News

ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಪುಸ್ತಕಗಳ ಆಹ್ವಾನ

01 July, 2021 5:21 PM IST By:

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಾಲಯಗಳಿಗೆ ಏಕಗವಾಕ್ಷಿ ಯೋಜನೆಯಡಿ 2021ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಸಾಹಿತ್ಯ, ಕಲೆ, ವಿಜ್ಞಾನ, ವೃತ್ತಿ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಆದಾಯ ಉತ್ಪಾದನಾ ಯೋಜನೆ, ಸ್ಪರ್ಧಾತ್ಮಕ, ಪಠ್ಯ ಪುಸ್ತಕ, ಸಾಂದರ್ಭಿಕ ಮತ್ತು ಪರಾಮರ್ಶನ ಕೃತಿಗಳು ಹಾಗೂ ಮಕ್ಕಳ ಸಾಹಿತ್ಯ, ನವಸಾಕ್ಷರರ ಕೃತಿಗಳು ಇತ್ಯಾದಿ ವಿಷಯಗಳ ಕನ್ನಡ, ಆಂಗ್ಲ, ಇತರೆ ಭಾರತೀಯ ಭಾಷೆಗಳ ಗ್ರಂಥಗಳ ಆಯ್ಕೆಗಾಗಿ ಲೇಖಕರು, ಲೇಖಕ-ಪ್ರಕಾಶಕರು, ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಗಳಿಂದ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಪುಸ್ತಕಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2021ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳನ್ನು ಗ್ರಂಥ ಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ 2021ರ ಜುಲೈ 31ರೊಳಗೆ ಕಾಪಿರೈಟ್ ಮಾಡಿಸಿರುವ ಪುಸ್ತಕಗಳನ್ನು ಮಾತ್ರ ಆಯ್ಕೆಗಾಗಿ ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು (ನೋಂದಣಿ ಪತ್ರದ ಪ್ರತಿಯೊಂದಿಗೆ) ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಕಚೇರಿಗೆ 2021ರ ಜುಲೈ 31ರ ಸಂಜೆ 5 ಗಂಟೆಯೊಳೊಗಾಗಿ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಯಾವುದೇ ಪುಸ್ತಕಗಳನ್ನು ಅಯ್ಕೆಗೆ ಸ್ವೀಕರಿಸಲಾಗುವುದಿಲ್ಲ.

ಪುಸ್ತಕಗಳು 2021ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾಗಿರಬೇಕು. ಮರು ಮುದ್ರಣವಾದಲ್ಲಿ ಹತ್ತು ವರ್ಷಗಳ ಅಂತರ ಇರಬೇಕು. ಈ ಬಗ್ಗೆ ದೃಢೀಕರಣ ಪತ್ರ ನೀಡಬೇಕು. ನಿಗದಿತ ಅರ್ಜಿ ನಮೂನೆ, ಹಾಗೂ ನಿಬಂಧನೆ, ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆ  ಹೆಚ್ಚಿನ ಮಾಹಿತಿಗಾಗಿ ಇಲಾಖೆಯ www.dpl.karnataka.gov.in ವೆಬ್‌ಸೈಟ್‌ನ್ನು  ಹಾಗೂ ಕಲಬುರಗಿ ಜಗತ್ ವೃತ್ತದಲ್ಲಿರುವ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.