News

ರಾಜ್ಯದಲ್ಲಿ ಜುಲೈ 28ರವರೆಗೆ ಭಾರಿ ಮಳೆ ಸಾಧ್ಯತೆ-ಮತ್ತೇ ಪ್ರವಾಹ ಭೀತಿ

24 July, 2021 9:09 PM IST By:

ಕೇರಳ-ಕರ್ನಾಟಕದ ಕರಾವಳಿ ಪ್ರದೇಶದಲ್ಲಿನ ಕಡಿಮೆ ಒತ್ತಡದ ಕಾರಣದಿಂದಾಗಿ ಜುಲೈ.28ರವರೆಗೆ ವಿವಿಧೆಡೆ ಭಾರೀ ಮಳೆಯಾಗಲಿದೆ. ಜುಲೈ.25ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಜುಲೈ.25ರಿಂದ ಜುಲೈ.28ರವರೆಗೆ ಕೆಲವು ಕಡೆ ಮಾತ್ರ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಜುಲೈ.25ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆ, ಮತ್ತೊಮ್ಮೆ ಪ್ರವಾಹ ಭೀತಿ

ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆ ಆಗುತ್ತಿದ್ದು, ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. 2019ರಲ್ಲಿ ಉಂಟಾಗಿದ್ದ ನೆರೆಯ ನೋವನ್ನು ಮರೆಯುವ ಮುನ್ನವೇ ಮತ್ತೊಮ್ಮೆ ಸಂಕಷ್ಟದ ಪರಿಸ್ಥಿತಿ ಬಂದೊದಗುವ ಆತಂಕ ಇಲ್ಲಿನ ಜನರಲ್ಲಿ ಮನೆ ಮಾಡಿದೆ.

ತಾಲ್ಲೂಕಿನ ದರೂರ ಬಳಿಯ ಮುಖ್ಯ ಸೇತುವೆ ಮುಳುಗುವ ಹಂತದಲ್ಲಿದೆ. ನೂರಾರು ಎಕರೆ ಜಮೀನುಗಳಿಗೆ ನೀರು ನುಗಿದ್ದು, ಬೆಳೆ ಕಳೆದುಕೊಳ್ಳುವ ಭೀತಿ ರೈತರದಾಗಿದೆ. ತೀರ್ಥ, ನದಿಇಂಗಳಗಾವ, ಸಪ್ತಸಾಗರ, ದರೂರ, ಹುಲಗಬಾಳಿ, ಅವರಖೋಡ, ಹಲ್ಯಾಳ ತೋಟದ ವಸತಿಗಳಲ್ಲಿರುವ ಜನರು ಮನೆಗಳನ್ನು ಖಾಲಿ ಮಾಡಿ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.

ತತ್ತರಿಸಿದ ಉತ್ತರ ಕನ್ನಡ; ಕಾಳಿ‌ ನದಿ‌ ಮುನಿಸಿಗೆ ಹತ್ತಾರು ಗ್ರಾಮಗಳು ಜಲಾವೃತ

ಉತ್ತರಕನ್ನಡ ಜಿಲ್ಲೆಯಲ್ಲಿ ಉಂಟಾದ ಪ್ರವಾಹಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಜಿಲ್ಲೆಯಲ್ಲಿ ಹಿಂದೆಂದೂ ಕಂಡರಿಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಲವು ಮನೆಗಳು ನೀರುಪಾಲಾಗಿವೆ. ಕಷ್ಟಪಟ್ಟು ದುಡಿದು ಸಂಗ್ರಹಿಸಿದ ಬೇಳೆ ಕಾಳುಗಳು ನೀರು ಪಾಲಾದರೇ, ಮನೆಯಲ್ಲಿನ ಬಟ್ಟೆಬರೆಗಳನ್ನ ಕಳೆದುಕೊಂಡ ನಾಗರಿಕರು ತಮ್ಮ ಜೀವವನ್ನ ರಕ್ಷಿಸಿಕೊಳ್ಳಲು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಕೃಷ್ಣಾನದಿ ಪ್ರವಾಹ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರಿಂದ ನದಿತೀರದ ಗ್ರಾಮಗಳಲ್ಲಿ ಜಿಲ್ಲಾಡಳಿತವು ಹಗಲಿರುಳು ಕಟ್ಟೆಚ್ಚರದ ವ್ಯವಸ್ಥೆ ಮಾಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡ (ಎನ್‌ಡಿಆರ್‌ಎಫ್‌)ಗಳು ಜಿಲ್ಲೆಗೆ ಬಂದಿದ್ದು, ಲಿಂಗಸುಗೂರು ತಾಲ್ಲೂಕಿನ ಜಲದುರ್ಗ, ರಾಯಚೂರು ತಾಲ್ಲೂಕಿನ ಕುರ್ವಕಲಾ ಹಾಗೂ ದೇವದುರ್ಗ ತಾಲ್ಲೂಕಿನ ನದಿತೀರದಲ್ಲಿ ನಿಗಾ ವಹಿಸಿದ್ದಾರೆ. ಪ್ರವಾಹವು ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಮುನ್ಸೂಚನೆ ಅರಿತು ತಂಡಗಳು ಕಾರ್ಯಪ್ರವೃತ್ತವಾಗಲಿವೆ.

‍ಪ್ರವಾಹಮಟ್ಟವು ಸದ್ಯ 3.7 ಲಕ್ಷ ಕ್ಯುಸೆಕ್‌ ಇದ್ದು, 5 ಲಕ್ಷದವರೆಗೂ ಏರಿಕೆಯಾದರೆ ಲಿಂಗಸುಗೂರು ತಾಲ್ಲೂಕಿನ ನಡುಗಡ್ಡೆ ಜನರನ್ನು ಸ್ಥಳಾಂತರಿಸಬೇಕಾಗುತ್ತದೆ. ಈಗಾಗಲೇ ಜಿಲ್ಲಾಡಳಿತದ ಅಧಿಕಾರಿಗಳು ನಡುಗಡ್ಡೆ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆತರಲು ಮನವರಿಕೆ ಮಾಡುವ ಕೆಲಸ ಆರಂಭಿಸಿದ್ದಾರೆ. ಅಲ್ಲದೆ, ಅಗತ್ಯ ದಿನಸಿ ವಸ್ತುಗಳನ್ನು ಪೂರೈಸಲು ವ್ಯವಸ್ಥೆ ಮಾಡುವ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.