News

ಅಂಚೆ ಇಲಾಖೆಯಿಂದ ದೇಶವ್ಯಾಪಿ ಆಪ್ಕೆf ಸಾಥ್ ಅಭಿಯಾನ

20 February, 2021 6:09 PM IST By:
Post office

ಭಾರತೀಯ ಅಂಚೆ ಇಲಾಖೆಯು ದೇಶದ ಎಲ್ಲಾ ನಾಗರಿಕರ ಹಣಕಾಸಿನ ಉನ್ನತಿಗಾಗಿ ‘ಆಪ್‍ಕೆ ಸಾಥ್’ (Aapke Saath) ಎಂಬ ಅಭಿಯಾನವನ್ನು ದೇಶವ್ಯಾಪಿ ಈಗಾಗಲೇ ಫೆಬ್ರವರಿ 1 ರಿಂದ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಗ್ರಾಮೀಣ ನಗರ, ಹಾಗೂ ಪಟ್ಟಣಗಳಲ್ಲಿನ ನಾಗರಿಕರು ಅಂಚೆ ಕಚೇರಿಗಳಲ್ಲಿ ಎಲ್ಲಾ ವಿವಿಧ ಉಳಿತಾಯ ಖಾತೆಗಳನ್ನು ತೆರೆಯಬಹುದಾಗಿದೆ ಎಂದು ಕಲಬುರಗಿ ವರಿಷ್ಠ ಅಂಚೆ ಅಧಿಕಾರಿಗಳಾದ ಬಿ.ಆರ್. ನನಜಗಿ ಅವರು ತಿಳಿಸಿದ್ದಾರೆ.

ಅಂಚೆ ಇಲಾಖೆಯು ಕೊರೋನಾ ಸಂಕಷ್ಟ ಕಾಲದಲ್ಲಿ ದೇಶದ ಜನರ ಹಿತಾಸಕ್ತಿಗಾಗಿ ಶ್ರಮಿಸಿದಂತೆ  ಈಗಲೂ ಸಹ ದೇಶದ ನಾಗರಿಕರ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಿಂದ ಜನರಲ್ಲಿ ಉಳಿತಾಯದ ಮನೋಭಾವ ಬೆಳೆಸುವ ಹಾಗೂ ಅವರ ಹಣಕಾಸಿನ ಸ್ಥಿತಿಯನ್ನು ಉತ್ತಮಪಡಿಸಲು ಸಹಾಯಕವಾಗುತ್ತದೆ.

ಹೀಗಾಗಿ ಸಾರ್ವಜನಿಕರು ಅಂಚೆ  ಕಚೇರಿಗಳಲ್ಲಿ ಖಾತೆಗಳನ್ನು ತೆರೆಯುವುದರ ಮೂಲಕ ನಿಶ್ಚಿತ ಬಡ್ಡಿ ಪಡೆಯುದಾಗಿದೆ. ಅಲ್ಲದೇ, ಚೆಕ್‍ಬುಕ್ ಹಾಗೂ ಎಟಿಎಂ ಕಾರ್ಡ್ ಸೌಲಭ್ಯಗಳನ್ನು  ಉಚಿತವಾಗಿ ಪಡೆಯಬಹುದಾಗಿದೆ. ಹಿರಿಯ ನಾಗರಿಕರು, ಮಹಿಳೆಯರು ಯಾವುದೇ ಬ್ಯಾಂಕಿನಲ್ಲಿ ತಮ್ಮ ಆಧಾರ್ ನಂಬರ್ ನೋಂದಾಯಿತ ಖಾತೆಯಿಂದ ಅಂಚೆ ಸಿಬ್ಬಂದಿ ಮೂಲಕ ಮನೆ ಬಾಗಿನಲ್ಲೇ  ಎಇಪಿಎಸ್ (AEPS) ಮುಖಾಂತರ ಹಣ ಪಡೆಯಬಹುದಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೆಣ್ಣು ಮಕ್ಕಳ ಅಭಿವೃದ್ಧಿ ಹಾಗೂ ಉನ್ನತ ಶಿಕ್ಷಣದ ಕನಸನ್ನು ಈಡೇರಿಸಲು ಈ ಯೋಜನೆ ಜಾರಿಗೆ ತರಲಾಗಿದ್ದು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಹೆಣ್ಣು-ಮಕ್ಕಳು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. 250 ರೂ.ದಿಂದ ಖಾತೆ ಆರಂಭಿಸಿ ವಾರ್ಷಿಕ ಕನಿಷ್ಠ 1000 ರೂ. ದಿಂದ ಗರಿಷ್ಠ 1,50,000 ರೂ.ಗಳನ್ನು ಜಮೆ ಮಾಡಬಹುದಾಗಿದೆ. ಹಿರಿಯ ನಾಗರಿಕರು ಉಳಿತಾಯ ಖಾತೆ ಅಡಿ 15 ಲಕ್ಷ ರೂ.ಗಳ ವರೆಗೆ ಹಣ ಜಮೆ ಮಾಡಬಹುದಾಗಿದೆ. ಪ್ರತಿ ಮೂರು ತಿಂಗಳಿಗೊಂದು ಬಾರಿ ನಿಗದಿತ ಬಡ್ಡಿ ಪಡೆಯಬಹುದಾಗಿದೆ.

ಗಂಡು ಮಕ್ಕಳಿಗಾಗಿ ಭವಿಷ್ಯಕ್ಕಾಗಿ ಪಿಪಿಎಫ್ ಅಕೌಂಟ್ (PPF Account) ಜಾರಿಗೆ ತರಲಾಗಿದ್ದು, 15 ವರ್ಷಗಳ ಕಾಲ ಹೂಡಿಕೆ ಮಾಡಬಹುದಾಗಿದೆ. ಎಂ.ಐ.ಎಸ್. ಅಕೌಂಟ್ (MIS Account) ಅಡಿ ನಿಶ್ಚಿತ ಹಣದ ಹೂಡಿಕೆ ಮಾಡಿ ಪ್ರತಿ ತಿಂಗಳು ನಿಗದಿತ ಬಡ್ಡಿ ಪಡೆಯಬಹುದಾಗಿದೆ. ವಾರ್ಷಿಕ 12 ರೂ. ಜಮೆ ಮಾಡಿ ಒಂದು ವರ್ಷಗಳ ಅಪಘಾತ ವಿಮೆ ಪಡೆಯಬಹುದಾಗಿದೆ.

ಭಾರತೀಯ ಅಂಚೆ ಇಲಾಖೆಯು ಜನರ ಬೇಡಿಕೆಗಳನ್ನು ಪೂರೈಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಸಾರ್ವಜನಿಕರು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.