News

ಹಿಂಗಾರು, ಬೇಸಿಗೆ ಹಂಗಾಮಿಗೆ ಬೆಳೆ ನೋಂದಣಿ ಪ್ರಾರಂಭ

04 November, 2020 6:10 AM IST By:

2020-21 ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಹೋಬಳಿ, ಗ್ರಾ.ಪಂ ಮಟ್ಟದಲ್ಲಿ ಅಧಿಸೂಚಿತ ಬೆಳೆಗಳಿಗೆ ನೊಂದಣಿ ಪ್ರಕ್ರಿಯೆ ಪಾರಂಭಿಸಲಾಗಿದೆ

ಈ ಯೋಜನೆಯಡಿ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತಿ/ಸ್ಥಳೀಯ ಸಂಸ್ಥೆಗಳನ್ನು ಘಟಕಗಳನ್ನಾಗಿ ಹಾಗೂ ಇತರೆ ಬೆಳೆಗಳಿಗೆ ಹೋಬಳಿಯನ್ನು ವಿಮಾ ಘಟಕವನ್ನಾಗಿ ಪರಿಗಣಿಸಿ ಅಧಿಸೂಚಿಸಲಾಗಿದೆ. ಜಿಲ್ಲೆಯ ರೈತರು ತಮ್ಮ ಬೆಳೆಗಳ ನೋಂದಣಿ ಮಾಡಿಕೊಂಡು ವಿಮಾ ಸೌಲಭ್ಯ ಬಳಸಿಕೊಳ್ಳಬೇಕು .

ಬಾಗಲಕೋಟೆ ಜಿಲ್ಲೆಗೆ ಬಜಾಜ್ ಅಲಿಯಾಂಜ್ ಇನ್ಸೂರೆನ್ಸ್ ಕಂಪನಿ ಸಂಸ್ಥೆ ಆಯ್ಕೆಯಾಗಿದ್ದು, ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ಅರ್ಹ ಸಾಲ ಪಡೆದ ರೈತರಿಗೆ ಈ ಯೋಜನೆ ಕಡ್ಡಾಯವಾಗಿದ್ದು, ಇತರೆ ರೈತರಿಗೆ ಇದು ಐಚ್ಛಿಕವಾಗಿರುತ್ತದೆ. ಈ ಯೋಜನೆ ಬಿತ್ತನೆ ಕ್ಷೇತ್ರ ಅನುಸಾರವಾಗಿ ವಿಮಾ ಪರಿಹಾರ ವಿಧಾನ ಆಧರಿಸಿದ್ದು, ರೈತರು ತಾವು ಬೆಳೆದ ಬೆಳೆಗಳಿಗೆ ಮಾತ್ರ ವಿಮಾ ಮಾಡಿಸಬೇಕು.

ಹಿಂಗಾರು ಹಂಗಾಮಿನ ಗ್ರಾಮ ಪಂಚಾಯತಿ ಮಟ್ಟದ ಬೆಳೆಗಳಾದ ಕಡಲೆ(ಮ.ಆ) ಬೆಳೆಗೆ ವಿಮೆಗೆ ಒಳಪಡಿಸಲು ಕೊನೆಯ ದಿನ ಡಿಸೆಂಬರ 31, ಜೋಳ (ಮ.ಆ)ಕ್ಕೆ ನವೆಂಬರ 17, ಗೋವಿನ ಜೋಳಕ್ಕೆ (ನೀ)ಕ್ಕೆ ಡಿಸೆಂಬರ 16, ಸೂರ್ಯಕಾಂತಿ (ಮ.ಆ) ಬೆಳೆಗೆ ನವೆಂಬರ 30, ಗೋದಿ (ನೀ) ಡಿಸೆಂಬರ 16 ಕೊನೆಯ ದಿನವಾಗಿದೆ. ಹೋಬಳಿ ಮಟ್ಟದ ಬೆಳೆಗಳಾದ ಕಡಲೆ (ಮ.ಆ, ನೀ) ಡಿಸೆಂಬರ 31, ಹುರುಳಿ (ಮ.ಆ), ಜೋಳ (ನೀ, ಮ.ಆ), ಅಗಸೆ (ಮ.ಆ), ಕುಸುಬೆ (ಮ.ಆ)ಗೆ ನವೆಂಬರ 17, ಗೋವಿನ ಜೋಳ(ನೀ)ಗೆ ಡಿಸೆಂಬರ 16, ಸೂರ್ಯಕಾಂತಿ (ನೀ, ಮ.ಆ) ನವೆಂಬರ 30, ಗೋದಿ (ನೀ) ಡಿಸೆಂಬರ 16, ಗೋದಿ (ಮ.ಆ) ನವೆಂಬರ 30 ಹಾಗೂ ಈರುಳ್ಳಿ (ನೀ)ಗೆ ವಿಮೆ ಒಳವಡಿಸಲು ಡಿಸೆಂಬರ್ 16 ಕೊನೆಯ ದಿನವಾಗಿದೆ.
ಬೇಸಿಗೆ ಹಂಗಾಮಿಗೆ ಗ್ರಾಮ ಪಂಚಾಯತ ಮಟ್ಟದ ಬೆಳೆಗಳಾದ ಸೂರ್ಯಕಾಂತಿ (ನೀ)ಗೆ ಮಾರ್ಚ 1, 2021, ಹೋಬಳಿ ಮಟ್ಟದ ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಈರುಳ್ಳಿ (ನೀ) ಬೆಳೆಗೆ ಮಾರ್ಚ 1, 2021 ಕೊನೆಯ ದಿನವಾಗಿರುತ್ತದೆ. ರೈತರು ಬೆಳೆ ವಿಮೆ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಬ್ಯಾಂಕ್ ಸಿಬ್ಬಂದಿಯನ್ನು ಸಂಪರ್ಕಿಸಬಹುದು.