News

ರೇಷ್ಮೆಬೆಳೆ ಮಾಡಿ ಆರ್ಥಿಕವಾಗಿ ಅಭಿವೃದ್ಧಿಯಾಗಲು ರೈತರಿಗೆ ಸಲಹೆ

22 August, 2020 4:33 PM IST By:

ರೈತರು ಬೈವೋಲ್ಟೇನ್ ಬೆಳೆಗೆ ಪ್ರಾಮುಖ್ಯತೆ ನೀಡಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ರೇಷ್ಮೆ ವಿಜ್ಞಾನಿ ಕೆ.ಎಸ್.ವಿನೋದ ಹೇಳಿದ್ದಾರೆ.

ಅವರು ಕೃಷಿ ವಿಜ್ಞಾನ ಕೇಂದ್ರದಿಂದ ಗಿಡ್ನಹಳ್ಳಿಯ ರೈತ ಚಂದ್ರಶೇಖರ್ ಹುಳು ಸಾಕಾಣಿಕೆ ಮನೆಯಲ್ಲಿ ಹಮ್ಮಿಕೊಂಡಿದ್ದ ಹೊರಾಂಗಣ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೇಷ್ಮೆ (sericulture) ಬೆಳೆಗೆ ಉತ್ಪಾದನೆ ವೆಚ್ಚ ಹಾಗೂ ಅವಧಿಯೂ ಕಡಿಮೆ ಇರುವುದರಿಂದ ರೈತರು ರೇಷ್ಮೆ ಬೆಳೆಯನ್ನು ಬೆಳೆದು ಆರ್ಥಿಕವಾಗಿ ಅಭಿವದ್ಧಿಯಾಗಬೇಕು. ರೇಷ್ಮೆ ಸಾಕಾಣಿಕೆಗೆ ಹಿಪ್ಪುನೇರಳೆ ತೋಟವೇ ಸೂಕ್ತವಾಗಿದೆ. ಸರಕಾರ ನೀಡುವ ಸಹಾಯಧನದಲ್ಲಿ ರೇಷ್ಮೆ ಸಾಕಾಣಿಕೆ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬೇಕು.

ಕೊರೊನಾ ಕಾರಣಕ್ಕೆ ಕುಸಿತಗೊಂಡಿದ್ದ ಗೂಡಿನ ಬೆಲೆ ಇತ್ತೀಚಿನ ದಿನಗಳಲ್ಲಿ ಕೆ.ಜಿ.ಗೆ 100 ಹೆಚ್ಚಾಗಿದೆ. ಸರ್ಕಾರ ಕೆ.ಜಿಗೆ 30 ಬೆಂಬಲ ಬೆಲೆ ಘೋಷಣೆ ಮಾಡಿದೆ. ಉತ್ತಮ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು, ಹುಳು ಸಾಕಾಣಿಕೆ ಮನೆ ಹಾಗೂ ಸೋಂಕು ನಿವಾರಣೆ ಮಾಡುವುದು ಅಗತ್ಯ. ಮನೆಯೊಳಗೆ ಉತ್ತಮ ಗಾಳಿ, ಬೆಳಕು, ಹುಳುವಿನ ಹಂತಕ್ಕೆ ಸೂಕ್ತವಾದ ಉಷ್ಣಾಂಶ ತೇವಾಂಶಗಳ ನಿರ್ವಹಣೆ ಮಾಡಬೇಕು. ಶಿಫಾರಿತ ಹಾಸಿಗೆ ಸೋಂಕು ನಿವಾರಕಗಳ ಬಳಕೆಯಿಂದ ರೈತರು ಬೈವೋಲ್ಟೇನ್ ಹುಳುಗಳನ್ನು ಯಶಸ್ವಿಯಾಗಿ ಸಾಕಾಣಿಕೆ ಮಾಡಬಹುದ. ಈ ರೀತಿ ಸಾಕಾಣಿಕೆ ಉತ್ತಮ ಗುಣಮಟ್ಟದ ಗೂಡಿನ ಅಧಿಕ ಇಳುವರಿ ಪಡೆಯಲು ಸಾಧ್ಯ. ಈ ರೇಷ್ಮೆಯನ್ನು ಬೆಳೆಯುವುದರಿಂದ ಹೆಚ್ಚಿನ ಲಾಭ ಗಳಿಸಬಹುದು ಎಂದರು.

ರೈತರು ರೇಷ್ಮೆ ಇಲಾಖೆ ಅಧಿಕಾರಿಗಳ ನಿರಂತರ ಸಂಪರ್ಕದಲ್ಲಿ ಇದ್ದುಕೊಂಡು ಮಾಹಿತಿ ಪಡೆದುಕೊಂಡು ರೇಷ್ಮೆ ಬೆಳೆಯನ್ನು ಅಭಿವದ್ಧಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.