News

ಚೀಲಗಳಲ್ಲಿ ಮರಳು ಮಾರಾಟ ಮಾಡುವ ಯೋಜನೆಯ ಪ್ರಸ್ತಾವನೆ ಸಿದ್ದವಾಗಿದೆ- ಮುರುಗೇಶ ನಿರಾಣಿ

02 July, 2021 2:18 PM IST By:

ಜನಸಾಮಾನ್ಯರಿಗೆ ಸುಲಭವಾಗಿ ಮರಳು ಲಭಿಸುವುದಕ್ಕಾಗಿ ರಾಜ್ಯದಲ್ಲಿ ಹೊಸ ಮರಳು ನೀತಿಯನ್ನು ಜಾರಿಗೆ ತರಲಾಗುವುದು. ಇದೀಗ ಯೋಜನೆಯ ಪ್ರಸ್ತಾವನೆಯೂ ಸಿದ್ದವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.

ಅವರು ಬುಧವಾರ ವಿಕಾಸಸೌಧದಲ್ಲಿ ಕಲ್ಲು ಗಣಿಗಾರಿಕೆ ಮತ್ತು ಮರಳು ಕುರಿತು ಜಿಲ್ಲಾಧಿಕಾರಿಗಳು, ಉಪ ಅರಣ್ಯ  ಸಂರಕ್ಷಣಾಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳ ಜತೆ ವೀಡಿಯೋ  ಸಂವಾದಲ್ಲಿ ಈ ಹೊಸ ಯೋಜನೆಯನ್ನು ಪ್ರಕಟಿಸಿದ್ದಾರೆ.

ಜನಸಾಮಾನ್ಯರಿಗೆ ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ಒದಗಿಸುವುದಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಜನಸಾಮಾನ್ಯರು ಹಾಗೂ ಎಲ್ಲಾ ವರ್ಗದವರಿಗೂ ಮರಳು ಸಿಗಲಿದ್ದು, ಈ ಯೋಜನೆಯಿಂದಾಗಿ ಮನೆ ಕಟ್ಟುವವರು ಹಾಗೂ ಇತರರಿಗೆ ಸುಲಭ ಮಾರ್ಗಗಳಲ್ಲಿ ಮರಳು ಲಭ್ಯವಾಗಲಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತನ್ನದೆ ಆದ ಸಂಸ್ಥೆಯ ಮೂಲಕ ಗ್ರೇಡಿಂಗ್ ಮಾಡಿ ಚೀಲಗಳಲ್ಲಿ ಮರಳು ಮಾರಾಟ ಮಾಡಲು ನಿರ್ಧರಿಸಿದೆ.

ಗ್ರೇಡ್ ಎ, ಬಿ ಮತ್ತು ಸಿ ಶ್ರೇಣಿ ಎಂದು ವರ್ಗೀಕರಿಸಿ 50 ಕೆಜಿ ಬ್ಯಾಗ್ ನಿಂದ ಹಿಡಿದು ಟನ್ ನಷ್ಟು ಮರಳನ್ನು ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮಾರಾಟ ಮಾಡಲಾಗುವುದು. 50 ಕೆಜಿಯ ಬ್ಯಾಗ್ ಗಳನ್ನು ವಾಹನಗಳಲ್ಲಿ ಸುಲಭವಾಗಿ ಸಾಗಿಸಲು ಅನುಕೂಲವಾಗುತ್ತದೆ. ಇದರಿಂದ ಶೇ. 25-30 ರಷ್ಟು ಮರಳು ಅನುಪಯುಕ್ತವಾಗುವುದು ತಪ್ಪುತ್ತದೆ. ಬ್ಯಾಗುಗಳಲ್ಲಿ ಮರಳು ಸಂಗ್ರಹಿಸಿಟ್ಟರೆ ವರ್ಷಪೂರ್ತಿ ಬಳಕೆ ಮಾಡಬಹುದು.ಜೊತೆಗೆ ಸಾರ್ವಜನಿಕರಿಗೆ ಗುಣಮಟ್ಟದ ಮರಳು ಸಿಗಲಿದೆ ಎಂದಿದ್ದಾರೆ.

ರಾಜ್ಯದ ಐದು ಕಡೆ ಮೊದಲು ಪ್ರಾಯೋಗಿಕವಾಗಿ ಈ ಘಟಕಗಳನ್ನು ಆರಂಬಿಸಲಾಗುವುದು. ಮರಳು ಮಾರಾಟ ಮಾಡಲು ಬ್ಯಾಗ್ ಗಳನ್ನು ಸಿದ್ದಪಡಿಸುವಿಕೆ ಹಾಗೂ ಸಾಗಾಣಿಕೆ ಕುರಿತು ತರಬೇತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.