News

ಕಬ್ಬಿನ ಬೆಳೆಯೊಂದಿಗೆ ಆಸರೆ ಬೆಳೆಗಳಿಗೂ ಹಾನಿಯನ್ನುಂಟು ಮಾಡುತ್ತದೆ ಬಿಳಿನೊಣ

24 August, 2020 6:23 PM IST By:

ಕಬ್ಬಿನ ಬೆಳೆಯಲ್ಲಿ ಬಿಳಿನೊಣದ ಹಾವಳಿ ಹೆಚ್ಚಾದರೆ ಕಬ್ಬಿನೊಂದಿಗೆ ಇತರ ಆಸರೆ ಬೆಳೆಗಳಿಗೂ ಹಾನಿಯನ್ನುಂಟು ಮಾಡುತ್ತದೆ. ಬಿಳಿ ನೊಣವು ಆಸರೆ ಬೆಳೆಗಳಾದ ಕಬ್ಬು(sugarcane), ಜೋಳ (Jawar), ಬಿದಿರು ಹಾಗೂ ಇನ್ನಿತರ ಹುಲ್ಲಿನ ಜಾತಿಗೆ ಸೇರಿರುವ ಬೆಳೆಗಳಿಗೆ ಹಾನಿಯನ್ನುಂಟು ಮಾಡುತ್ತದೆ ಎಂದು ಜೇವರ್ಗಿ ಸಹಾಯಕ ಕೃಷಿ ನಿರ್ದೇಶಕ ಸುನೀಲ ಕುಮಾರ ಜವಳಗಿ ತಿಳಿಸಿದ್ದಾರೆ.

 ಸದ್ಯದ ಪರಿಸ್ಥಿತಿಯಲ್ಲಿ ಮಣ್ಣಿನಲ್ಲಿದ್ದಂತಹ ತೇವಾಂಶ ಹೆಚ್ಚಾಗಿ ಪೊರೈಸಿದ ಸಾರಜನಕ ಬೆಳೆಗೆ ಸಮರ್ಪಕವಾಗಿ ದೊರೆಯದೆ ಇರುವುದರಿಂದ ಬಿಳಿನೊಣದ ಬಾದೆ ಏಕಾಏಕಿಯಾಗಿ ಹೆಚ್ಚಾಗುತ್ತದೆ. ಮರಿ ಮತ್ತು ಪ್ರೌಢ ಕೀಟಗಳು ಸತತವಾಗಿ ಎಲೆಯ ಕೆಳಭಾಗದಿಂದ ರಸ ಹೀರುವುದರಿಂದ ಎಲೆಗಳು ಹಳದಿ ಹಾಗೂ ಗುಲಾಬಿ ಅಥವಾ ನೇರಳೆ/ಕೆಂಪು ಬಣ್ಣಕ್ಕೆ ತಿರುಗಿ ನಂತರ ಒಣಗಿ ಹೋಗುತ್ತವೆ. ಬಿಳಿನೊಣದ ಕೋಶದ ಕವಚ ಕಪ್ಪು ಬಣ್ಣದಿಂದ ಕೂಡಿರುವುದರಿಂದ ಎಲೆಗಳು ಬೀಳಿ ಮತ್ತು ಕಪ್ಪು ಚುಕ್ಕೆಗಳಾಗಿ ಕಾಣುತ್ತದೆ. ಸಕ್ಕರೆ ಅಂಶ ಕೂಡಿದ ಪದಾರ್ಥದಿಂದಾಗಿ ಎಲೆಯ ಮೇಲ್ಭಾಗದಲ್ಲಿ ಕಪ್ಪು ಬೂಷ್ಟ ಬೆಳೆಯುತ್ತದೆ. ಇದರಿಂದ ಕಬ್ಬಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಹಾಗೂ ಶೇ.25-30 ರಷ್ಟು ಇಳುವರಿ ಕಡಿಮೆಯಾಗುತ್ತದೆ.

ನಿರ್ವಹಣೆ  ಕ್ರಮಗಳು (management): ರೈತರು ಬಿಳಿ ನೊಣದ ಬಾಧೆ ಕಂಡ ತಕ್ಷಣ 0.5 ಗ್ರಾಂ. ಥಯೋಮಿಥಾಕ್ಸಾಮ್ 25 ಡಬ್ಲ್ಯ್ಲೂ.ಜಿ ಅಥವಾ 2 ಮೀ.ಲೀ. ಡೈಮಿಥೋಯೆಟ್ 30 ಇ.ಸಿ. ಅಥವಾ 0.5 ಮಿ.ಲಿ. ಇಮಿಡಾಕ್ಲೋಪ್ರಿಡ 17.8 % ಎಸ್.ಎಲ್. ಅಥವಾ ಎಸಿಪೇಟ 75 % ಎಸ್.ಪಿ. 1.5 ಗ್ರಾಂ ಅಥವಾ ಎಸಿಟಾಮಾಪ್ರಿಡ 20 % ಎಸ್.ಪಿ. 0.5 ಗ್ರಾಂ ಪ್ರತಿ ಲೀಟರ ನೀರಿಗೆ + ಜೋತೆಗೆ ಶೇ. 2 ರ ಯೂರಿಯಾ (20 ಗ್ರಾಂ) ಪ್ರತಿ ಲೀಟರ್ ನೀರಿನಲ್ಲಿ ಬೆರಿಸಿ ಸಿಂಪರಣೆ ಮಾಡಬೇಕು.

ಕೀಟದ ತೀವ್ರತೆಗನುಗುಣವಾಗಿ 15 ದಿನಗಳ ಅಂತರದಲ್ಲಿ ಎರಡನೇಯ ಸಿಂಪರಣೆ ಮಾಡಬೇಕು. ಮೇಲ್ಗೊಬ್ಬರವಾಗಿ ನೀರು ಕೊಟ್ಟ ನಂತರ ಪ್ರತಿ ಎಕರೆಗೆ 20-25 ಕಿ.ಗ್ರಾಂ ಯೂರಿಯಾ + ಜೊತೆಗೆ ಹರಳು ರೂಪದ ಕೀಟನಾಶಕಗಳಾದ ಕ್ಲೋರ್ಯಾಂಟ್ರಿನಿಲಿಪ್ರೊಲ್ 0.4 ಜಿ.ಆರ್ @ 5 ಕಿ.ಗ್ರಾಂ ಪ್ರತಿ ಎಕರೆಗೆ ಕೊಡುವುದು ಸೂಕ್ತ. ಕಬ್ಬಿನ ಪರಿಸರದಲ್ಲಿ ಪರಭಕ್ಷಕ ಕೀಟ (ಗುಲಗಂಜಿ ಹುಳು) ಹಾಗೂ ಜೈವಿಕ ಶೀಲಿಂದ್ರ (ಅಕ್ರಿಮೊನಿಯಂ ಜೈಲ್ಯಾನಿಕಂ) ಕಂಡುಬಂದಲ್ಲಿ ಅವನ್ನು ಉತ್ತೇಜಿಸುವುದು. (ಇಂತಹ ಸಮಯದಲ್ಲಿ ರಾಸಾಯನಿಕವನ್ನು ಬಳಸುವುದು ಸೂಕ್ತವಲ್ಲ).

ಹೆಚ್ಚಿನ ಮಾಹಿತಿಗಾಗಿ, ಕೃಷಿ ವಿಜ್ಞಾನ ಕೇಂದ್ರ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.