News

ಭದ್ರಾ ಜಲಾಶಯದಿಂದ ಮೇಲ್ದಂಡೆ ಯೋಜನೆಗೆ ನೀರು ಹರಿಸಲು ಆಗದು: ಕಾಡಾ ಅಧ್ಯಕ್ಷೆ

20 July, 2021 8:14 PM IST By:

ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವ ಕುರಿತು ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದಾರೆ. ಆದರೆ, ಮುಖ್ಯಮಂತ್ರಿಗಳ ಮೇಲೆ ರಾಜಕೀಯ ಒತ್ತಡ ತರುವ ಮೂಲಕ ಈ ಆದೇಶ ನೀಡುವಂತೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣದ ಬಗ್ಗೆ ಶಾಸಕರು, ಸಂಸದರ ಗಮನಕ್ಕೆ ತಂದಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಮೇಲ್ದಂಡೆ ಯೋಜನೆಗೆ ನಿರು ಹರಿಸಲು ಆಗದು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಸ್ಪಷ್ಟಪಡಿಸಿದರು.

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆಗೆ ನೀರು ಹರಿಸಿದರೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಿನ ಕೊರತೆಯಾಗಲಿದ್ದು, ಅವರು ಪ್ರತಿಭಟನೆ ಮಾಡುವ ಸಾಧ್ಯತೆ ಇದೆ. ಆದ ಕಾರಣ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುತ್ತಿರುವುದನ್ನು ತಕ್ಷಣದಿಂದ ನಿಲ್ಲಿಸಬೇಕು ಎಂದು ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿAiÀರ್‌ಗೆ ಪತ್ರ ಬರೆದಿದ್ದೇನೆ. ರೈತರ ಹಿತದೃಷ್ಟಿಯಿಂದ ಅಗತ್ಯವಿರುವ ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದು, ರೈತ ಸಂಘದ ಗಮನಕ್ಕೂ ತಂದಿದ್ದೇನೆ ಎಂದರು.

ಇದು ನೀರಾವರಿಗೆ ಸಂಬAಧಿಸಿದ ವಿಷಯ. ಈಗಾಗಲೇ ಭದ್ರಾ ಎಡದಂಡೆ ಹಾಗೂ ಬಲದಂಡೆ ಭಾಗದ ರೈತರರಿಗೆ ಮಳೆಗಾಲದ ಬೆಳೆ ಬೆಳೆಯಲು ನೀರು ಹರಿಸಲು ನಿರ್ಧರಿಸಲಾಗಿದೆ. ಆದರೆ, ಕೆಲ ಜನಪ್ರತಿನಿಧಿಗಳು ನೇರವಾಗಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದಿದ್ದಾರೆ. ಅವರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿಗಳು ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆಗಳಿಗೆ ನೀರು ಹರಿಸುವಂತೆ ಆದೇಶ ಹೊರಡಿಸಿದ್ದಾರೆ. ಅದರಂತೆ, ಜಲಾಶಯದ ಎಂಜಿನಿಯರ್‌ಗಳು ಈಗಾಗಲೇ ಕಾಲುವೆಗೆ ನೀರು ಹರಿಸಿದ್ದಾರೆ. ಇದು ಹಈಗೇ ಮುಂದುವರಿದರೆ ಎಡ ಹಾಗೂ ಬಲದಂಡೆ ಭಾಗದ ರೈತರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಅಲ್ಲದೆ, ಸದ್ಯದ ಸ್ಥಿತಿಯಲ್ಲಿ ಜಲಾಶಯದಲ್ಲಿ ಮೇಲ್ದಂಡೆಗೆ ಹರಿಸುವಷ್ಟು ನೀರಿಲ್ಲ. ಒಂದೊಮ್ಮೆ ತುಂಗಾ ಯೋಜನೆಯಿಂದ ಭದ್ರಾ ಜಲಾಶಯಕ್ಕೆ ನೀರು ನೀಡಿದರೆ ಮೇಲ್ದಂಡೆ ಕಲುವೆಗಳಿಗೆ ನೀರು ಹರಿಸಲು ಸಮಸ್ಯೆ ಆಗುವುದಿಲ್ಲ. ಹೀಗಾಗಿ ಸದ್ಯ ನೀರು ಹರಿಸುವುದನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.

ನೀರು ಹರಿಸದಿರಲು ಸಭೆ ನಿರ್ಧಾರ:

ರೈತ ಸಂಘದ ಮುಖಂಡರು ಹಾಗೂ ಸಮಿತಿ ಸದಸ್ಯರಾದ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಇನ್ನೂ 2.5 ಲಕ್ಷ ಎಕರೆ ಮುಂಗಾರು ಹಂಗಾಮಿನ ಬೆಳೆಗೆ ನಾವು ನೀರು ಹರಿಸಿಲ್ಲ. ಸರ್ಕಾರದ ಆದೇಶ ಬಂದ ನಂತರ ನೀರಾವರಿ ಸಲಹಾ ಸಮಿತಿ ಸಭೆಯನ್ನೂ ಕರೆಯದೇ ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ತಮ್ಮ ಕೈಯಲ್ಲೇ ಬೀಗ ಇದೆ ಎಂದು ನೀರು ಹರಿಸುತ್ತಿರುವುದು ಸರಿಯಲ್ಲ. ಇದು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ. ಮೇಲ್ದಂಡೆ ರೈತರಿಗೆ ನೀರು ಕೊಡಬಾರದು ಎಂದಲ್ಲ. ಅದಕ್ಕೆ ಒಂದು ರೀತಿ-ನೀತಿ ಇದೆ. ಸೌಹಾರ್ಧಯುತವಾಗಿ ಚರ್ಚೆ ಮಾಡಿ ನೀರು ಬಿಡುವ ನಿರ್ಧಾರ ಆಗಬೇಕು. ಸರ್ವಾಧಿಕಾರಿ ಧೋರಣೆಯಿಂದ ನೀರು ಪಡೆಯುವಂತೆ ಆಗಬಾರದು ಎಂದು ಅಭಿಪ್ರಾಯಪಟ್ಟರು.

ಜಲಾಶಯಕ್ಕೆ ತುಂಗಾ ಯೋಜನೆಯ ನೀರು ಹರಿದು ಬಂದ ಬಳಿಕವಷ್ಟೇ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆಗಳಿಗೆ ಭದ್ರಾ ಜಲಾಶಯದಿಂದ ನೀರನ್ನು ಹರಿಸಬೇಕು. ನಮ್ಮ ರೈತರು ತೋಟ, ಬೆಳೆ ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಹೀಗಿರುವಾಗ ಮೇಲ್ದಂಡೆ ಯೋಜನೆಗೆ ನೀರು ಹರಿಸಿದರೆ ಭದ್ರಾ ಎಡದಂಡೆ ಹಾಗೂ ಬಲದಂಡೆ ರೈತರಿಗೆ ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುತ್ತದೆ. ಆದ್ದರಿಂದ ರೈತರ ಹಿತದೃಷ್ಟಿಯಿಂದ ತತ್‌ಕ್ಷಣದಿಂದಲೇ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಬೇಕೆಂದು ಸಭೆ ನಿರ್ಧಾರ ಕೈಗೊಂಡು, ಸರ್ಕಾರಕ್ಕೆ ಕಳುಹಿಸಬೇಕು ಎಂದು ಬಸವರಾಜಪ್ಪ ಹೇಳಿದರು. ಸಭೆಯಲ್ಲಿ ಭಾಗವಹಿಸಿದ್ದ ಸರ್ವ ಸದಸ್ಯರು ಈ ನಿರ್ಣಯಕ್ಕೆ ಸಮ್ಮತಿ ಸೂಚಿಸಿದರು.

ತುಂಗಾ ನೀರು ನೀಡಿ

ಭದ್ರಾ ಮೇಲ್ದಂಡೆ ಯೋಜನೆ ಡಿಯಲ್ಲಿ ಬರುವ ಕಾಲುವೆಗಳಿಗೆ ತುಂಗಾ ಯೋಜನೆಯಿಂದ 17 ಟಿಎಂಸಿ ಹಾಗೂ ಭದ್ರಾ ಯೋಜನೆಯಿಂದ 12.5 ಟಿಎಂಸಿ ನೀರು ನೀಡಬೇಕು ಎಂಬ ಕಾರಾರು ಇದೆ. ಆದರೆ ಭದ್ರಾ ಜಲಲಾಶಯದಲ್ಲಿ ನೀರಿನ ಅಭಾವ ಇರುವ ಹಿನ್ನೆಲೆಯಲ್ಲಿ ಒಟ್ಟಾರೆ 29.5 ಟಿಎಂಸಿ ನೀರನ್ನು ತುಂಗಾ ನದಿಯಿಂದಲೇ ಲಿಫ್ಟ್ ಮಾಡಿ ಭದ್ರಾ ಮೇಲ್ದಂಡೆ ಯೋಜನೆಗೆ ನೀಡುವಂತೆ ಸರ್ಕಾರ ಹೊಸ ಡಿಪಿಆರ್ ರಚಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ನಿರ್ಧರಿಸಲಾಯಿತು.