News

ಕಿಸಾನ್ ಸಮ್ಮಾನ್‌ ಯೋಜನೆಯಡಿ 50 ಲಕ್ಷ ರೈತರಿಗೆ 1 ಸಾವಿರ ಕೋಟಿ‌ ರೂ. ಬಿಡುಗಡೆ: ಕೃಷಿ ಸಚಿವ ಬಿಸಿ ಪಾಟೀಲ್

16 August, 2020 9:55 PM IST By:

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ (kisan samman) ಯೋಜನೆಯ 1 ಸಾವಿರ ಕೋಟಿ ರೂಪಾಯಿಗಳನ್ನು 50 ಲಕ್ಷ ರೈತರಿಗೆ ಬಿಡುಗಡೆಯಾಗಿದ್ದು, ಕಳೆದ ಶನಿವಾರದಿಂದ ರೈತರ (Farmer) ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದೆ ಎಂದು ಕೃಷಿ ಸಚಿವ  ಬಿಸಿ ಪಾಟೀಲ್ ಹೇಳಿದರು.

ಅವರು ಫೇಸ್‌ಬುಕ್ ಲೈವ್‌ನಲ್ಲಿ (Facebook live) ರಾಜ್ಯದ ರೈತ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಸಚಿವರು,ರೈತ ಬಾಂಧವರು ತಮ್ಮ ಖಾತೆಯನ್ನು ಪರಿಶೀಲಿಸಬೇಕೆಂದು ಮನವಿ ಮಾಡಿದ್ದಾರೆ.

2019-20ನೇ ಸಾಲಿನ ಬೆಳೆ ವಿಮೆ (crop insurance) ಮಂಗಳವಾರದಿಂದ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದ್ದು, ವಿಮೆಗಾಗಿ ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗುವುದಾಗಲೀ ಚಿಂತಿಸುವ ಅವಶ್ಯಕತೆಯಿಲ್ಲ. ಸರ್ಕಾರ ಮತ್ತು ಇಲಾಖೆ ಎಂದಿಗೂ ರೈತರೊಂದಿಗೆ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದ ಅವರು, ಇಲಾಖೆಯ ವೃಂದ ಮತ್ತು ನೇಮಕಾತಿ ಪ್ರಕ್ರಿಯೆಗೆ ನಿಯಮಗಳ ಕರಡು ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಆದಷ್ಟು ಬೇಗ ರೈತಮಿತ್ರರ (raita mitra) ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.

ಅಲ್ಲದೇ ರಾಜ್ಯದಲ್ಲಿ ಯೂರಿಯಾ ಗೊಬ್ಬರಕ್ಕೆ ಯಾವುದೇ ಕೊರತೆಯಿಲ್ಲ. ಕಳೆದ ಸಾಲಿಗಿಂತ ಈ ವರ್ಷ ಶೇ.25 ರಷ್ಟು ಹೆಚ್ಚಿನದಾಗಿ ಬಿತ್ತನೆಯಾಗಿದೆ. ಆದ್ದರಿಂದ ಈ ವರ್ಷ 65 ಸಾವಿರ ಮೆಟ್ರಿಕ್ ಟನ್ ಯೂರಿಯಾ ಹೆಚ್ಚಿನದಾಗಿ ಪೂರೈಕೆಯಾಗುತ್ತಿದೆ. ಈ ವಾರ 37 ಸಾವಿರ ಟನ್ ಯೂರಿಯಾ ಸರಬರಾಜು ಆಗುತ್ತಿದೆ ಎಂದರು.

ಯಾವುದೇ ರಾಸಾಯನಿಕ ಔಷಧಿಯಾಗಲಿ, ರಸಗೊಬ್ಬರವನ್ನಾಗಲಿ ಅಗತ್ಯಕ್ಕೆ, ಅವಶ್ಯಕತೆಗೆ ಮೀರಿ ಬಳಸಬಾರದು. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಸಿದ್ದಲ್ಲಿ ಭೂಮಿಯ ಫಲವತ್ತತೆ ಕ್ಷೀಣಿಸುವ ಸಾಧ್ಯತೆ ಇದೆ ಎಂದರು.