News

ಕೃಷಿಯಲ್ಲಿ ನೀರು ಮತ್ತು ಮಣ್ಣು ಸಂರಕ್ಷಣಾ ತಾಂತ್ರಿಕತೆ ಕುರಿತು ತರಬೇತಿ ಸೆ.27ರಂದು

26 September, 2021 3:19 PM IST By:

ಕೋಲಾರದ ಐಸಿಏಆರ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ, ಜಲಶಕ್ತಿ ಅಭಿಯಾನದ ಅಂಗವಾಗಿ ‘ಕೃಷಿಯಲ್ಲಿ ನೀರು ಮತ್ತು ಮಣ್ಣು ಸಂರಕ್ಷಣಾ ತಾಂತ್ರಿಕತೆ’ ಕುರಿತು ಆನ್‌ಲೈನ್ ತರಬೇತಿ ಕಾರ್ಯಾಗಾರ, ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕೃಷಿಯಲ್ಲಿ ನೀರು ಮತ್ತು ಮಣ್ಣು ಎರಡು ಪ್ರಮುಖ ಹಾಗೂ ಮೂಲ ಘಟಕಗಳಾಗಿದ್ದು, ಇವೆರಡರ ಸಂರಕ್ಷಣೆ ಅತಿ ಮುಖ್ಯವಾಗಿದೆ. ಹೀಗಾಗಿ ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಇರುವ ತಾಂತ್ರಿಕತೆಗಳ ಕುರಿತು ರೈತ ಸಮುದಾಯಕ್ಕೆ ಮಾಹಿತಿ ನೀಡುವ ಉದ್ದೇಶದಿಂದ ಈ ಆನ್ ಲೈನ್ ಕಾರ್ಯಾಗಾರ ಆಯೋಜಿಸಲಾಗಿದೆ. ಸೆಪ್ಟೆಂಬರ್ 27ರಂದು ಸೋಮವಾರ ಬೆಳಗ್ಗೆ 10.30ಕ್ಕೆ ಸರಿಯಾಗಿ ಕಾರ್ಯಾಗಾರವು ಆರಂಭವಾಗಲಿದೆ.

ಬೆAಗಳೂರು ಕೃಷಿ ವಿಶ್ವವಿದ್ಯಾಲಯದ ಬೇಸಾಯಶಾಸ್ತç ಪ್ರಾಧ್ಯಾಪಕರಾಗಿರುವ ಡಾ.ಎಂ.ಎನ್.ತಿಮ್ಮೇಗೌಡ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ಇಂದಿನ ದಿನಗಳಲ್ಲಿ ನೀರು ಮತ್ತು ಮಣ್ಣಿನ ಸಂರಕ್ಷಣೆಯ ಮಹತ್ವ, ಪ್ರಸ್ತುತ ಬಳಕೆಯಲ್ಲಿರುವ ಮಣ್ಣು ಮತ್ತು ನೀರಿನ ಸಂರಕ್ಷಣಾ ತಾಂತ್ರಿಕತೆಗಳು, ಅವುಗಳ ಬಳಕೆ ಅಥವಾ ಅಳವಡಿಕೆಯಿಂದ ಕೃಷಿಕರಿಗೆ ಆಗಲಿರುವ ಪ್ರಯೋಜನಗಳ ಕುರಿತು ರೈತರಿಗೆ ಮಾಹಿತಿ ನೀಡಲಿದ್ದಾರೆ.

ಗೂಗಲ್ ಮೀಟ್ ವೇದಿಕೆಯಲ್ಲಿ ತರಬೇತಿ ಕಾರ್ಯಾಗಾರವು ನಡೆಯಲಿದ್ದು, ಆಸಕ್ತ ರೈತರು https://meet.google.com/qma-esbc-ssc ಈ ಲಿಂಕ್ ಬಳಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹೆಚ್ಚಿನ ಸಂಖ್ಯೆಯ ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಹಿತಿ ಪಡೆಯುವ ಮುಲಕ ತಮ್ಮ ಕೃಷಿ ಭೂಮಿಯಲ್ಲಿ ನೀರಿನ ಸದುಪಯೋಗ ಮಾಡಿಕೊಳ್ಳುವ ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಾರ್ಯಾಗಾರದ ಸಂಯೋಜಕರು ಹಾಗೂ ಕೋಲಾರ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ಅನಿಲ್ ಕುಮಾರ್ ಎಸ್. ಅವರು ವಿನಂತಿ ಮಾಡಿದ್ದಾರೆ.

ನೀರು ಪೋಲಾಗುವಿಕೆ ತಡೆ

ನೀರಿಲ್ಲದೆ ಕೃಷಿ ಅಸಾಧ್ಯ. ಹೀಗಾಗಿ ನೀರನ್ನು ವ್ಯರ್ಥವಾಗಿ ಪೋಲು ಮಾಡದೆ, ಸಂರಕ್ಷಣೆ ಮಾಡುವುದು ಬಹಳ ಮುಖ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಭೂಮಿಗಳಲ್ಲಿ ನೀರು ಸಾಕಷ್ಟು ವ್ಯರ್ಥವಾಗುತ್ತಿದೆ. ಅದರಲ್ಲೂ ನೀರಾವರಿ ಜಮೀನುಗಳಲ್ಲಿ ನೀರಿನ ಸಂರಕ್ಷಣೆಗೆ ರೈತರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ. ಜಮೀನಿನ ಸುತ್ತ ಬದುಗಳ ನಿರ್ಮಾಣ, ಏಡಿ-ಇಲಿಗಳು ಕೊರೆಯುವ ಓರು ಅಥವಾ ಕೊರಕಲುಗಳ ಮೂಲಕ ಜಮೀನಿನಿಂದ ನೀರು ಹರಿದು ಪೋಲಾಗುವುದನ್ನು ತಡೆಯಲು ಕ್ರಮ ಕೈಗೊಳ್ಳುವುದು, ಅಗತ್ಯವಿರುವಷ್ಟು ಪ್ರಮಾಣದ ನೀರನ್ನು ಮಾತ್ರ ಬೆಳೆಗಳಿಗೆ ನೀಡುವುದು ಸೇರಿ ಹಲವು ಕ್ರಮಗಳ ಮೂಲಕ ನಿರನ್ನು ಸಂರಕ್ಷಿಸುವ ಅಗತ್ಯವಿದೆ.

ಮಣ್ಣಿನ ಸವಕಳಿಗೆ ಕಾರಣ

ಮುಖ್ಯವಾಗಿ ರಭಸವಾಗಿ ಹರಿಯುವ ನೀರು, ಜೋರಾಗಿ ಬೀಸುವ ಗಾಳಿಯಿಂದಾಗಿ ಮಣ್ಣಿನ ಸವಕಳಿ ಉಂಟಾಗುತ್ತದೆ. ಕೃಷಿ ಭೂಮಿಯು ತಗ್ಗು ದಿಣ್ಣೆಗಳಿಂದ ಕೂಡಿದ್ದರೆ ಮತ್ತು ಹೆಚ್ಚುತ್ತಿರುವ ಬೇಸಾಯದ ಒತ್ತಡದಿಂದಲೂ ಭೂಮಿ ಸವಕಳಿ ಸಂಭವಿಸಬಹುದು. ಇದರೊಂದಿಗೆ ಅವೈಜ್ಞಾನಿಕ ಬೇಸಾಯ ಪದ್ಧತಿ, ನಾಶವಾಗುತ್ತಿರುವ ಸಸ್ಯ, ಹುಲ್ಲಿನ ಕವಚ, ಅನಿಶ್ಚಿತತೆಯಿಂದ ಕೂಡಿದ ಮಳೆಯಿಂದಾಗಿಯೂ ಭೂಮಿ ಮೇಲ್ಪದರ ನಾಶವಾಗಿ ಫಲವತ್ತತೆ ಕಳೆದುಕೊಳ್ಳುತ್ತದೆ. ಇದರಿಂದ ಭೂ ಸವಕಳಿ, ನೀರು ಮತ್ತು ಸಸ್ಯ ಪೋಷಕಾಂಶಗಳ ನಷ್ಟ, ಇಳುವರಿ ಕುಂಠಿತಗೊಳ್ಳುವುದು, ಹಳ್ಳ, ಕೆರೆ, ಕುಂಟೆ, ಅಣೆಕಟ್ಟುಗಳು, ಬಂದರುಗಳಲ್ಲಿ ಹೂಳು ತುಂಬುವಿಕೆ ಸೇರಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಇದರೊಂದಿಗೆ ಬಹುತೇಕ ಕೃಷಿ ಭೂಮಿಗಳಲ್ಲಿ ಬೋರ್‌ವೆಲ್‌ಗಳಿದ್ದರೂ ಅವುಗಳ ಬಳಿ ಜಲ ಮರುಪೂರಣಕ್ಕೆ ವ್ಯವಸ್ಥೆ ಮಾಡದ ಕಾರಣ ಮಳೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಾಗಾರವು ರೈತರಿಗೆ ನೆರವಾಗಲಿದೆ. ಈ ಕುರಿತ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಮೊ: 97431 96196 ಸಂಖ್ಯೆಗೆ ಕರೆ ಮಾಡುವಂತೆ ಕೋಲಾರದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳು ಮನವಿ ಮಾಡಿದ್ದಾರೆ.

ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಮೊದಲು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಗೂಗಲ್ ಮೀಟ್ ಅಪ್ಲಿಕೇಷನ್ (ಆ್ಯಪ್) ಅನ್ನು ಡೌನ್‌ಲೋಡ್ ಮಾಡಿಕೊಂಡು, ಬಳಿಕ ಮೇಲೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ತರಬೇತಿಯಲ್ಲಿ ಭಾಗವಹಿಸಬಹುದು.

ಸೂಚನೆಗಳು: ಗೂಗಲ್ ಮೀಟ್ ವೇದಿಕೆಗೆ ಹಾಜರಾದ ಕೂಡಲೇ ಸದಸ್ಯರು ತಮ್ಮ ಆಡಿಯೋ ಮತ್ತು ವಿಡಿಯೋವನ್ನು ಮ್ಯೂಟ್ ಮಾಡಬೇಕು. ತರಬೇತಿ ಆರಂಭದಲ್ಲಿ ‘ಪ್ರಸೆಂಟ್ ನೌ’ ಮೇಲೆ ಕ್ಲಿಕ್ ಮಾಡದೆ, ‘ಆಸ್ಕ್ ಟು ಜಾಯಿನ್’ ಮೇಲೆ ಒತ್ತಬೇಕು.