News

ರಾಜ್ಯದಲ್ಲಿ ಒಂದೇ ದಿನ 34,804 ಜನರಿಗೆ ಸೋಂಕು,143 ಮಂದಿ ಸಾವು

25 April, 2021 8:37 PM IST By:
Covid-19

ಕರ್ನಾಟಕ ರಾಜ್ಯದಲ್ಲಿ ಕೊರೋನಾ ಸೋಂಕು ನಾಗಲೋಟದಲ್ಲಿ ಸಾಗಿದೆ. ರಾಜ್ಯದಲ್ಲಿಂದು ಮಹಾಮಾರಿ ಕೊರೊನಾ‌ ಹಿಂದೆಂದಿಗಿಂತ ದಾಖಲೆ ಪ್ರಮಾಣದಲ್ಲಿ ಸೋಂಕು ದಾಖಲಾಗಿದ್ದು, ಒಂದೇ ದಿನ 34,804 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲೊಂದೇ 20,733 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.ಇದರೊಂದಿಗೆ ಸೋಂಕಿತರ ಸಂಖ್ಯೆ 13,39,201 ಕ್ಕೆ ಏರಿಕೆಯಾಗಿದೆ.

ಇದುವರೆಗೆ ರಾಜ್ಯದಲ್ಲಿ ಮೃತರ ಸಂಖ್ಯೆ ‌ 14,426ಕ್ಕೆ ಏರಿಕೆಯಾಗಿದೆ. ಸಿಟಿ ಬೆಂಗಳೂರಿನಲ್ಲಿ ಸೋಂಕಿನ ಮಹಾ ಸ್ಪೋಟ ಸಂಭವಿಸಿದೆ ಇಂದು ಒಂದೇ ದಿನ ನಗರದಲ್ಲಿ 20,733 ಹೊಸ ಸೋಂಕು‌‌ ಪ್ರಕರಣಗಳು ದಾಖಲಾಗಿವೆ. ಒಂದೇ ದಿನ 77 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಹೀಗಾಗಿ ನಗರದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13,39,201 ಹೆಚ್ಚಳವಾಗಿದ್ದು, ರಾಜ್ಯದಲ್ಲಿ 6982 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ರಾಜ್ಯಿ ಒಟ್ಟು 10,62,594 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.ರಾಜ್ಯದಲ್ಲಿ 2,62,162 ಸಕ್ರಿಯ ಪ್ರಕರಣಗಳಿದ್ದು, 1492 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆ ಜಿಲ್ಲೆಗಳಲ್ಲೂ ಸೋಂಕಿನ ಅಬ್ಬರ ಕಾಣಿಸಿಕೊಂಡಿದ್ದು ಜನರನ್ನು ಆತಂಕಕ್ಕೆ ದೂಡಿದೆ.
ಬಾಗಲಕೋಟೆ 390, ಬಳ್ಳಾರಿ 732, ಬೆಳಗಾವಿ 336, ಬೆಂಗಳೂರು ಗ್ರಾಮಾಂತರ 864, ಬೆಂಗಳೂರು ನಗರ 20,733, ಬೀದರ್ 406, ಚಾಮರಾಜನಗರ 284, ಚಿಕ್ಕಬಳ್ಳಾಪುರ 434, ಚಿಕ್ಕಮಗಳೂರು 247, ಚಿತ್ರದುರ್ಗ 100, ದಕ್ಷಿಣ ಕನ್ನಡ 564, ದಾವಣಗೆರೆ 242, ಧಾರವಾಡ 546, ಗದಗ 76, ಹಾಸನ 768, ಹಾವೇರಿ 99, ಕಲಬುರಗಿ 626, ಕೊಡಗು 1,077, ಕೋಲಾರ 782, ಕೊಪ್ಪಳ 152, ಮಂಡ್ಯ 814, ಮೈಸೂರು 700, ರಾಯಚೂರು 643, ರಾಮನಗರ 225, ಶಿವಮೊಗ್ಗ 418, ತುಮಕೂರು 1,153, ಉಡುಪಿ 319, ಉತ್ತರ ಕನ್ನಡ 243, ವಿಜಯಪುರ 468 ಮತ್ತು ಯಾದಗಿರಿಯಲ್ಲಿ 363 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬೆಂಗಳೂರು ಲಾಕ್‌ಡೌನ್ ನಾಳೆ ಸಂಪುಟ ಸಭೆಯಲ್ಲಿ ತೀರ್ಮಾನ

ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ನಿತ್ಯ ಏರಿಕೆಯಾಗುತ್ತಿದ್ದು, ಸೋಂಕಿನ ಸುನಾಮಿಯನ್ನು ನಿಯಂತ್ರಿಸಲು ಬೆಂಗಳೂರು ನಗರದಲ್ಲಿ 14 ದಿನಗಳ ಸಂಪೂರ್ಣ ಲಾಕ್‌ಡೌನ್‌ಗೆ ತಜ್ಞರು ಶಿಫಾರಸ್ಸು ಮಾಡಿದ್ದು, ಸೋಮವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವಾಗಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮಿತಿ ಮೀರುತ್ತಿರುವ ಕೋವಿಡ್ ನಿಯಂತ್ರಣಕ್ಕೆ 14 ದಿನಗಳ ಲಾಕ್‌ಡೌನ್ ಅಗತ್ಯ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವರುಗಳ ಅಭಿಪ್ರಾಯಗಳನ್ನು ಆಲಿಸಿ ಲಾಕ್‌ಡೌನ್ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವರು ಎಂದು ಹೇಳಲಾಗಿದೆ.