News

ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಯೋಜನೆ ಸೆ. 5 ರಂದು ಉದ್ಘಾಟನೆ

04 September, 2021 9:40 PM IST By:

ರೈತರ ಮಕ್ಕಳಿಗೆ ಭರ್ಜರಿ ಸಿಹಿಸುದ್ದಿ: ರೈತರ ಮಕ್ಕಳಿಗೆ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆಪ್ಟೆಂಬರ್ 5 ರಂದು ಬೆಳಗ್ಗೆ 10 ಗಂಟೆಗೆ ಲೋಕಾರ್ಪಣೆ ಮಾಡಲಿದ್ದಾರೆ.

ಸದರಿ ಕಾರ್ಯಕ್ರಮದ ನೇರ ವೀಕ್ಷಣೆಗಾಗಿ ಕೃಷಿ ಇಲಾಖೆಯಿಂದ ಎಲ್ಲಾ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ  ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ರೈತ ಬಾಂಧವರು ಈ ಕಾರ್ಯಕ್ರಮ ವೀಕ್ಷಿಸಲು ಈ ವ್ಯವಸ್ಥೆ ಮಾಡಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ರವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರದಲ್ಲಿ ರೈತರ ಮಕ್ಕಳಿಗೆ ಹೊಸ ಶಿಷ್ಯವೇತನವನ್ನು ಪ್ರಕಟಿಸಿದ್ದರು. ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಯೋಜನೆ ಜಾರಿಗೆ ತರುವ ಬಗ್ಗೆ ಹೇಳಿದ್ದರು. ಈಗ ಈ ಯೋಜನೆಯನ್ನು ಉದ್ಘಾಟಿಸಲಾಗುತ್ತಿದೆ.
2021-22ನೇ ಆರ್ಥಿಕ ವರ್ಷದ ಸಾಲಿನಿಂದ ಜಾರಿಗೆ ಬರುವಂತೆ ಈ ಮುಂದಿನ ಪಟ್ಟಿಯಲ್ಲಿ ವಿವರಿಸಿರುವಂತೆ ಸ್ಕಾಲರ್‌ಶಿಪ್‌ ಹಣದ ಮೊತ್ತವನ್ನು ವಾರ್ಷಿಕ ಶಿಷ್ಯವೇತನ ರೂಪದಲ್ಲಿ ಒಗದಿಸಲು ಮತ್ತು ಪಾವತಿಸಲು ಸರ್ಕಾರದ ಅನುಮೋದನೆ ದೊರೆತಿದೆ.

ಎಸ್.ಎಸ್.ಎಲ್.ಸಿ. (SSLC) ಅಥವಾ 10ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳವರೆಗೆ ಪ್ರವೇಶವನ್ನು ಪಡೆದಿರುವ ಕರ್ನಾಟಕ ರಾಜ್ಯದ ರೈತರ ಎಲ್ಲಾ ಮಕ್ಕಳ ಬ್ಯಾಂಕ್‌ಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT – Direct Benefit Transfer) ಪದ್ಮತಿಯ ಮೂಲಕ 2021-22ನೇ ಆರ್ಥಿಕ ವರ್ಷದ ಸಾಲಿನಿಂದ ಜಾರಿಗೆ ಬರುವಂತ ಶಿಷ್ಯ ವೇತನದ ಹಣದ ಮೊತ್ತವನ್ನು ವಾರ್ಷಿಕ ಶಿಷ್ಯ ವೇತನ (Scholarship) ರೂಪದಲ್ಲಿ ಒದಗಿಸಲು ಮತ್ತು ಪಾವತಿಸಲು ಸರ್ಕಾರವು ಅನುಮೋದನೆಯನ್ನು ನೀಡಿದೆ.

ಷರತ್ತುಗಳು

ಈ ರೈತರ ಮಕ್ಕಳು ಕರ್ನಾಟಕ ರಾಜ್ಯದ ಅನುದಾನದಿಂದ ಪಾವತಿಸುವಂತಹ ಒಂದು ಶಿಷ್ಯವೇತನಕ್ಕೆ ಮಾತ್ರ ಅರ್ಹರಾಗುತ್ತಾರೆ. ಆದರೆ, ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರಾಂಕ್ ಇತ್ಯಾದಿಗಳ ಆಧಾರದ ಮೇಲೆ ಪಡೆಯುವ ಶಿಷ್ಯವೇತನ / ಪ್ರಶಸ್ತಿ (award)/ ಪ್ರತಿಫಲ (reward) – ಇವುಗಳನ್ನು ರೈತರ ಮಕ್ಕಳು ಪಡೆದಿದ್ದರೂ, ಈ ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ. ರೈತರ ಮಕ್ಕಳ ತಂದೆ-ತಾಯಿ ಇಬ್ಬರೂ ಕೃಷಿ ಜಮೀನಿನ ಒಡೆಯರಾಗಿದ್ದರೆ, ಈ ಯೋಜನೆಯಲ್ಲಿ ಒಂದು ಶಿಷ್ಯವೇತನಕ್ಕೆ ಮಾತ್ರ ರೈತರ ಮಕ್ಕಳು ಅರ್ಹರಾಗಿರುತ್ತಾರೆ.

ರೈತರ ಮಕ್ಕಳಿಗೆ ಶಿಷ್ಯವೇತನ ಐತಿಹಾಸಿಕ: ತೇಲ್ಕೂರ

 ಕಲಬುರಗಿ ಆ 9: ರೈತರ ಮಕ್ಕಳಿಗೆ ಶಿಷ್ಯವೇತನ ನೀಡುವ ಹಾಗೂ ಇದಕ್ಕಾಗಿ 1000 ಕೋ.ರೂ ಮೀಸಲಿಡುವ ಹೊಸ ಕಾರ್ಯಕ್ರಮ ಐತಿಹಾಸಿಕವಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹಾಗೂಸೇಡಂಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಹೇಳಿದ್ದಾರೆ.

ರಾಜ್ಯ ಸರ್ಕಾರದ ಹೊಸ ಶಿಷ್ಯ ವೇತನ ಉನ್ನತ ಶಿಕ್ಷಣ ಪಡೆಯಲು ಪ್ರೇರಣೆ ನೀಡುತ್ತದೆ.ಪಿಯುಸಿಗೆ 2500 ರೂ. ಪದವಿಗೆ 5000 ಹಾಗೂ ಪ್ಯಾರಾ ಮೆಡಿಕಲ್ ಕೋರ್ಸುಗಳಿಗೆ 7500 ಮತ್ತು ಸ್ನಾತಕೋತ್ತರ ಪದವಿಗೆ 10000 ರೂ ನೀಡಲಾಗುತ್ತಿದೆ. ವಿದ್ಯಾರ್ಥಿ ನಿಯರಿಗೆ ತಲಾ ಪದವಿಯಲ್ಲಿ 500 ರೂ ಹೆಚ್ಚಳದ ಶಿಷ್ಯವೇತನ ನೀಡುವ ಯೋಜನೆ ಇದಾಗಿದೆ.ಕೃಷಿ ಪದವಿಯಲ್ಲಿ ಈಗಾಗಲೇ ರೈತರ ಮಕ್ಕಳಿಗೆ ಶೇ.50 ರಷ್ಟು ಸೀಟುಗಳು ಮೀಸಲಿಟ್ಟಿರುವ ರಾಜ್ಯ ಸರ್ಕಾರ ಇದೀಗ ಮತ್ತೊಂದು ಕೊಡುಗೆ ರೈತ ಸಮುದಾಯಕ್ಕೆ ನೀಡಿದೆ.
ಈಗಾಗಲೇ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ ಸಮ್ಮಾನ ನಿಧಿ ಯೋಜನೆ ಅಡಿ ರೈತರಿಗೆ ವಾರ್ಷಿಕ ಆರು ಸಾವಿರ ಜತೆಗೆ ರಾಜ್ಯ ಸರ್ಕಾರ ನಾಲ್ಕು ಸಾವಿರ ರೂ.ಆರ್ಥಿಕ ಸಹಾಯ ಕಲ್ಪಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಒಟ್ಟಾರೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತನ ಸಬಲತೆಗೆ ಪರಿಣಾಮಕಾರಿ ಯೋಜನೆ ರೂಪಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.