಗಾರರಿಗೆ ಹಣ ಕೊಡಿಸಬೇಕು.

ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ನಾರಾಯಣ ರೆಡ್ಡಿ. ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಸುರೇಶ್ ಮ ಪಾಟೀಲ್, ದೇವಕುಮಾರ್, ಪರಶುರಾಮ್ ಎತ್ತಿನಗುಡ್ಡ, ರೇವಣ್ಣಯ್ಯ ಹಿರೇಮಠ್ , ಬರಡನಪುರ ನಾಗರಾಜ್, ಸೋಮಶೇಖರ, ಗುರುಸಿದ್ದಪ್ಪ ರಾಜಣ್ಣ, ಅಂಜನಪ್ಪ ಮುರುಗೇಂದ್ರಪ್ಪ, ಕಮಲಮ್ಮ, ಕೋಟೆ ಸುನಿಲ್.ಮಂಜುನಾಥ್ ಮುಂತಾದವರು ಇದ್ದರು.