News

ವಿದ್ಯಾರ್ಥಿಗಳಿಗೆ ಬಿಸಿಯೂಟದ ಬದಲು ಅಡುಗೆ ಎಣ್ಣೆ, ಬೇಳೆ ನೀಡಿ: ಹೈಕೋರ್ಟ್

09 December, 2020 9:34 AM IST By:

ವಿದ್ಯಾರ್ಥಿಗಳಿಗೆ ಬಿಸಿಯೂಟದ ಬದಲು ಅಡುಗೆ ಎಣ್ಣೆ ಹಾಗೂ ತೊಗರಿ ಬೇಳೆ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಕೊರೊನಾ ಸಂದರ್ಭದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ನೀಡುವುದು ಕಷ್ಟ ಎಂದು ಸರ್ಕಾರ ಹೈಕೋರ್ಟ್‌ಗೆ ಹೇಳಿದೆ. ಹೀಗಾಗಿ  ಬಿಸಿಯೂಟದ ಬದಲು ಅಡುಗೆ ಎಣ್ಣೆ ಹಾಗೂ ಬೇಳೆ ನೀಡಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ಆಹಾರ ಧಾನ್ಯ ಒದಗಿಸಲು ಡಿಸೆಂಬರ್ 5ರಂದೇ ಆದೇಶ ಹೊರಡಿಸಲಾಗಿದೆ  ಎಂದು ಹೈಕೋರ್ಟ್‌ ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ಒಂದು ಕೆಜಿ ಅಯೊಡೈಸ್ಡ್‌ ಉಪ್ಪು, ತೊಗರಿ ಬೇಳೆ ಮತ್ತು ಅಡುಗೆ ಎಣ್ಣೆಯನ್ನು  ಐದು ತಿಂಗಳ ಲೆಕ್ಕಾಚಾರದಲ್ಲಿ (ಆಗಸ್ಟ್– 2020ರಿಂದ ಏಪ್ರಿಲ್–2021 ತನಕ ಅನ್ವಯವಾಗಲಿದೆ) ವಿತರಿಸಲಾಗುವುದು ಎಂದು ತಿಳಿಸಿದೆ.

‘ಉಪ್ಪು, ಎಣ್ಣೆ ಮತ್ತು ಬೇಳೆ ಸಂಗ್ರಹಿಸಿ ವಿತರಿಸಲು ಕರ್ನಾಟಕ ಆಹಾರ ನಿಗಮಕ್ಕೆ(ಕೆಎಸ್‌ಸಿಎಸ್‌ಸಿ) ನಿರ್ದೇಶನ ನೀಡಲಾಗಿದೆ. ಶಾಲೆಗಳು ಆರಂಭವಾಗಿ ಅಲ್ಲಿಯೇ ಅಡುಗೆ ಮಾಡುವ ವ್ಯವಸ್ಥೆ ಮತ್ತೆ ಜಾರಿಗೆ ಬರುವ ತನಕ ಈ ವ್ಯವಸ್ಥೆ ಮುಂದುವರಿಸಲು ಆಯುಕ್ತರಿಗೆ ಸೂಚಿಸಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಪೀಠಕ್ಕೆ ಮಾಹಿತಿ ನೀಡಿದರು.

ಉಪ್ಪು ಮತ್ತು ಅಡುಗೆ ಎಣ್ಣೆ ಬದಲಿಗೆ ತೊಗರಿ ಬೇಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲು ಸಾಧ್ಯವೇ ಎಂಬುದನ್ನು ಪರಿಗಣಿಸಬೇಕು. ಆದೇಶದಲ್ಲಿ ಇರುವಂತೆ ವಸ್ತುಗಳು ವಿತರಣೆಯಾದರೆ ಅದು ಮಧ್ಯಾ‌ಹ್ನದ ಬಿಸಿಯೂಟಕ್ಕೆ ಸಮನಾಗುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.