News

ರಾಜ್ಯದಲ್ಲಿ ತಗ್ಗಿದ ಮಳೆಯಬ್ಬರ; ತಗ್ಗದ ಆತಂಕ

10 August, 2020 10:30 AM IST By:

ರಾಜ್ಯದ ಬಹುತೇಕ ಭಾಗದಲ್ಲಿ ಮುಂಗಾರು (Monsoon) ಮಳೆಯ ಅಬ್ಬರ ಭಾನುವಾರ ತಗ್ಗಿದೆ. ಆದರೆ, ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಜೋರು ಮಳೆಯಾಗುತ್ತಿದೆ. ಜಲಾಶಯಗಳಿಂದ ನದಿಗೆ ನೀರು ಬಿಡುತ್ತಿರುವುದರಿಂದ ರಾಜ್ಯದ ಕೆಲವು ಪ್ರದೇಶಗಳಲ್ಲಿ ಪ್ರವಾಹದ ಆತಂಕ ಮುಂದುವರಿದಿದೆ.

ಕೊಡಗು ಮತ್ತಿ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಳೆದ ವಾರದಿಂದ ಎಡೆಬಿಡದೆ ಸುರಿದ ಧಾರಾಕಾರ ಮಳೆ ಕೊನೆಗೂ ತನ್ನ ಅಬ್ಬರ ತಗ್ಗಿಸಿದೆ. ಮುಳುಗಡೆಗೊಂಡಿದ್ದ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತು ಭಗಂಡೇಶ್ವರ ದೇಗುಲ ಆವರಣದಲ್ಲಿ ನದಿಯ ಹರಿವು ತಗ್ಗಿದೆ. ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ಮಹಿಳೆಯೊಬ್ಬರು ನದಿಗೆ ಬಿದ್ದು ಸಾವನ್ನಪ್ಪಿದರೆ, ಹಾವೇರಿಯಲ್ಲಿ ಯುವಕನೋರ್ವ ನೆರೆಯಲ್ಲಿ ಕೊಚ್ಚಿ ಹೋಗಿದ್ದಾನೆ.

ಆಲಮಟ್ಟಿ ಜಲಾಶಯಕ್ಕೆ ಕೃಷ್ಣಾ ನದಿಯ ಹರಿವು ಮತ್ತಷ್ಟು ಹೆಚ್ಚಿದ್ದು, ಸಂಜೆಯ ವೇಳೆಗೆ 1.80 ಲಕ್ಷ ಕ್ಯುಸೆಕ್‌ಗೆ ಏರಿದೆ. ಜಲಾಶಯಕ್ಕೆ ಭಾನುವಾರ ಒಂದೇ ದಿನ 14.57 ಟಿಎಂಸಿ ಅಡಿ ನೀರು ಹರಿದು ಬಂದಿದೆ. ಜಲಾಶಯದಿಂದ ಶನಿವಾರ ಎಲ್ಲಾ 26 ಗೇಟ್‌ಗಳ ಮೂಲಕ 2.20 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿತ್ತು. ಜಲಾಶಯಕ್ಕೆ ಆಗಸ್ಟ್‌ 6 ರಿಂದ 9ರವರೆಗೆ 44.5 ಟಿಎಂಸಿ ಅಡಿ ನೀರು ಬಂದಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅಬ್ಬರ (Heavy rain) ಕಡಿಮೆಯಾಗಿದೆ. ಸಾಗರದಲ್ಲಿ ಜೋರು ಮಳೆಯಾಗಿದ್ದು, ಗುಡ್ಡ ಕುಸಿದಿ
ರುವ ಕಾರಣ ಅಪಾಯಕಾರಿ ಸ್ಥಳದಲ್ಲಿರುವ ನಂದೋಡಿ ಗ್ರಾಮದ 16 ಕುಟುಂಬಗಳನ್ನು ಸ್ಥಳಾಂತರಿಸುವಂತೆ ತಾಲ್ಲೂಕು ಆಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಸೂಚನೆ ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿ ಸಮೀಪ ನದಿ ಪ್ರವಾಹದಲ್ಲಿ ಸಿಲುಕಿದ್ದ 50 ಮುಸಿಯಗಳನ್ನು ಹಗ್ಗದ ಏಣಿ ‌ ಮೂಲಕ ಅಗ್ನಿಶಾಮಕ, ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ ಸತತ ಮೂರು ದಿನಗಳ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಕಪಿಲಾ ನದಿ ಪ್ರವಾಹ ತಗ್ಗಿದ್ದು, ಮೈಸೂರು-ನಂಜನಗೂಡು ಹೆದ್ದಾರಿ ಭಾನುವಾರ ಸಂಜೆ ಸಂಚಾರಕ್ಕೆ ಮುಕ್ತವಾಯಿತು. ಕಪಿಲೆಯ ಆರ್ಭಟಕ್ಕೆ ಸಿಲುಕಿದ್ದ ನಂಜನಗೂಡು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪ್ರವಾಹ ಇಳಿಯುತ್ತಿದೆ.

ಕೊಡಗಿನಲ್ಲಿ ಕಾರ್ಯಾಚರಣೆ ಮುಂದುವರಿಕೆ: ಕೊಡಗಿನ ಬ್ರಹ್ಮಗಿರಿ ಬೆಟ್ಟ ಕುಸಿದು ನಾಪತ್ತೆಯಾದವರ ಪತ್ತೆಗಾಗಿ ಭಾನುವಾರವೂ ಕಾರ್ಯಾಚರಣೆ ಮುಂದುವರಿಯಿತು. ಎನ್​ಡಿಆರ್​ಎಫ್ ತಂಡದವರು ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ಅವರ ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ನಡೆಸಿದರು.

ನದಿಗೆ ಜಿಗಿದ ಯುವಕರು!: ಬಂಟ್ವಾಳ: ತುಂಬಿ ಹರಿಯುತ್ತಿರುವ ನೇತ್ರಾವತಿ ನದಿಗೆ ಕೆಲವು ಯುವಕರು ಪಾಣೆಮಂಗಳೂರು ಹಳೇ ಸೇತುವೆ ಮೇಲಿಂದ ಹಾರುತ್ತಿರುವ ದೃಶ್ಯ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರವಾಹದ ನೀರಿಗೆ ಒಬ್ಬೊಬ್ಬರಾಗಿಯೇ ಧುಮುಕುವ ಯುವಕರ ಈ ಸಾಹಸ ಪ್ರದರ್ಶನ ನೋಡುಗರಲ್ಲಿ ಆತಂಕ ಹುಟ್ಟಿಸುತ್ತಿದೆ.