News

ಸಿಲಿಕಾನ್‌ ಸಿಟಿಯಲ್ಲಿ ನಾಳೆಯಿಂದ ರಾಜ್ಯ ಯುವ ಉತ್ಸವ..ವಿಶೇಷತೆಗಳೇನು ಗೊತ್ತಾ?

30 November, 2023 1:52 PM IST By: Maltesh

ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆಯ ಮೂಲಕವಾಗಿ ದೇಶಾದ್ಯಂತ ಯುವ ಉತ್ಸವ ಇಂಡಿಯಾ@2047 ಅಂಗವಾಗಿ ಜಿಲ್ಲಾ ಯುವ ಉತ್ಸವ/ ರಾಜ್ಯ ಯುವ ಉತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಈ ಯುವ ಉತ್ಸವ ಕಾರ್ಯಕ್ರಮವು ವಿಭಿನ್ನವಾಗಿದ್ದು, ರಾಷ್ಟ್ರೀಯ ಯುವ ಉತ್ಸವ ಕಾರ್ಯಕ್ರಮಕ್ಕೆ ಸಂಬಂಧವಿರುವುದಿಲ್ಲ.

ಇದೊಂದು ಪ್ರತ್ಯೇಕ / ವಿಶೇಷವಾದ ಕಾರ್ಯಕ್ರಮವಾಗಿದ್ದು, ಜಿಲ್ಲಾ ಮಟ್ಟದಲ್ಲಿ ಈ ಕೆಳಕಂಡ ಐದು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ರಾಜ್ಯದ 31 ಜಿಲ್ಲೆಗಳ ಸುಮಾರು 550 ಯುವ ವಿಜೇತರು ಹಾಗೂ ಕಲಾ ತಂಡಗಳು ಈ ರಾಜ್ಯ ಮಟ್ಟದ ಯುವ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ಮಟ್ಟದಲ್ಲಿ ವಿಜೇತರಾದವರು ರಾಷ್ಟ್ರ ಮಟ್ಟದಲ್ಲಿ ನಡೆಯುವ ರಾಷ್ಟ್ರ ಯುವ ಉತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಈ ಐದು ವಿಭಾಗಗಳಲ್ಲಿ ನಡೆಯುವ ಸ್ಪರ್ಧೆಗಳು ಈ ಕೆಳಕಂಡಂತಿವೆ. ವಿಜೇರಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನವನ್ನು ನೀಡಲಾಗುವುದು.

*  ಯುವ ಕಲಾವಿದರಿಂದ ಚಿತ್ರ ಕಲಾ ಸ್ಪರ್ಧೆ

*  ಯುವ ಬರಹಗಾರರಿಂದ - ಕವನ ಬರೆಯುವ ಸ್ಪರ್ಧೆ.

*  ಛಾಯಾಗ್ರಹಣ ಪ್ರತಿಭಾ (ಫೋಟೋಗ್ರಫಿ) ಸ್ಪರ್ಧೆ

*  ಭಾಷಣ ಸ್ಪರ್ಧೆ

*  ಜಾನಪದ ನೃತ್ಯ - ಗುಂಪು ಸ್ಪರ್ಧೆಗಳು

ಜಿಲಾ ಯುವ ಉತ್ಸವದಲ್ಲಿ.. ವಿಜೇತರಾದ ರಾಜ್ಯದ 31 ಜಿಲ್ಲೆಗಳ ಸುಮಾರು 550 ಯುವಕ/ ಯುವತಿಯರು ಈ ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಇವರಿಗೆ ವಸತಿಯನ್ನು ಬೆಂಗಳೂರು ನಗರದ ಕಂಠೀರವ ಕ್ರೀಡಾಂಗಣ ಮತ್ತು ಸಂಪಂಗಿರಾಮ ನಗರ ರಾಜ ರಾಮ್‌ ಮೋಹನ್‌ರಾಯ್ ರಸ್ತೆಯಲ್ಲಿರುವ ತೊಗಟವೀರರ ಸಂಘದ ಛತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆ, ಹಾಗೂ ಬೆಂಗಳೂರು ಸಿಟಿ ಯೂನಿವರ್ಸಿಟಿಯ ರಾಷ್ಟ್ರೀಯ ಸೇವಾ ಯೋಜನೆ ಇವರುಗಳ ಸಹಯೋಗದಲ್ಲಿ ಕರ್ನಾಟಕ ಯುವ ಉತ್ಸವವನ್ನು ದಿನಾಂಕ 2023 ರ ಡಿಸೆಂಬರ್ 01 ಮತ್ತು 02 ರಂದು ರಂದು ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ.

ಉದ್ಘಾಟನಾ ಸಮಾರಂಭ ದಿನಾಂಕ 01-12-2023 :-

ಈ ಕಾರ್ಯಕ್ರಮದ ಉದ್ಘಾಟನೆಯು ಬೆಳಿಗ್ಗೆ 11-00 ಗಂಟೆಗೆ ನಡೆಯಲಿದೆ.  ಕೇಂದ್ರ ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರಾದ ಶ್ರೀ ಭಗವಂತ ಖೂಬರವರು ಉದ್ಘಾಟಿಸಲಿದ್ದಾರೆ.

ಪ್ರತಿಜ್ಞಾ ವಿದಿಯನ್ನು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಶ್ರೀ ಬಿ. ನಾಗೇಂದ್ರ ರವರು ಬೋಧಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ.ರಿಜ್ವಾನ್ ಅರ್ಷದ್ ರವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬೆಂಗಳೂರು ಕೇಂದ್ರ ಕ್ಷೇತ್ರದ ಸನ್ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ. ಮೋಹನ್, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯರಾದ ಸನ್ಮಾನ್ಯ ಶ್ರೀ ತೇಜಸ್ವಿ ಸೂರ್ಯ. ಬೆಂಗಳೂರು ಸಿಟಿ ಯೂನಿವರ್ಸಿಟಿಯ ಮಾನ್ಯ ಉಪ-ಕುಲಪತಿ ಪ್ರೊ. ಲಿಂಗರಾಜ್ ಗಾಂಧಿ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ತ್ತುಮ ಕ್ರೀಡಾ ಇಲಾಖೆಯ ಗೌರವಾನ್ವಿತ ಪ್ರಧಾನ ಕಾರ್ಯದರ್ಶಿ ಶ್ರೀ. ಎಂ. ಮಂಜುನಾಥ್ ಪ್ರಸಾದ್, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಶ್ರೀ. ಎನ್. ಶಶಿಕುಮಾರ್ ರವರು ಭಾಗವಹಿಸಲಿದ್ದಾರೆ.