News

ಕನ್ನಡಿಗರಿಗೇ ಶೇ 70ರಷ್ಟು ಉದ್ಯೋಗ-20 ಲಕ್ಷ ಉದ್ಯೋಗ ಸೃಷ್ಟಿಗೆ ಅವಕಾಶ

24 July, 2020 12:02 PM IST By:

ಕೊರೋನಾ ಮಹಾಮಾರಿ ಬಹುತೇಕ ಎಲ್ಲಾ ವಲಯಗಳಲ್ಲಿ ಉದ್ಯೋಗ ಕಸಿದುಕೊಂಡಿದ್ದರಿಂದ ನಿರಾಶೆಯಲ್ಲಿರುವ ಯುವಜನತೆಗೆ ರಾಜ್ಯ ಸರ್ಕಾರ ತೆಗೆದುಕೊಂಡ ಕೈಗಾರಿಕಾ ನೀತಿಯಿಂದ ಹೊಸ ಭರವಸೆ ಮೂಡಿದೆ.

ಬಹುನಿರೀಕ್ಷಿತ ಹೊಸದಾಗಿ ಸ್ಥಾಪನೆಗೊಳ್ಳುವ ಕೈಗಾರಿಕೆಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ 70 ರಿಂದ ಶೇ 100 ರಷ್ಟು ಆದ್ಯತೆ ನೀಡುವ ‘ಹೊಸ ಕೈಗಾರಿಕಾ ನೀತಿ 2020–25ಕ್ಕೆ (New industry policy) ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

 ಆದರೆ ಈ ಕೈಗಾರಿಕೆ ನೀತಿಗೆ ಕಾನೂನು ರೂಪ ಸಿಕ್ಕರೆ ಮಾತ್ರ ಅನುಷ್ಠಾನಕ್ಕೆ ಬರುತ್ತದೆ ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿದೆ. ಈಗಾಗಲೇ ಇರುವ ಕೈಗಾರಿಕೆಗಳಲ್ಲಿ ಈ ನೀತಿ ಕಾರ್ಯರೂಪಕ್ಕೆ ತರುತ್ತಾರೋ ಅಥವಾ ಹೊಸದಾಗಿ ಆರಂಭವಾಗುವ ಉದ್ಯಮಗಳಿಗೆ ಮಾತ್ರ ಅನ್ವಯಿಸುತ್ತಾರೋ ಎಂಬುದರ ಬಗ್ಗೆ ಉಲ್ಲೇಖ ಮಾಡಿಲ್ಲ. ಕೊರೋನಾ ಕಾರಣದಿಂದಾಗಿ ಹಲವಾರು ಜನರು ಉದ್ಯೋಗ ಕಳೆದಕೊಂಡಿದ್ದಾರೆ. ನಿರುದ್ಯೋಗಿಗಳಿಗೆ ಕೆಲಸ ,ಸಿಕ್ಕರೆ ಸಾಕು ಎಂಬ ಆಶಾಭಾವನೆ ಬಹುತೇಕ ಜನರಲ್ಲಿದೆ.

ಹೊಸ ಕೈಗಾರಿಕಾ ನೀತಿ 2020–25’ಕ್ಕೆ ರಾಜ್ಯಸಚಿವ ಸಂಪುಟ ಸಭೆ (The Karnataka cabinet) ಗುರುವಾರ ಒಪ್ಪಿಗೆ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌(Large and Medium scale industries Minister Jagadish Shetter),  ರಾಜ್ಯದಲ್ಲಿ ಸ್ಥಾಪನೆಗೊಳ್ಳುವ ಉದ್ಯಮಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂಬ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ (5 lakh crore investment), 20 ಲಕ್ಷ ಉದ್ಯೋಗಾವಕಾಶ ಸೃಷ್ಟಿಯ ಗುರಿ ಹೊಂದಲಾಗಿದೆ ಎಂದರು.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಬಿಟ್ಟು ರಾಜ್ಯದ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಹೆಚ್ಚಿನ ಆದ್ಯತೆ ನೀಡಿದ್ದೇವೆ. ವಿಶೇಷವಾಗಿ ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕೈಗಾರಿಕಾ ಘಟಕಗಳ ಸ್ಥಾಪನೆಗಾಗಿ ಮೂರು ವಲಯಗಳನ್ನು ರಚಿಸಲಾಗುವುದು. ಇಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವವರಿಗೆ ವಿವಿಧ ರೀತಿಯ ವಿನಾಯ್ತಿಗಳು, ಸಬ್ಸಿಡಿಮತ್ತು ಪ್ರೋತ್ಸಾಹ ಧನ ನೀಡುವ ಅಧಿಕಾರವನ್ನು ಮುಖ್ಯಮಂತ್ರಿ ಅಧ್ಯಕ್ಷತೆಯ ಉಪಸಮಿತಿಗೆ ನೀಡಲಾಗಿದೆ ಎಂದು ವಿವರಿಸಿದರು.

ವಿಶೇಷ ಹೂಡಿಕೆ ವಲಯ: ಧಾರವಾಡ, ಗದಗ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳು ಹಾಗೂ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡ ವಿಶೇಷ ಹೂಡಿಕೆ (special investment) ವಲಯಗಳನ್ನು ಸ್ಥಾಪಿಸಲಾಗುವುದು.

ರಾಜ್ಯದಲ್ಲಿ ತಮಿಳುನಾಡು ಮಾದರಿಯಲ್ಲಿ ಖಾಸಗಿಯವರೂ ‘ಕೈಗಾರಿಕಾ ಪಾರ್ಕ್‌’ (Industrial park) ಸ್ಥಾಪಿಸಲೂ ಅವಕಾಶ ನೀಡಲಾಗುವುದು. ಉದ್ಯಮಗಳಿಗೆ ಪೂರಕವಾಗಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕೃಷಿ ಭೂಮಿ ಖರೀದಿಗೂ ಅವಕಾಶ ನೀಡಲಾಗಿದೆ. ಇದರಿಂದ ಭೂಮಿ ಖರೀದಿ ಮಾಡಿ ಉದ್ಯಮಗಳನ್ನು ಸ್ಥಾಪಿಸಲು ಅನುಕೂಲವಾಗುತ್ತದೆ ಎಂದು ಶೆಟ್ಟರ್‌ ತಿಳಿಸಿದರು.

ಹೂಡಿಕೆಗೆ (Investment) ಸಹಾಯಧನ:

ಪ್ರತಿವರ್ಷ ಶೇ. 10 ವಹಿವಾಟಿನ ಮೇಲೆ ಗರಿಷ್ಟ 5 ವರ್ಷಗಳಿಗೆ ಅಥವಾ ಶೇ. 20-30 ಸ್ಥಿರಾಸ್ತಿ ಬಂಡವಾಳ ಹೂಡಿಕೆ ಮೇಲೆ ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳಿಗೆ ವಹಿವಾಟು ಆಧಾರಿತ ಬಂಡವಾಳ ಹೂಡಿಕೆ ಸಹಾಯಧನ ನೀಡಲಾಗುವುದು.

ಕನ್ನಡಗರಿಗೆ ಮೀಸಲಾತಿ(Reservation to kannadigas):

ಕೈಗಾರಿಕೆಗಳಲ್ಲಿನ ಗ್ರೂಪ್ ಡಿ ಹುದ್ದೆಗಳಲ್ಲಿ ಶೇ. 100 ರಷ್ಟು ಹಾಗೂ ಇತರೆ ಹುದ್ದೆಗಳಲ್ಲಿ ಶೇ. 70 ರಷ್ಟು ಮೀಸಲಾತಿಗೆ ಕೈಗಾರಿಕೆ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.