News

Karnataka Election: ಚುನಾವಣಾ ಜಾಹಿರಾತು : ಪೂರ್ವಾನುಮತಿ ಕಡ್ಡಾಯ!

07 May, 2023 9:45 PM IST By: Kalmesh T
Karnataka Election: Election advertisement: Prior approval is mandatory!

ಕರ್ನಾಟಕ ವಿಧಾನಸಭೆ ಚುನಾವಣೆ-2023 ಅಂಗವಾಗಿ ಮೇ 10, 2023 ರಂದು ಮತದಾನ ನಡೆಯಲಿದೆ. ಮುದ್ರಣ ಮಾಧ್ಯಮಗಳಲ್ಲಿ ದಾರಿತಪ್ಪಿಸುವ ಮತ್ತು ಕಾನೂನು ಉಲ್ಲಂಘಿಸುವ ಜಾಹಿರಾತುಗಳನ್ನು ಪ್ರಕಟಿಸುತ್ತಿರುವುದನ್ನು ಕೇಂದ್ರ ಚುನಾವಣಾ ಆಯೋಗ ಗಮನಿಸಿದೆ.

ಚುನಾವಣೆಯ ಅಂತಿಮ ಹಂತದಲ್ಲಿ ಇಂತಹ ಜಾಹಿರಾತುಗಳು ಇಡೀ ಚುನಾವಣಾ ಪ್ರಕ್ರಿಯೆಯನ್ನು  ಕಲುಷಿತಗೊಳಿಸುವ ಸಾಧ್ಯತೆಯಿದ್ದು, ಇದರಿಂದ ಬಾಧಿತರಾದ ಅಭ್ಯರ್ಥಿಗಳು ಮತ್ತು ಪಕ್ಷಗಳು ಅವುಗಳಿಗೆ ಸ್ಪಷ್ಟೀಕರಣ ಅಥವಾ ಖಂಡಿಸುವ ಅವಕಾಶವನ್ನು ಕಳೆದುಕೊಂಡಂತಾಗುತ್ತದೆ.

ಈ ಹಿನ್ನೆಲೆಯಲ್ಲಿ ಪ್ರಚೋದಿಸುವ, ದಾರಿತಪ್ಪಿಸುವ ಮತ್ತು ದ್ವೇಷಪೂರಿತವಾದ ಜಾಹಿರಾತುಗಳನ್ನು ಮುದ್ರಣ ಮಾಧ್ಯಮಗಳಲ್ಲಿ  ಪ್ರಕಟವಾಗುವುದನ್ನು ತಡೆಯಲು ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕ್ರಮವಹಿಸುವುದು ಮುಖ್ಯವಾಗಿದೆ.

ಆದ್ದರಿಂದ, ಮತದಾನದ ದಿನ ಹಾಗೂ ಮತದಾನ ಪೂರ್ವ ದಿನದಂದು ಯಾವುದೇ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಅಥವಾ ವ್ಯಕ್ತಿ ಅಥವಾ ಯಾವುದೇ ಸಂಘಟನೆಗಳು, ತಮ್ಮ ರಾಜಕೀಯ ಜಾಹಿರಾತುಗಳ ವಿಷಯ (content)ವನ್ನು ರಾಜ್ಯ ಮಟ್ಟದ / ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ (ಎಂಸಿಎಂಸಿ)ಯ ಪೂರ್ವಾನುಮತಿ ಪಡೆಯುವುದನ್ನು ಕೇಂದ್ರ ಚುನಾವಣಾ ಆಯೋಗವು ಸಂವಿಧಾನದ ಅನುಚ್ಛೇದ 324 ರಂತೆ ಹಾಗೂ ಅದರಿಂದ ಪ್ರದತ್ತವಾಗುವ ಅಧಿಕಾರದಡಿ ಕಡ್ಡಾಯಗೊಳಿಸಿದೆ.

ಮತದಾನದ ದಿನ 10-05-2023 ಹಾಗೂ ಮತದಾನದ ಪೂರ್ವ ದಿನ 09-05-2023 ರಂದು ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗುವ ರಾಜಕೀಯ ಜಾಹಿರಾತುಗಳಿಗೆ ಈ ನಿಯಮ ಅನ್ವಯಿಸುತ್ತದೆ.

ಚುನಾವಣಾ ಜಾಹಿರಾತು ಪ್ರಕಟಿಸಲು ಬಯಸುವ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಅಥವಾ ವ್ಯಕ್ತಿಯು ಅಥವಾ ಯಾವುದೇ ಸಂಘಟನೆಗಳು ಮೇ 9 ಹಾಗೂ 10 ರಂದು ಮುದ್ರಣ ಮಾಧ್ಯಮಗಳಲ್ಲಿ ಜಾಹಿರಾತು ಪ್ರಕಟಿಸಲು ಆಯಾ ಜಾಹಿರಾತುಗಳನ್ನು ಪ್ರಕಟವಾಗುವ ಎರಡು ದಿನಗಳ ಮುಂಚೆ ಅಂದರೆ ಮೇ 7 ರೊಳಗೆ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ (ಎಂಸಿಎಂಸಿ)ಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಮೇ 9 ಹಾಗೂ 10 ರಂದು ಮುದ್ರಣ ಮಾಧ್ಯಮದಲ್ಲಿ ಜಾಹಿರಾತು ಪ್ರಕಟಿಸಲು ರಾಜಕೀಯ ಪಕ್ಷಗಳು ರಾಜ್ಯಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯಲ್ಲಿ  ಹಾಗೂ ಚುನಾವಣಾ ಅಭ್ಯರ್ಥಿಗಳು ಆಯಾ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯಲ್ಲಿ ಜಾಹಿರಾತುಗಳ ಪೂರ್ವಾನುಮತಿಯನ್ನು ಪಡೆಯಬಹುದಾಗಿದೆ.

ಚುನಾವಣಾ ಜಾಹಿರಾತುಗಳ ಪೂರ್ವಾನುಮತಿ ಕಾರ್ಯವನ್ನು  ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯು ತ್ವರಿತವಾಗಿ ನಿರ್ವಹಿಸಬೇಕೆಂದು ಈ ಮೂಲಕ ಸೂಚಿಸಲಾಗಿದೆ.

ಕೇಂದ್ರ ಚುನಾವಣಾ ಆಯೋಗದ ಮೇಲಿನ ನಿರ್ದೇಶನವನ್ನು  ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರು, ಚುನಾವಣಾ ಅಭ್ಯರ್ಥಿಗಳು ಹಾಗೂ ರಾಜ್ಯದ ಎಲ್ಲ ಮುದ್ರಣ ಮಾಧ್ಯಮ ಸಂಸ್ಥೆಗಳಿಗೆ  ಸೂಚನೆ ನೀಡಲಾಗಿದೆ.