News

ಅಣಬೆ ಕೃಷಿ ಮಾಡುವವರಿಗೆ ಸುವರ್ಣಾವಕಾಶ-ಶೆಡ್ ನಿರ್ಮಾಣಕ್ಕೆ ಸಹಾಯಧನ

26 August, 2020 3:27 PM IST By:

ಮಳೆಗಾಲದಲ್ಲಿ ನೈಸರ್ಗಿಕವಾಗಿ ಹುಟ್ಟಿಕೊಳ್ಳುವ ಅಣಬೆಗೂ ಈಗ ಮಹತ್ವ ನೀಡಲಾಗುತ್ತಿದ್ದು,  ತಿನ್ನುವ ಆಹಾರವಾಗಿ ಬಳಕೆಯಾಗುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವೇ  ಅಣಬೆ ಕೃಷಿ ಮಾಡುವವರಿಗೆ ಸುವರ್ಣಾವಕಾಶ ನೀಡಿದೆ.

ಕೊರೋನಾ ಲಾಕ್‌ಡೌನ್‌ ನಿಂದ ತತ್ತರಿಸಿದ್ದ ರಾಜ್ಯದ ಜನರ ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜನ ನೀಡುವ ದೃಷ್ಟಿಯಿಂದ ಸರಕಾರ ಇದೀಗ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಅಣಬೆ ಕೃಷಿಗೆ (Mushroom cultivation) ಪ್ರೋತ್ಸಾಹ ನೀಡಲು ಮುಂದಾಗಿದೆ. ಅಣಬೆ ಕೃಷಿ ಮಾಡಲು ಶೆಡ್ ‌ಗಳನ್ನು ಆದ್ಯತೆ ಮೇರೆಗೆ ಎನ್‌ಆರ್‌ಎಲ್‌ಎಂ ಹಾಗೂ ಸ್ವಸಹಾಯ ಗುಂಪುಗಳಿಗೆ ನೀಡಲು ಅವಕಾಶವನ್ನು ಕಲ್ಪಿಸಿದೆ.

ಗ್ರಾಮೀಣ ಭಾಗದಲ್ಲಿ ನಿರುದ್ಯೋಗಿ ಮಹಿಳೆಯರು, ಯುವತಿಯರಿಗೆ ಹಾಗೂ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು ಪೌಷ್ಟಿಕಾಂಶವುಳ್ಳ ಅಣಬೆಯನ್ನು ಬೆಳೆಯುವುದರ ಮೂಲಕ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.  ಈಗಾಗಲೇ ಹಪ್ಪಳ, ಸಂಡಿಗೆ, ದ್ವಿದಳ ಧಾನ್ಯಗಳ ಪ್ಯಾಕಿಂಗ್‌, ನ್ಯಾಪ್ಕೀನ್‌ ಸೇರಿದಂತೆ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವಂತ ಹಲವು ಕಸಬುಗಳಿಗೆ ಸರಕಾರ ಪ್ರೋತ್ಸಾಹ ನೀಡುತ್ತಿದ್ದು, ಇದೇ ಪ್ರಥಮ ಬಾರಿಗೆ ರಾಜ್ಯದೆಲ್ಲಡೆ ಅಣಬೆ ಕೃಷಿಯನ್ನು ಪ್ರೋತ್ಸಾಹಿಸಲು ನರೇಗಾದಲ್ಲಿ ಅವಕಾಶ ಕಲ್ಪಿಸಿದೆ.

ಶೆಡ್‌ ನಿರ್ಮಾಣಕ್ಕೆ ಸಹಾಯಧನ (subsidy for shed):

ಇತ್ತೀಚೆಗೆ ಅಣಬೆ ಬೇಡಿಕೆಯ ಪದಾರ್ಥವಾಗಿದ್ದರಿಂದ ಸರ್ಕಾರ ಅಣಬೆ ಬೆಳೆಯುವ ರೈತರಿಗೆ, ಸ್ವಸಹಾಯ ಗುಂಪುಗಳಿಗೆ  ಶೆಡ್‌ ನಿರ್ಮಾಣಕ್ಕಾಗಿ  ಸಹಾಯಧನ ನೀಡಲು ಮುಂದಾಗಿದೆ.

ಎನ್‌ಆರ್‌ಎಲ್‌ಎಂ ಸ್ವಸಹಾಯ ಗುಂಪುಗಳಿಗೆ ಆದ್ಯತೆ ಮೇರೆಗೆ ಈ ಕಾಮಗಾರಿಯನ್ನು ತೆಗೆದುಕೊಳ್ಳಲು ರಾಜ್ಯದ ಎಲ್ಲ ಜಿಪಂ ಸಿಇಒಗಳಿಗೆ ಸೂಚನೆ ನೀಡಲಾಗಿದ್ದರಿಂದ ತಾಂತ್ರಿಕ ಸಹಾಯಕರು, ತೋಟಗಾರಿಕೆ ಇಲಾಖೆಯವರಿಂದ ಗ್ರಾಪಂವಾರು ಗುರಿ ನಿಗದಿ ಮಾಡಲಾಗುತ್ತದೆ. ಶೆಡ್‌ಗಾಗಿ 95 ಸಾವಿರ ವೆಚ್ಚ ನೀಡಲಾಗುತ್ತದೆ. ನರೇಗಾದಲ್ಲಿ ಶೆಡ್‌ ನಿರ್ಮಾಣವಾಗುವುದರಿಂದ ಸ್ವಸಹಾಯ ಗುಂಪಿನ ಮಹಿಳೆಯರು ನೋಂದಾಯಿತ ಕೂಲಿಕಾರ್ಮಿಕರಿಗೂ ಕೆಲಸ ಸಿಗಲಿದೆ.

ಉದ್ದೇಶ ಏನು?: ಅಣಬೆಯನ್ನು ಆಹಾರಪದಾರ್ಥವಾಗಿ ಬಳಸುವುದರಿಂದ ಹೆಚ್ಚಿನ ಮಹತ್ವ ಇದೆ. ವ್ಯವಸಾಯ ಮೂಲದಿಂದ ಬರುವ ತ್ಯಾಜ್ಯವಸ್ತುಗಳನ್ನು ಬಳಸಿಕೊಂಡು ಮನೆ ಅಂಗಳದಲ್ಲಿಯೇ ಬೆಳೆಯಬಹುದು. ಹೆಚ್ಚಿನ ಭೂಮಿಯ ಅಗತ್ಯವಿಲ್ಲ. ಕಡಿಮೆ ಅವಧಿಯಲ್ಲಿ , ಅತ್ಯಲ್ಪ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದು. ವಿದ್ಯಾವಂತ ನಿರುದ್ಯೋಗಿ ಯುವಕರಿಗೆ, ಮಹಿಳೆಯರಿಗೆ ಅಣಬೆ ಕೃಷಿ ವರದಾನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಕೃಷಿ ವಿಜ್ಞಾನಕೇಂದ್ರ, ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಬಹುದು.