News

ರೈತರಿಗೆ ಗುಡ್ ನ್ಯೂಸ್ -ಕಿಸಾನ್ ಸುವಿಧಾ ಆ್ಯಪ್‌ ಬಳಸಿ ಕೂತಲ್ಲೇ ಕೃಷಿ ಮಾಹಿತಿ ಪಡೆಯಿರಿ

02 September, 2020 9:27 AM IST By:

ಕೃಷಿ ಭಾರತದ ಅತಿ ದೊಡ್ಡ ಜೀವನಾಧಾರ ವ್ಯವಸ್ಥೆ. ಈಗಾಗಲೇ ಕೃಷಿ ಹಸಿರು, ಹಳದಿ ಹಾಗೂ ನೀಲಿ ಕ್ರಾಂತಿಗಳನ್ನು ಕಂಡಿದೆ, ಈಗ ಮೊಬೈಲ್ ಕ್ರಾಂತಿಯ ಸಮಯ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಹಾಗೂ ಇಂಟರನೆಟ್ ತಂತ್ರಾಂಶಗಳ ಬಳಕೆ ಗ್ರಾಮೀಣ ಭಾಗಗಳಿಗೆ ಅತೀ ವೇಗವಾಗಿ ವ್ಯಾಪಿಸುತ್ತಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಾ, ಕೃಷಿ ಪೂರಕ ಮಾಹಿತಿಗಳು ಸೂಕ್ತ ಸಮಯದಲ್ಲಿ ಮೊಬೈಲ್ ಮೂಲಕ ರೈತರ ಅಂಗೈಯಲ್ಲಿ ಲಭ್ಯವಾದಲ್ಲಿ ಕೃಷಿಯಲ್ಲಿನ ಸಮಸ್ಯೆಗಳಿಗೆ ಸುಲಭ ಪರಿಹಾರ ಸಾಧ್ಯ. ರೈತರು ಸಾಮಾನ್ಯವಾಗಿ ಕೃಷಿಗೆ ಅವಶ್ಯವಾಗಿರುವ ಹವಾಮಾನ ಮುನ್ಸೂಚನೆ, ಉತ್ಪನ್ನಗಳ ದರಗಳು,  ಹತ್ತಿರದ ಪಟ್ಟಣಗಳಲ್ಲಿರುವ ಧಾರಣೆ ರಸಗೊಬ್ಬರು, ಬೀಜ, ಯಂತ್ರೋಪಕರಣಗಳ ಮಾಹಿತಿ ನೀಡುತ್ತದೆ. ಸಕಾಲದಲ್ಲಿ ತಜ್ಞರ ಸಲಹೆಗಳನ್ನು ಪಡೆಯಲು ಪ್ರಯಾಸಪಡಬೇಕಾಗುತ್ತದೆ, ಎಷ್ಟೋ ಬಾರಿ ಸೂಕ್ತ ಮಾರ್ಗದರ್ಶನ ಸಿಗದೆ ಕೊನೆಗೆ ಗಾಳಿ ಸಮಾಚಾರಗಳ ಮೊರೆ ಹೋಗಬೇಕಾಗುತ್ತದೆ.

 ಈ ನಿಟ್ಟಿನಲ್ಲಿ ರೈತರ ಸಮೃದ್ಧಿಗಾಗಿ ಕೇಂದ್ರ ಸರಕಾರದಿಂದ “ ಕಿಸಾನ್ ಸುವಿಧಾ ” ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ತಯಾರಿಸಲಾಗಿದೆ.  ಈ ಮೊಬೈಲ್ ಅಪ್ಲಿಕೇಶನ್ ಬಳಸಲು ರೈತರು ಇಂಟರನೆಟ್ ಸಂಪರ್ಕವುಳ್ಳ ಒಂದು ಸ್ಮಾರ್ಟ್ ಫೋನ್ ಹೊಂದಿರುವುದು ಅವಶ್ಯಕ.

ಕಿಸಾನ್ ಸುವಿಧಾ ಅತಿ ಸರಳ ವಿನ್ಯಾಸವನ್ನು ಹೊಂದಿದ್ದು 5 ಪ್ರಮುಖ ವಿಷಯಗಳ ಕುರಿತು ಮಾಹಿತಿ ನೀಡುತ್ತದೆ- ಹವಾಮಾನ, ಕೃಷಿ ಪರಿಕರಗಳ ವಿತರಕರು, ಮಾರಕಟ್ಟೆ ಧಾರಣೆಗಳು, ಸಸ್ಯ ಸಂರಕ್ಷಣೆ, ಕೃಷಿ ಸಲಹೆಗಳು.  ಅಲ್ಲದೇ, ರೈತರು ಈ ಅಪ್ಲಿಕೇಶನ್ ಮೂಲಕ ಕಿಸಾನ ಕಾಲ್ ಸೆಂಟರಗೆ ನೇರವಾಗಿ ಕರೆ ಮಾಡಬಹುದು. 

ಈ ಅಪ್ಲಿಕೇಶನ್ ಬಳಸಲು ಏನು ಮಾಡಬೇಕು?

  1. ಬೇರೆ ಯಾವುದೇ ಅಪ್ಲಿಕೇಶನ್‍ಗಳನ್ನು ಮೊಬೈಲ್‍ಗೆ ಅಳವಡಿಸುವಂತೆ, ಈ ಅಪ್ಲಿಕೇಶನನ್ನು ಕೂಡ ಗೂಗಲ್ ಪ್ಲೇ ಸ್ಟೋರ್‍ನಿಂದ ಅಥವಾ http://mkisan.gov.in/downloadmobileapps.aspxಲಿಂಕ್‍ನಿಂದ ಡೌನ್ಲೋಡ್ ಮಾಡಿಕೊಂಡು, ಮೊಬೈಲ್‍ನಲ್ಲಿ ಅಳವಡಿಸಿಕೊಳ್ಳಬೇಕು.
  2. ಅಪ್ಲಿಕೇಶನನ್ನು ಉಪಯೋಗಿಸಲು ಮೊದಲು ನೋಂದಣಿ ಮಾಡಬೇಕು, ರೈತರು ತಮ್ಮ ಹೆಸರು, ಮೊಬೈಲ್ ಸಂಖ್ಯೆ ರಾಜ್ಯ, ಜಿಲ್ಲೆ, ತಾಲೂಕು ಇವುಗಳನ್ನು ಸೂಕ್ತ ಸ್ಥಳಗಳಲ್ಲಿ ನಮೂದಿಸಿ ರಿಜಿಸ್ಟರ್ ಗುಂಡಿಯನ್ನು ಅದುಮಬೇಕು.
  3. ನೋಂದಣಿ ಮಾಡಿದ ನಂತರ ಅಪ್ಲಿಕೇಶನ್ ಮುಖಪುಟ ತೆರೆದಕೊಳ್ಳುತ್ತದೆ.
  4. ಮುಖಪುಟದ ವಿನ್ಯಾಸ ಅತಿ ಸರಳವಾಗಿದ್ದು, ಚಿತ್ರಗಳು ಇರುವುದರಿಂದ ರೈತರು ಅತಿ ಸುಲಭವಾಗಿ ಇದನ್ನು ಉಪಯೋಗಿಸಬಹುದು. ಸಧ್ಯ ಇಂಗ್ಲೀಷ, ಹಿಂದಿ, ಗುಜರಾತಿ, ತಮಿಳು ಭಾಷೆಗಳಲ್ಲಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಉಳಿದ ಪ್ರಾಂತೀಯ ಭಾಷೆಗಳಿಗೂ ಇದನ್ನು ವಿಸ್ತರಿಸಲಾಗುವುದು.
  5. ರೈತರು ತಮ್ಮ ಅಗತ್ಯತೆಗೆ ಅನುಗುಣವಾಗಿ ಹವಾಮಾನ, ಕೃಷಿ ಪರಿಕರಗಳ ವಿತರಕರು, ಮಾರಕಟ್ಟೆ ಧಾರಣೆಗಳು, ಸಸ್ಯ ಸಂರಕ್ಷಣೆ, ಕೃಷಿ ಸಲಹೆಗಳು ಹೀಗೆ ಬೇಕಾದ ಗುಂಡಿಗಳನ್ನು ಒತ್ತಿ ಮಾಹಿತಿ ಪಡೆಯಬಹುದು.

ಲೇಖಕರು:

ಚಂದ್ರಕಾಂತ ಕೊಟಬಾಗಿ, ತಾಂತ್ರಿಕ ಅಧಿಕಾರಿ (ಕಂಪ್ಯೂಟರ್), ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಕೊಪ್ಪಳ.

ಡಾ. ಎಂ.ವಿ ರವಿ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಕೊಪ್ಪಳ.

ರಾಘವೇಂದ್ರ ಯೆಲಿಗಾರ್ ವಿಜ್ಞಾನಿಗಳು (ಕೀಟಶಾಸ್ತ್ರ) ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಕೊಪ್ಪಳ.