News

Karnataka Elections ಕರ್ನಾಟಕ ಚುನಾವಣೆ: ಚುನಾವಣೆ ನೀತಿಸಂಹಿತೆ ನಂತರ 147.46 ಕೋಟಿ ರೂ.ವಶಕ್ಕೆ!

09 May, 2023 12:16 PM IST By: Hitesh
Karnataka Elections: 147.46 Crores after Election Code of Conduct!

ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿನ್ಯೂಸ್‌ ಪರಿಚಯಿಸಿದೆ. ಈ ವಾರದ ಪ್ರಮುಖ ಸುದ್ದಿಗಳು ಈ ರೀತಿ ಇವೆ.

1. ಚುನಾವಣೆ ನೀತಿಸಂಹಿತೆ ನಂತರ 147.46 ಕೋಟಿ ರೂ.ವಶಕ್ಕೆ!
2. ಕರ್ನಾಟಕ ಚುನಾವಣೆ: ಮೂರು ದಿನ ಮದ್ಯ ಮಾರಾಟಕ್ಕೆ ನಿರ್ಬಂಧ  
3. ರಾಜ್ಯದ ಹಲವು ಜಿಲ್ಲೆಯಲ್ಲಿ ಭಾರೀ ಮಳೆ: ಎಚ್ಚರಿಕೆ
4. ಸಂವಿಧಾನ ನೀಡಿರುವ ಮತದಾನದ ಅಧಿಕಾರ ಚಲಾಯಿಸಿ
5. ನಾಳೆ ಕರ್ನಾಟಕ ಸಾರ್ವತ್ರಿಕ ಚುನಾವಣೆ: ತಪ್ಪದೆ ಮತ ಚಲಾಯಿಸಿ

ಸುದ್ದಿಗಳ ವಿವರ ಈ ರೀತಿ ಇದೆ.
-----------------
1. ರಾಜ್ಯದಲ್ಲಿ ಈ ಬಾರಿ ಚುನಾವಣೆ ನೀತಿಸಂಹಿತೆ ಜಾರಿಯಾದ ಮೇಲೆ ಇಲ್ಲಿಯುವರೆಗೆ ಬರೋಬ್ಬರಿ 147.46 ಕೋಟಿ ನಗದು ವಶಪಡಿಸಿಕೊಂಡಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

ಚುನಾವಣಾ ಆಯೋಗ, ಪೊಲೀಸ್‌ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 375.60 ಕೋಟಿ ಮೌಲ್ಯದ ನಗದು

ಹಾಗೂ ಮದ್ಯ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಇನ್ನು ಈ ಬಾರಿ ವಶಪಡಿಸಿಕೊಂಡಿರುವ ನಗದು ಪ್ರಮಾಣವು ಕಳೆದ 2018ರ ಚುನಾವಣೆಗೆ ಹೋಲಿಸಿದರೆ,ಶೇ 100 ರಷ್ಟು ಹೆಚ್ಚಳವಾಗಿದೆ.

ಅಲ್ಲದೇ ಅಂದಾಜು 100 ಕೋಟಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ.

ಮತದಾರರಿಗೆ ನೀಡಲು ಸಂಗ್ರಹಿಸಿದ್ದ 24.22 ಕೋಟಿ ಮೌಲ್ಯದ ಸೀರೆ, ಕುಕ್ಕರ್‌ ಸೇರಿದಂತೆ ಹಲವು ಉಡುಗೊರೆಗಳನ್ನು ವಶಕ್ಕೆ ಪಡೆಯಲಾಗಿದೆ.

ಇನ್ನು  83.66 ಕೋಟಿ ಮೌಲ್ಯದ 22.7 ಲಕ್ಷ ಲೀಟರ್‌ ಮದ್ಯವನ್ನೂ ವಶಕ್ಕೆ ಪಡೆಯಲಾಗಿದೆ.

ಇನ್ನು ಗಂಭೀರವಾದ ವಿಚಾರವೆಂದರೆ ಈ ಬಾರಿ ಡಗ್ರ್‌ ಹಾಗೂ ಮಾದಕ ವಸ್ತುಗಳ ಪ್ರಮಾಣವೂ ಹೆಚ್ಚಳವಾಗಿದೆ.

ಅಂದಾಜು 23.67 ಕೋಟಿ ರೂಪಾಯಿ ಮೌಲ್ಯದ 1,954 ಕೆಜಿ ಡ್ರಗ್ಸ್‌ ಮತ್ತು ಮಾದಕವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.  

2. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಸಂಜೆ 6ಗಂಟೆಯಿಂದ 10ರ ಚುನಾವಣೆ ಪ್ರಕ್ರಿಯೆ ಮುಗಿಯುವ ವರೆಗೆ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

ಮೂರು ದಿನ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಮದ್ಯಪ್ರಿಯರು ಬಾರ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದು ಕಂಡುಬಂತು.

ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.  
----------------- 

Karnataka Elections: 147.46 Crores after Election Code of Conduct!

3. ರಾಜ್ಯದಲ್ಲಿ ಭಾರೀ ಮಳೆ ಮುಂದುವರಿದಿದೆ. ಮುಂದಿನ 24 ಗಂಟೆಯ ಅವಧಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಮಿಂಚುಗುಡುಗು ಸಹಿತ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಲ್ಲದೇ ಬುಧವಾರ ಹಾಗೂ ಗುರುವಾರ ದಕ್ಷಿಣ ಒಳನಾಡಿನ ಹಾಗೂ ಕರಾವಳಿಯ ಎಲ್ಲ ಜಿಲ್ಲೆಗಳು, ಉತ್ತರ ಒಳನಾಡಿನ ಬೆಳಗಾವಿ,

ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಿಂಚು ಗುಡುಗು ಸಾಧ್ಯತೆ ಇದೆ.

ಇನ್ನು ಬೆಂಗಳೂರಿನಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಗರಿಷ್ಠ ಉಷ್ಣಾಂಶದ ಎಚ್ಚರಿಕೆ: ಗರಿಷ್ಠ ಉಷ್ಣಾಂಶವು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್‌ ವರೆಗೂ ಮತ್ತು ಉತ್ತರ

ಒಳನಾಡಿನ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ವರೆಗೂ ಕಮ್ಮಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
----------------- 

ರಾಜ್ಯದಲ್ಲಿ ಮುಂದುವರಿದ ಭಾರೀ ಮಳೆ

4.ನಮ್ಮ ಸಂವಿಧಾನ ನೀಡಿರುಮತದಾನದ ಅಧಿಕಾರವನ್ನು ಚಲಾಯಿಸುವುದರ ಜೊತೆಗೆ ಎಲ್ಲರಲ್ಲೂ ಮತದಾನ ಮಾಡಲು ಪ್ರೇರೇಪಿಸೋಣ

ಎಂದು ಅಪಾರ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು.

ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಳ ಮಾಡುವ ಉದ್ದೇಶದಿಂದ

ಮಹಿಳಾ ಮತದಾರರಲ್ಲಿ ಅರಿವು ಮೂಡಿಸಲು ಈಚೆಗೆ ಬೆಂಗಳೂರಿನ ಟೌನ್‌ಹಾಲ್ನಲ್ಲಿ ಹಮ್ಮಿಕೊಂಡಿದ್ದ ಪಿಂಕಥಾನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಎಲ್ಲಾ ಮಹಿಳೆಯರು ಮತಗಟ್ಟೆಗಳಿಗೆ ಬಂದು ತಪ್ಪದೆ ಮತದಾನ ಮಾಡುವ ಸಲುವಾಗಿ ಪಿಂಕ್ ಬೂತ್‌ಗಳ ವ್ಯವಸ್ಥೆ ಮಾಡಲಾಗಿದೆ.

ಎಲ್ಲರೂ ತಪ್ಪದೆ ಮತ ಚಲಾಯಿಸಬೇಕು ಎಂದು ಹೇಳಿದರು.

ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಾತನಾಡಿ,

ನಗರದಲ್ಲಿ ಈಗಾಗಲೇ ಎಲ್ಲರಿಗೂ ಮತದಾರರ ಗುರುತಿನ ಚೀಟಿ ವಿತರಣೆ ಮಾಡಿದ್ದು,

ಅದರಲ್ಲಿ ಎಲ್ಲಾ ಮಾಹಿತಿಯೂ ಲಭ್ಯವಿರಲಿದೆ. ಇದರಿಂದ ಸುಲಭವಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಬಹುದಾಗಿದ್ದು,

ಎಲ್ಲರೂ ತಪ್ಪದೆ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
-----------------     
5. ಕರ್ನಾಟಕದ ಸಾರ್ವತ್ರಿಕ ಚುನಾವಣೆ ಮೇ10ರಂದು ಅಂದರೆ, ಬುಧವಾರವಾರ ನಡೆಯಲಿದೆ.

ಬುಧವಾರ ಬೆಳಿಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯವರೆಗೆ ಮತದಾನ ನಡೆಯಲಿದೆ.

ಮುಂದಿನ ವರ್ಷ ಲೋಕಸಭೆ ಚುನಾವಣೆಯೂ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಚುನಾವಣೆ ಮಹತ್ವ ಪಡೆದುಕೊಂಡಿದೆ.

ಇನ್ನು ಈ ಬಾರಿ ಒಂದೇ ಹಂತದಲ್ಲಿ ಮೇ10ಕ್ಕೆ ಕರ್ನಾಟಕ ಚುನಾವಣೆ ನಡೆಯುತ್ತಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ನೀವು ಸಹ ತಪ್ಪದೆ ಮತಚಲಾಯಿಸಿ, ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗವಹಿಸಿ.

ಇದು ಇಂದಿನ ಪ್ರಮುಖ ಸುದ್ದಿಗಳು ನಿರಂತರ ಸುದ್ದಿಗಾಗಿ ಕೃಷಿ ಜಾಗರಣ ನೋಡಿ, ಧನ್ಯವಾದ! 

ಚಿತ್ರ ಕೃಪೆ: Pexels