News

ಕೊಳವೆಬಾವಿಗಳ ಜಲ ಮರುಪೂರಣದಿಂದ ಬರಡು ಭೂಮಿಯಲ್ಲೂ ಬೆಳೆ: ಡಾ ರಾಜಕುಮಾರ ಹಳಿದೊಡ್ಡಿ

04 July, 2021 4:16 PM IST By:

ಕೃಷಿಯು ಮಳೆಯೊಂದಿಗಿನ ಜೂಜಾಟವಾಗಿದ್ದು, ಇತ್ತೀಚಿನ ದಿನಗಳಲ್ಲಂತೂ ಮಳೆಯ ಅನಿಶ್ಚಿತತೆಯು ಕೃಷಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೆಲವೊಮ್ಮೆ ನಿರಂತರವಾಗಿ ಸುರಿಯುವ ಮಳೆ, ಬೆಳೆಗಳನ್ನು ಹಾಳುಮಾಡಿದರೆ, ಮತ್ತೆ ಕೆಲವೊಮ್ಮೆ ಮಳೆ ಬಾರದೆ ಬಿತ್ತಿದ ಬೆಳೆಗಳೆಲ್ಲವೂ ಒಣಗಿ ಹೋಗುತ್ತವೆ. ಹೀಗಾಗಿ ರೈತರು ಮಳೆ ನೀರು ಸಂರಕ್ಷಣೆಗೆ ಒತ್ತು ನೀಡುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಅದರಲ್ಲೂ ಜಲ ಮರುಪೂರಣ ವ್ಯವಸ್ಥೆಯ ಮೂಲಕ ಕೊಳವೆ ಬಾವಿಗಳಿಗೆ ಮರು ಜೀವ ನೀಡುವುದರಿಂದ ರೈತರಿಗೆ ಸಾಕಷ್ಟು ಅನುಕುಲಗಳಿವೆ.

ಈ ನಿಟ್ಟಿನಲ್ಲಿ ಬೀದರ್‌ನ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ‘ಮಣ್ಣು ಮತ್ತು ನೀರು ಸಂರಕ್ಷಣಾ ತಾಂತ್ರಿಕತೆ ಹಾಗೂ ಕೊಳುವೆ ಬಾವಿ (ಬೋರವೆಲ್) ಮರುಪೂರಣ ಮಾಡುವ ವಿಧಾನ’ ಕುರಿತು ಜುಲೈ 3ರಂದು ರೈತರಿಗಾಗಿ ಆನ್‌ಲೈನ್ ಕಾರ್ಯಾಗಾರ ಆಯೋಜಿಸಲಾಗಿತ್ತು. ಅನ್ನದಾತ ರೈತರ ಅನುಕೂಲಕ್ಕಾಗಿ ಬೀದರ್ ಕೃಷಿ ವಿಜ್ಞಾನ ಕೇಂದ್ರವು ಪ್ರತಿ ಶನಿವಾರ ಆಯೊಜಿಸುತ್ತಾ ಬಂದಿರುವ ಸರಣಿ ತರಬೇತಿ ಕಾರ್ಯಕ್ರಮ ‘ಕೆವಿಕೆ-ಕೃಷಿ ಪಾಠ ಶಾಲೆ’ ಅಡಿಯಲ್ಲಿ 9ನೇ ವಾರದ ಪಾಠವಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಬೀದರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸುನೀಲಕುಮಾರ ಎನ್.ಎಂ ಅವರು, ಬದಲಾಗುತ್ತಿರುವ ಹವಾಮಾನದ ಪರಿಣಾಮ ಆಕಾಲಿಕ ಹಾಗೂ ಅಸಮಾನ ಮಳೆಯ ವಿತರಣೆಯು ಈ ಹೊತ್ತಿನಲ್ಲಿ ರೈತರು ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿದೆ. ಬಿದ್ದ ಮಳೆ ನೀರು ಹರಿದು ಹೋಗಲು ಬಿಡದೆ ಅದನ್ನು ಭೂಮಿಯಲ್ಲಿ ಇಂಗಿಸಲು ಹಾಗೂ ಕೊಳವೆ ಬಾವಿಗಳ ಜಲ ಮರುಪೂರಣ ಮಾಡಲು ಇದು ಸಕಾಲವಾಗಿದೆ. ಹೀಗಾಗಿ ಮಣ್ಣು ಮತ್ತು ಮಳೆ ನೀರು ಸಂರಕ್ಷಣೆ ಹಾಗೂ ಕೊಳವೆ ಬಾವಿಗಳಿಗೆ ಜಲ ಮರುಪೂರಣ ಮಾಡುವ ಕುರಿತು ರೈತರಿಗೆ ಮಾಹಿತಿ ನೀಡುವ ಉದ್ದೇಶದಿಂದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.

ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೆಶನಾಲಯದಲ್ಲಿ ಸಹಾಯಕ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿರುವ ಮಣ್ಣು ಮತ್ತು ನೀರು ತಜ್ಞರಾದ ಡಾ. ರಾಜಕುಮಾರ ಹಳಿದೊಡ್ಡಿ ಅವರು ವಿಷಯ ಮಂಡನೆ ಮಾಡಿದರು. ಈ ವೇಳೆ ಮಣ್ಣಿನ ಸವಕಳಿ ಹಾಗೂ ಹಳ್ಳಗಳ ಕೊರಕಲು ತಡೆಯಲು ಇರುವಂತಹ ವಿಧಾನಗಳು, ಮಣ್ಣು ಸಂರಕ್ಷಣೆ ವಿಧಾನಗಳಲ್ಲಿ ಬೇಸಾಯ ಹಾಗೂ ತಾಂತ್ರಿಕ ಕ್ರಮಗಳು, ಚೌಕಮಡಿ, ಏರುಮಡಿ ಪದ್ಧತಿ, ಸಸ್ಯ ಹೊದಿಕೆ ಬಳಕೆ, ಕೃಷಿ ಹೊಂಡಗಳ ನಿರ್ಮಾಣ, ಮನೆಯಲ್ಲಿ ಮೇಲುಛಾವಣಿ ನೀರುಕೊಯ್ಲು ಹಾಗೂ ಹೊಲಗಳಲ್ಲಿ ಮಳೆ ನೀರು ಕೊಯ್ಲು ಮಾಡುವ ವಿಧಾನಗಳನ್ನು ಸಚಿತ್ರ ಹಾಗೂ ವಿಡಿಯೋಗಳ ಮೂಲಕ ಅವರು ವಿವರಿಸಿದರು.

‘ಮಳೆ ನೀರು ಸಂರಕ್ಷಣೆಯು ಕೃಷಿಯ ಮೂಲ ಅಗತ್ಯವಾಗಿದ್ದು, ಸೂಕ್ತ ವಿಧಾನಗಳನ್ನು ಅನುಸರಿಸುವ ಮೂಲಕ ಮಳೆ ನೀರನ್ನು ಸಂರಕ್ಷಿಸುವ ಕಾರ್ಯವನ್ನು ರೈತರು ಒಂದು ಜವಾಬ್ದಾರಿಯಂAತೆ ನಿರ್ವಹಿಸಬೇಕು. ಕೃಷಿ ಭೂಮಿಯಲ್ಲಿರುವ ಕೊಳವೆ ಬಾವಿಗಳ ಸುತ್ತ ಜಲ ಮರುಪೂರಣ ವ್ಯವಸ್ಥೆ ಮಾಡುವುದರಿಂದ ಬೋರ್‌ವೆಲ್‌ಗಳಿಗೆ ಮರು ಜೀವ ನೀಡಿದಂತಾಗುತ್ತದೆ. ಹೀಗೆ ಮಾಡುವುದರಿಂದ ಬೇಸಿಗೆಯಲ್ಲೂ ಕೃಷಿ ಉಪಯೋಗಕ್ಕೆ ನೀರು ಲಭ್ಯವಾಗುತ್ತದೆ. ಇದರಿಂದ ರೈತರು, ನೀರಿನ ಸಮಸ್ಯೆಯಿಂದ ಉಳುಮೆ ಮಾಡದೆ ಬಿಟ್ಟ ಬರಡು ಭೂಮಿಯಲ್ಲೂ ಬೆಳೆ ಬೆಳೆಯಲು ಅವಕಾಶ ಸಿಗಲಿದೆ,’ ಎಂದು ಡಾ. ರಾಜಕುಮಾರ ಹಳಿದೊಡ್ಡಿ ಅವರು ಮಾಹಿತಿ ನೀಡಿದರು.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ವಿಜ್ಞಾನಾಧಿಕಾರಿಗಳಾದ ಡಾ. ಅರುಣಕುಮಾರ ಹೊಸಮನಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ಬೀದರ್ ಕೃಷಿ ವಿಜ್ಞಾನ ಕೇಂದ್ರವು ಆಯೋಜಿಸಿಕೊಂಡು ಬರುತ್ತಿರುವ ‘ಕೆವಿಕೆ ಕೃಷಿ ಪಾಠ ಶಾಲೆ’ ಸರಣಿ ಕಾರ್ಯಕ್ರಮವು ಉತ್ತಮವಾಗಿ ಮೂಡಿಬರುತ್ತಿದೆ. ಕೃಷಿ ವಿಜ್ಞಾನ ಕೇಂದ್ರವು ಈ ಕಾರ್ಯಕ್ರಮದ ಮೂಲಕ ರೈತರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುತ್ತಿದೆ. ಈ ಸರಣಿ ಕಾರ್ಯಕ್ರಮವನ್ನು ಇನ್ನುಳಿದ ಕೃಷಿ ವಿಜ್ಞಾನ ಕೇಂದ್ರಗಳಲ್ಲೂ ಅಳವಡಿಸಿಕೊಳ್ಳುತ್ತಿದ್ದು, ಇದೊಂದು ಮಾದರಿ ಕಾರ್ಯಕ್ರಮವಾಗಿದೆ ಎಂದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದ ರೈತ ಬಾಂಧವರು ತರಬೇತಿಯ ಕೊನೆಯಲ್ಲಿ ತಮ್ಮ ಹೊಲದಲ್ಲಿಯ ಸಮಸ್ಯತ್ಮಾಕ ಚಿತ್ರಗಳನ್ನು ಶೇರ್ ಮಾಡಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊAಡರು. ಯಲಬುರ್ಗದ ಬಾಬಾಸಾಬ, ಕ¯ಬುರಗಿಯ ಆಲಗೂಡ ಮತ್ತು ಕೇಸರಟಗಿ ಗ್ರಾಮಗಳ ಸತೀಶ ಮತ್ತು ಹರ್ಷ, ಬೆಂಗಳೂರಿನ ಪ್ರದೀಪ ಸೇರಿ 75 ರೈತರು ಈ ಆನ್‌ಲೈನ್ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಚರ್ಚೆಯಲ್ಲಿ ಭಾಗಿಯಾಗಿದ್ದರು.