News

ವಿದ್ಯಾರ್ಥಿಗಳಿಗೆ ಹಳೆಯ ಬಸ್‌ ಪಾಸ್‌ ತೋರಿಸಿ ಪ್ರಯಾಣಿಸಲು ಅವಕಾಶ

04 January, 2021 12:27 PM IST By:
Bus

ಜನವರಿ 1ರಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಶಾಲಾ/ ಕಾಲೇಜುಗಳು ಪ್ರಾರಂಭವಾಗಿವೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಬಸ್‌ಗಳಲ್ಲಿ ಕಳೆದ ವರ್ಷದ (2019-20)ನೇ ಸಾಲಿನ ಹಳೆಯ ಬಸ್‌ಪಾಸ್‌ ಹಾಗೂ ಪ್ರಸಕ್ತ ವರ್ಷದಲ್ಲಿ ಶಾಲಾ, ಕಾಲೇಜುಗಳಿಗೆ ದಾಖಲಾಗಿರುವ ಶುಲ್ಕ ಪಾವತಿಸಿರುವ ರಸೀದಿ ತೋರಿಸಿ ಎಲ್ಲಾ ವಿದ್ಯಾರ್ಥಿಗಳು 2021ರ ಜನವರಿ 31ರವರೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ವಿದ್ಯಾರ್ಥಿಗಳು ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಲ್ಲಿ ಪ್ರಯಾಣಿಸಬಹುದಾಗಿದೆ ಎಂದು ಕಲಬುರಗಿ ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕ ನಿರ್ದೇಶಕರಾದ ಕೂರ್ಮರಾವ್.ಎಂ. ಅವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಪ್ರಸಕ್ತ ವರ್ಷದಲ್ಲಿ ಶಾಲಾ, ಕಾಲೇಜುಗಳಿಗೆ ದಾಖಲಾಗಿರುವ ಶುಲ್ಕ ಪಾವತಿ ರಸೀದಿ ಹಾಗೂ 2019-20 ನೇ ಸಾಲಿನ ಬಸ್‌ಪಾಸ್ ತೋರಿಸಿ ಸಂಬಂಧಪಟ್ಟ ಮಾರ್ಗದಲ್ಲಿ ಅಥವಾ ಹೊಸ ವಿಳಾಸದಲ್ಲಿರುವ ಶಾಲಾ, ಕಾಲೇಜುಗಳಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಅಲ್ಲದೇ, ವಿದ್ಯಾರ್ಥಿಗಳಿಗೆ 2020-21ನೇ ಸಾಲಿನ ಬಸ್‌ಪಾಸ್‌ಗಳನ್ನು ಸೇವಾ ಸಿಂಧು ಮೂಲಕ ಅರ್ಜಿ ಪಡೆದು ಬಸ್‌ಪಾಸ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಕೂಡಲೇ ಹೊಸ ಬಸ್‌ ಪಾಸ್‌ಗಳನ್ನು ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

ಪ್ರೋತ್ಸಾಹದಾಯಕ ದರದಲ್ಲಿ ನಾನ್ ಎಸಿ ಸ್ಲೀಪರ್ ಬಸ್ ಕಾರ್ಯಾಚರಣೆ

ಪ್ರಯಾಣಿಕರ ಕೋರಿಕೆ ಮೇರೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಕೆಳಕಂಡ ಮಾರ್ಗಗಳಲ್ಲಿ ಪ್ರೋತ್ಸಾಹದಾಯಕ ದರದಲ್ಲಿ ನೂತನವಾಗಿ ನಾನ್ ಎಸಿ ಸ್ಲೀಪರ್ ಬಸ್‍ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ  ವ್ಯವಸ್ಥಾಪಕ ನಿರ್ದೇಶಕರಾದ ಕೂರ್ಮರಾವ್.ಎಂ. ಅವರು ತಿಳಿಸಿದ್ದಾರೆ.

ಯಾದಗಿರಿಯಿಂದ ಬೆಂಗಳೂರಿಗೆ ಸಂಜೆ 7 ಗಂಟೆಗೆ ಬಸ್ ಹೊರಡಲಿದ್ದು,  ಪ್ರೋತ್ಸಾಹದಾಯಕ ದರ ರೂ.850 ಇರುತ್ತದೆ. ಶಕ್ತಿನಗರದಿಂದ ಬೆಂಗಳೂರಿಗೆ ರಾತ್ರಿ 8.30 ಗಂಟೆಗೆ ಬಸ್ ಹೊರಡಲಿದ್ದು, ಪ್ರೋತ್ಸಾಹದಾಯಕ ದರ 775 ರೂ.ಇರುತ್ತದೆ. ರಾಯಚೂರದಿಂದ ಬೆಂಗಳೂರಿಗೆ ರಾತ್ರಿ 9.30 ಗಂಟೆಗೆ ಬಸ್ ಹೊರಡಲಿದ್ದು, ಪ್ರೋತ್ಸಾಹದಾಯಕ ದರ 750 ರೂ.ಇರುತ್ತದೆ.

ಮಂತ್ರಾಲಯದಿಂದ ಬೆಂಗಳೂರಿಗೆ ರಾತ್ರಿ 10.45 ಗಂಟೆಗೆ ಬಸ್ ಹೊರಡಲಿದ್ದು, ಪ್ರೋತ್ಸಾಹದಾಯಕ ದರ 680  ರೂ.ಹಾಗೂ ಬೆಂಗಳೂರಿನಿಂದ ರಾಯಚೂರಿಗೆ ರಾತ್ರಿ 7.45 ಗಂಟೆಗೆ ಹೊರಡಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.