News

ಮಾರ್ಚ್ 8 ರಿಂದ ರೈತರಿಗೆ ಜೇನು ಸಾಕಾಣಿಕೆ ತರಬೇತಿ

06 March, 2021 5:09 PM IST By:
Honey

ರಾಯಚೂರು ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ ಹಾಗೂ ರಾಷ್ಟ್ರೀಯ ಜೇನು ಮಂಡಳಿ ವತಿಯಿಂದ ಜಿಲ್ಲೆಯ ರೈತರಿಗೆ ಮತ್ತು ಆಸಕ್ತರಿಗೆ ವಿಶೇಷ ತರಬೇತಿ ಅಡಿಯಲ್ಲಿ ‘ವೈಜ್ಞಾನಿಕ ಜೇನು ಸಾಕಾಣಿಕೆ’ ತರ ಬೇತಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನಕೇಂದ್ರದಲ್ಲಿ ಮಾರ್ಚ್ 8ರಿಂದ 28ರ ವರೆಗೆ ಮೂರು ಹಂತಗಳ ತರಬೇತಿ ಆಯೋಜಿಸಲಾಗಿದೆ.

ರೈತರಿಗೆ ಜೇನು ಸಾಕಾಣಿಕೆಯಲ್ಲಿ ವೈಜ್ಞಾನಿಕ ಪದ್ಧತಿಗಳ ಮಾಹಿತಿ ಹಾಗೂ ಪ್ರಾಯೋಗಿಕ ಅನುಭವಗಳನ್ನು ನೀಡಿ ಅವರ ಆದಾಯ ಹೆಚ್ಚಿಸಲು ತರಬೇತಿಯ ಉದ್ದೇಶವಾಗಿದ್ದು, ಪ್ರತಿ ತರಬೇತಿಗೆ 25 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ.

ಮೊದಲನೇಯ ತರಬೇತಿ ಮಾರ್ಚ್ 8ರಿಂದ 14, ಎರಡನೇ ತರಬೇತಿ ಮಾರ್ಚ್ 15ರಿಂದ 21 ಹಾಗೂ ಮೂರನೇ ತರಬೇತಿ ಮಾರ್ಚ್ 22ರಿಂದ 28ರವರೆಗೆ 7 ದಿನಗಳನ್ನು ಒಳಗೊಂಡಿದೆ. ತರಬೇತಿಯಲ್ಲಿ ಭಾಗವಹಿಸುವ ಆಸಕ್ತ ರೈತರು ರಾಯಚೂರು ಕೃಷಿ ವಿಜ್ಞಾನಕೇಂದ್ರ ಕಛೇರಿಗೆ ಸಂಪರ್ಕಿಸಬೇಕು. ಆದ್ಯತೆ ಮೇರೆಗೆ ಮೊದಲು ಬಂದ 25 ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನಕೇಂದ್ರದ ಮುಖ್ಯಸ್ಥ ಡಾ.ಜಿ.ಎಸ್. ಯಡಹಳ್ಳಿ, ದೂರವಾಣಿ ಸಂಖ್ಯೆ: 94806 96314 ಅಥವಾ 97424 80444 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ಜೇನು, ಹಣ್ಣುಗಳ ಮೇಳ

ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಚ್‌ 8 ರಿಂದ 11 ರವರೆಗೆ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಕೊಪ್ಪಳ ರವರ ಕಚೇರಿ ಆವರಣದಲ್ಲಿ ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಮೋಸಂಬಿ, ಕರಬೂಜ, ಬಾಳೆ, ಅಣಬೆ ಮತ್ತು ಜೇನು ಮೇಳ ಆಯೋಜಿಸಲಾಗಿದೆ.

 ಮೇಳದಲ್ಲಿ ಭಾಗವಹಿಸುವ ಜಿಲ್ಲೆಯ ಆಸಕ್ತ ಬೆಳೆಗಾರರು ಮುಂಗಡವಾಗಿ ಮಾರಾಟ ಮಳಿಗೆಗಳನ್ನು ಕಾಯ್ದಿರಿಸುವ ಸಲುವಾಗಿ ತಮ್ಮ ಹೆಸರನ್ನು ನೋಂದಾಯಿಸುವಂತೆ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.

ರೈತರು ತಮ್ಮ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆಯಲು ಹಾಗೂ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು, ಆಸಕ್ತ ರೈತರು ತಮ್ಮ ಪಹಣಿ ಪ್ರತಿಯೊಂದಿಗೆ, ತಮ್ಮ ಹೆಸರು, ವಿಳಾಸ, ಸರ್ವೆ ನಂಬರ್, ಬೆಳೆ, ತಳಿಗಳು ಹಾಗೂ ವಿಸ್ತೀರ್ಣ ಮುಂತಾದ ವಿವರಗಳೊಂದಿಗೆ ಹೆಸರು ನೋಂದಾಯಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌: 9740212164/ 7760967550 ಸಂಪರ್ಕಿಸಬಹುದು ಎಂದು ಇಲಾಖೆಯ ಉಪನಿರ್ದೇಶಕರು   ತಿಳಿಸಿದ್ದಾರೆ.