News

ಚರ್ಮೋದ್ಯೋಗಿಗಳಿಗೆ ನಿಗದಿಪಡಿಸಿದ್ದ ಪರಿಹಾರಧನ ಪಡೆಯಲು ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

17 June, 2021 5:05 PM IST By:

ಕೊರೊನಾ ಸಾಂಕ್ರಾಮಿಕ ಸೋಂಕಿನ ಎರಡನೇ ಅಲೆಯ ಪರಿಣಾಮದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವೃತ್ತಿನಿರತರು ಹಾಗೂ ಕಾರ್ಮಿಕರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರ ಧನ ಪಡೆಯಲು, ಅರ್ಜಿ ಸಲ್ಲಿಸುವ  ಸಂಬAಧ ಚರ್ಮೋದ್ಯೋಗಿಗಳಿಗೆ ನಿಗದಿಪಡಿಸಿದ್ದ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ.

ಲಿಡ್ಕರ್ ವತಿಯಿಂದ ಕೋವಿಡ್ 19 ಎರಡನೇ ಅಲೆಯ ಪರಿಹಾರ ಮೊತ್ತ 2000 ರೂ. ಪಡೆಯಲು ಅರ್ಜಿ ಸಲ್ಲಿಸುವ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಚರ್ಮ ಹದ ಮಾಡುವ ಕಾಯಕದಲ್ಲಿ ತೊಡಗಿರುವ, ತರಬೇತಿ ಪಡೆದ ಫಲಾನುಭವಿಗಳು, ವಸತಿ ಯೋಜನೆ ಫಲಾನುಭವಿಗಳು ಹಾಗೂ ರಸ್ತೆ ಬದಿಯಲ್ಲಿ ಚರ್ಮೋದ್ಯೋಗದಲ್ಲಿ ನಿರತರಾಗಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಅರ್ಹ ಫಲಾನುಭವಿಗಳು ನಗರಸಭೆ, ಪುರಸಭೆ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ವೃತ್ತಿ ಪ್ರಮಾಣಪತ್ರ ಪಡೆದು, ಅಗತ್ಯವಿರುವ ಇತರೆ ಎಲ್ಲ ದಾಖಲೆಗಳೊಂದಿಗೆ ‘ಸೇವಾ ಸಿಂಧು’ ಆನ್‌ಲೈನ್ ಪೋರ್ಟಲ್‌ನಲ್ಲಿ ಜೂ.30ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರು, ಲಿಡ್ಕರ್, ನೆಹರು ರಸ್ತೆ, ಶಿವಮೊಗ್ಗ, ಮೊ.ಸಂ: 9480886268, 8553370290 ಸಂಪರ್ಕಿಸಬಹುದು ಎಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಪ್ಲೊಮಾ ತರಬೇತಿ

ಬೆಂಗಳೂರಿನ ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯಲ್ಲಿ ಸೈನಿಕರು ಮತ್ತು ಅವರ ಅವಲಂಬಿತರಿಗಾಗಿ ಡಿಪ್ಲೊಮಾ ತರಬೇತಿ (ಎಲೆಕ್ಟ್ರಿಕಲ್) ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು www.powergrid.in ಮೂಲಕ ಆನ್‌ಲೈನ್‌ನಲ್ಲಿ ಜೂನ್ 29ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-23093718, 23093700 ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು (ಪ್ರಭಾರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುರಿ ಮತ್ತು ಮೇಕೆ ಸಾಕಾಣಿಕೆಗೆ ಅರ್ಜಿ

ಶಿವಮೊಗ್ಗ ಜಿಲ್ಲಾ ಕರ್ನಾಟಕ ಕುರಿ ಮತ್ತು ಉಣ್ಣೆ ಆಭಿವೃದ್ಧಿ ನಿಗಮವು ವಿಶೇಷ ಘಟಕ/ಗಿರಿಜನ ಉಪಯೋಜನೆಗಳ ಅಡಿಯಲ್ಲಿ ಕುರಿ/ಮೇಕೆ ಸಾಕಾಣಿಕೆ ಯೋಜನೆಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ನಿಗಮದಲ್ಲಿ ನೋಂದಣಿಯಾಗಿರುವ ಕುರಿ ಮತ್ತು ಉಣ್ಣೆ ಉತ್ಪಾಕದರ ಸಹಕಾರ ಸಂಘಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿರುವ 18ರಿಂದ 60 ವರ್ಷ ವಯೋಮಿತಿಯ ಮಹಿಳಾ ಸದಸ್ಯರು/ ಮಹಿಳಾ ಸದಸ್ಯರು ಇಲ್ಲದಿದ್ದರೆ ಪುರುಷ ಸದಸ್ಯರು ಅರ್ಜಿ ಸಲ್ಲಿಸಬಹುದು. ಹಾಗೇ, ಸಂಘಗಳು ಇಲ್ಲದೇ ಇರುವ ತಾಲೂಕುಗಳಲ್ಲಿ ಕುರಿ ಸಾಕಾಣಿಕೆದಾರರು ಹಾಗೂ ಸಂಚಾರಿ/ಅರೆಸAಚಾರಿ ಕುರಿಗಾರರಿಗೆ ಪರಿಕರ ಕಿಟ್‌ಗಳನ್ನು (ಟೆಂಟ್, ಬ್ಯಾಟರಿ, ರೈನ್‌ಕೋಟ್) ಒದಗಿಸಲು ಸಾಮಾನ್ಯ ವರ್ಗ/ಪ.ಜಾ/ಪ.ಪಂ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತರು ನಿಗಧಿತ ನಮೂನೆ ಅರ್ಜಿಗಳನ್ನು ಆಯಾ ತಾಲೂಕು ಸಹಾಯಕ ನಿರ್ದೇಶಕರುಗಳ ಕಚೇರಿ/ ಕುರಿಗಾರರ ಸಂಘದ ಕಚೇರಿಗಳಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜೂನ್ 30ರ ಒಳಗಾಗಿ ಅದೇ ಕಚೇರಿಗೆ ಸಲ್ಲಿಸುವಂತೆ ನಿಗಮದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ತಾಲೂಕು: 08182-223099, ಭದ್ರಾವತಿ ತಾಲೂಕು: 08282-266462, ಶಿಕಾರಿಪುರ ತಾಲೂಕು: 08187-222474, ಸೊರಬ ತಾಲೂಕು: 08184-272309, ಸಾಗರ ತಾಲೂಕು: 08183-226603, ಹೊಸನಗರ ತಾಲೂಕು: 08185-221353, ತೀರ್ಥಹಳ್ಳಿ ತಾಲೂಕು: 08181-228521 ಸಂಪರ್ಕಿಸುವುದು.

ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆ ಸಿಪೆಟ್ (ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ) ವತಿಯಿಂದ 2021-22ನೇ ಸಾಲಿನ 2ನೇ ವರ್ಷದ (ಲ್ಯಾಟರಲ್ ಎಂಟ್ರಿ) ಡಿಪ್ಲೊಮಾ ಕೋಸ್‌ಗೆ ಅರ್ಜಿ ಅಹ್ವಾನಿಸಲಾಗಿದೆ. 

2 ವರ್ಷಗಳ ಡಿಪ್ಲೊಮಾ ಇನ್ ಪ್ಲಾಸ್ಟಿಕ್ಸ್  ಟೆಕ್ನಾಲಜಿ (ಡಿಪಿಟಿ), 2 ವರ್ಷಗಳ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (ಡಿಪಿಎಂಟಿ) ಕೋಸ್‌ಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಸಿಪೆಟ್ ಸಂಸ್ಥೆಯ ನಿರ್ದೇಶಕರು ಮತ್ತು ಮುಖ್ಯಸ್ಥರಾದ ಆರ್.ಟಿ. ನಾಗರಳ್ಳಿಯವರು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸುವವರು ಪಿಯುಸಿ (ವಿಜ್ಞಾನ) ಅಥವಾ ಐಟಿಐ (ಫಿಟರ್, ಟರ್ನರ್, ಮೆಕಾನಿಸ್ಟ್, ಡ್ರಾಫ್ಟ್ಮ್ಯಾನ್) ಪರೀಕ್ಷೆಯಲ್ಲಿ ಹಾಜರಾಗಿಗುವವರು ಅಥವಾ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ 0821-2510618, 9480253024, 9141075968 ಸಂಪರ್ಕಿಸಬಹುದು ಎಂದು ಆರ್.ಟಿ. ನಾಗರಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.