News

ಈರುಳ್ಳಿ ಬೆಲೆ ದಿಡೀರನೆ ಕುಸಿತ- ಸಂಕಷ್ಟದಲ್ಲಿ ರೈತರು

01 April, 2021 9:16 PM IST By:
Onion

ಇತ್ತೀಚೆಗೆಉತ್ತಮ ಸ್ಥಿತಿಯಲ್ಲಿದ್ದ ಈರುಳ್ಳಿ ಬೆಲೆ ದಿಡೀರನೆ ಕುಸಿತವಾಗಿದ್ದರಿಂದ ರೈತರು ಕಣ್ಣೀರು ಹಾಕುವಂತೆ ಮಾಡಿದೆ. ಆರು ತಿಂಗಳ ಹಿಂದೆ ಗಗನಕ್ಕೇರಿದ ಬೆಲೆ ಈಗ ದಿಡೀರನೆ ಪಾತಾಳಕ್ಕೆ ಕುಸಿದಿದೆ.

  ಕಳೆದ ವರ್ಷ ಮಳೆಯಿಂದಾಗಿ ರೋಗ ಹೆಚ್ಚಾಗಿ ಈರುಳ್ಳಿ ಬೆಳೆಗಾರರು ತೊಂದರೆ ಅನುಭಿಸಿದ್ದರು. ಸಾಕಷ್ಟು ಹಾನಿಯೂ ಆಗಿತ್ತು. ಈ ವರ್ಷ ಇಳುವರೆಯೇನೋ ಹೆಚ್ಚಿಗೆ ಬಂದಿದೆ. ಆದರೆ ದಿಡೀರನೆ ಬೆಲೆ ಕುಸಿತದಿಂದಾಗಿ ರೈತರನ್ನು ಕಂಗಾಲಾಗಿದೆ. ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ಸಂಕಷ್ಟಕ್ಕೀಡಾಗುವ ರೈತ ದಿಡೀರನೆ ಬೆಲೆ ಕುಸಿತದಿಂದಾಗಿ ಅಪಾರ ಹಾನಿ ಅನುಭವಿಸುತ್ತಿದ್ದಾನೆ.

ಈರುಳ್ಳಿ ಬೆಳೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಗಲು ರಾತ್ರಿ ಬೆವರು ಸುರಿಸಿ ಇನ್ನೇನು ಬಂಗಾರದ ಬೆಲೆ ಬರಬಹುದು. ಮಾಡಿದ ಸಾಲ ತೀರಿಸಿಕೊಳ್ಳಬಹುದು ಎಂದು ಆಸೆಯಲ್ಲಿರುವಾಗಲೇ ಬೆಲೆಯು ಗಾಯದ ಮೇಲೆ ಬರೆ ಎಳೆಯುತ್ತದೆ. ಇದರಿಂದಾಗಿಯೇ ರೈತರು ಕೃಷಿಯ ಕಡೆ ಮುಖ ಮಾಡಲು ಹಿಂಜರಿಯುತ್ತಾರೆ. ಕಷ್ಟ ಪಡುವುದಕ್ಕೆ ಹಿಂಜರಿಯುವುದಿಲ್ಲ. ಆದರೆ ಸಮರ್ಪಕ ಬೆಲೆ ಸಿಗದೆ ಹಾನಿಯಾಗುವುವುದರಿಂದ ತಮ್ಮ ಶ್ರಮಕ್ಕಾದರೂ ಬೆಲೆ ಸಿಗಬಾರದೆ ಎಂಬ ಚಿಂತೆಯಲ್ಲಿದ್ದಾರೆ.

ರೈತರು ಹೊಲ ಅರಗಿ ಬಿತ್ತುವಾಗ ಮೊಳಕೆಯೊಡೆಯುವ ಕಾಳುಗಳನ್ನು ನೋಡಿ ಸಂತೋಷ ಪಡುತ್ತಾನೆ. ಈ ವರ್ಷವಾದರೂ ಬಂಗಾರದ ಬೆಲೆ ಬರುತ್ತದೆ ಎಂದು ದಿನನಿತ್ಯ ಹೊಲಕ್ಕೆ ಹೋಗಿ ಭೂ ತಾಯಿಯನ್ನು ಬೇಡಿಕೊಳ್ಳುತ್ತಾನೆ. ಕಳೆತೆಗೆದು ಬೆಳೆಗಳಿಗೆ ತಗಲುವ ರೋಗಕ್ಕೆ ಔಷದಿ ಹೊಡೆದು ರಾಶಿ ಮಾಡಿ ಈ ವರ್ಷವಾದರೂ ಒಳ್ಳೆಯ ಬೆಲೆ ಸಿಗುತ್ತದೆ. ಕೈತುಂಬಾ ಕಾಸು ಸಿಗುತ್ತದೆ ಎಂದು ಕನಸು ಕಾಣುವ ಮುನ್ನವೇ ದಿಡೀರ್ ಬೆಲೆ ಕುಸಿತದಿಂದಾಗಿ ರೈತರ ಕನಸು ನುಚ್ಚುನೂರಾಗುತ್ತದೆ.

ಮಾರುಕಟ್ಟೆಯಲ್ಲಿ ಆವಕ ಹೆಚ್ಚಾಗಿದ್ದರಿಂದಲೇ ಬೆಲೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಕಳೆದ ತಿಂಗಳು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ  ಕ್ವಿಂಟಾಲಿಗೆ 2500 ರೂಪಾಯಿ 4000 ರೂಪಾಯಿಗೆ ಹೋಗಿತ್ತು. ಈಗ 1000 ದಿಂದ 12 ರೂಪಾಯಿಗೆ ಇಳಿದಿದೆ. ಇನ್ನೂ ಬೆಲೆ ಇಳಿಕೆಯಾಗಬಹುದು ಎನ್ನಲಾಗುತ್ತಿದೆ. ಏಕೆಂದರೆ ಈಗ ಈರುಳ್ಳಿ ಕಟಾವು ಹಂತದಲ್ಲಿದೆ. ಈಗಲೇ ದರ ಇಳಿಕೆಯಿಂದ ಕಂಗಾಲಾಗಿರುವ ರೈತರಿಗೆ ಮುಂದೆ ಇನ್ನೂ ಸಂಕಷ್ಟ ಎದುರಾಗಬಹುದು.

ತರಕಾರಿ ಬೆಲೆ ಕುಸಿದಾಗ ಏಕೆ ಸರ್ಕಾರವು ಬೆಂಬಲ ಬೆಲೆ ಘೋಷಿಸಿ ಖರೀದಿಸುವುದಿಲ್ಲ. ಇಲ್ಲಿಯೂ ರೈತರು ಕಷ್ಟಪಟ್ಟು ದುಡಿಯುತ್ತಾರೆ. ರೈತರ ಕಷ್ಟಕ್ಕೆ ಬೆಲೆ ಕೊಟ್ಟು ಕೂಡಲೇ ಸರ್ಕಾರವು ಸಮರ್ಪಕ ಬೆಂಬಲ ಬೆಲೆ ಘೋಷಿಸಿ ರೈತರ ಕೈಹಿಡಿಯಲಿದೆ ಎಂಬ ಆಶಯ ರೈತರಲ್ಲಿದೆ. ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರಿಂದ ಖರೀದಿ ಮಾಡಲಿ ಎಂಬ ರೈತರ ಒತ್ತಾಯವಾಗಿದೆ.