News

ನಿವಾರ್ ಚಂಡಮಾರುತದ ಅಬ್ಬರ ತಗ್ಗಿದ್ದರೂ ಕರ್ನಾಟಕದಲ್ಲಿ ಮುಂದುವರೆಯಲಿದೆ ಮಳೆ

27 November, 2020 7:12 AM IST By:

ರಾಜ್ಯದಲ್ಲಿ ನಿವಾರ್ ಚಂಡಮಾರುತದ ಅಬ್ಬರ ತಗ್ಗಿದ್ದರೂ ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗುರುವಾರ ಇಡೀ ದಿನ ಜಿಟಿಜಿಟಿ ಮಳೆಯಾದರೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರವಿತ್ತು. ಅಲ್ಲದೆ ಇಡೀ ದಿನ ಶೀತ ಹವೆ ಜನರನ್ನು ಕಾಡಿತು

ಈಗಾಗಲೇ ನಿವಾರ್ ಚಂಡಮಾರುತದ ಪರಿಣಾಮವಾಗಿ ರಾಜ್ಯದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಮಳೆಯಾಗಿದ್ದು, ನವೆಂಬರ್ 28 ರವರೆಗೆ  ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ನವೆಂಬರ್ 27 ರಂದು ಯೆಲ್ಲೋ ಅಲರ್ಟ್ ಮುಂದುವರೆಯಲಿದೆ.

ಬೆಳಗ್ಗೆಯಿಂದ ಆರಂಭವಾದ ಜಿಟಿಜಿಟಿ ಮಳೆ ರಾತ್ರಿಯವರೆಗೂ ಮುಂದುವರೆಯಿತು. ಬೆಳಗ್ಗೆಯಿಂದಲೇ ಮಳೆ ಸುರಿದರಿಂದ ಕೆಲಸಕ್ಕೆ ಹೋಗುವ ಉದ್ಯೋಗಿಗಳಿಗೆ ಸ್ವಲ್ಪ ತೊಂದರೆಯಾಯಿತು.ಬೆಂಗಳೂರು ಗ್ರಾಮಾಂತರ, ಮೈಸೂರು, ಹಾಸನ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ತುಮಕೂರು, ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಜಿಲ್ಲೆಯ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿತ್ತು.

ಯೆಲ್ಲೋ ಅಲರ್ಟ್ ಮುಂದುವರಿಕೆ:

ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ನ. 27 ರಂದು ಯೆಲ್ಲೋ ಅಲರ್ಟ್ ಮುಂದುವರಿದರೆ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ಮಲೆಯಾಗಲಿದೆ.