News

#ಇಂದು-ನಾಳೆ ಕರ್ನಾಟಕದಲ್ಲಿ ಗುಡುಗು ಸಹಿತ ಭಾರೀ ಮಳೆ ಎಚ್ಚರಿಕೆ..!

30 June, 2022 10:12 AM IST By: Kalmesh T
Heavy rain in Karnataka today!

ಕರ್ನಾಟಕದಲ್ಲಿ ಈಗಾಗಲೇ ಮಳೆ ಆರಂಭವಾಗಿದ್ದು, ಇಂದು ನಾಳೆ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿರಿ: ರೈತರಿಗೆ ಗುಡ್‌ನ್ಯೂಸ್‌; ಶೀಘ್ರದಲ್ಲೇ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್‌ ಸ್ಥಾಪನೆ!

ಕರ್ನಾಟಕದಲ್ಲಿ ಜುಲೈ 1ರವರೆಗೆ ಗುಡುಗು ಸಹಿತ ಜೋರು ಮಳೆ (Heavy rain) ಆಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಸಂಜೆ ನಂತರ ಉತ್ತಮ ಮಳೆ ಆಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುನ್ಸೂಚನೆ ಪ್ರಕಾರ, ಕರಾವಳಿ ಭಾಗದಲ್ಲಿ ಅತ್ಯಧಿಕ ಮಳೆ ಸುರಿಯಲಿದೆ. ಅದೇ ರೀತಿ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ಮಳೆ ಅಬ್ಬರ ಇರಲಿದೆ.

ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಜೂ.29ರಂದು ಯೆಲ್ಲೋ ಅಲರ್ಟ್, ಇಂದು ಹಾಗೂ ನಾಳೆ ಎರಡು ದಿನ ಆರೆಂಜ್ ಅಲರ್ಟ್ ನೀಡಲಾಗಿದೆ.

ನಕಲಿ ಬೀಜ, ರಸಗೊಬ್ಬರ ಮಾರಾಟಗಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸಚಿವ ಬಿ.ಸಿ. ಪಾಟೀಲ್‌ ಖಡಕ್‌ ಸೂಚನೆ

ಈ ಅವಧಿಯಲ್ಲಿ ಕರಾವಳಿ ಭಾಗದಲ್ಲಿ ಗಾಳಿಯವೇಗ ಗಂಟೆಗೆ ಸುಮಾರು 40ಕಿ. ಮೀ. ವೇಗದಲ್ಲಿ ಬೀಸುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಕೊಡಲಾಗಿದೆ.

ಅದೇ ರೀತಿ ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಗದಗ, ಧಾರವಾಡ, ಹಾವೇರಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮತ್ತು ಕೊಡಗು ಜಿಲ್ಲೆಗಳಿಗೆ ಮುಂದಿನ ಎರಡು ದಿನ 'ಯೆಲ್ಲೋ ಅಲರ್ಟ್' (Yellow Alert) ಘೋಷಿಸಲಾಗಿದೆ. 

ಈ ಜಿಲ್ಲೆಗಳಲ್ಲಿ ಆಗಾಗ ಮುಂಗಾರು ಆರ್ಭಟಿಸಲಿದ್ದು, ಎಲ್ಲೆಡೆ ಮೋಡ ಕವಿದ ವಾತಾವರಣ ಕಂಡು ಬರಲಿದೆ. 

ಒಟ್ಟಾರೆ ಮುಂದಿನ ಎರಡು ಮೂರು ದಿನ ರಾಜ್ಯದ ಅರ್ಧಭಾಗದಲ್ಲಿ ಧಾರಾಕಾರ ಮಳೆಯಾಗುವ (Heavy rain) ಸಂಭವವಿದೆ.

ನಬಾರ್ಡ್‌ ನೇಮಕಾತಿ: ಪದವೀಧರರಿಗೆ ಇಲ್ಲಿದೆ ಉತ್ತಮ ಅವಕಾಶ; ತಿಂಗಳಿಗೆ 1,45,000 ಸಂಬಳ!

ಕರಾವಳಿಯ ಗುಡ್ಡಗಾಡು ಪ್ರದೇಶದಲ್ಲಿ ಈಗಾಗಲೇ ಕಳೆದ ನಾಲ್ಕೈದು ದಿನಗಳಿಂದ ಮಳೆ ಎಡೆಬಿಡೆದೆ ಸುರಿಯುತ್ತಿದೆ.

ಮುಂಗಾರು ಆರಂಭವಾದ ಬಳಿಕ ಕರಾವಳಿ ಭಾಗದಲ್ಲಿ ಚುರುಕಾಗಿರುವ ಮಾರುತಗಳು ಉತ್ತರ ಒಳನಾಡಿನ ಭಾಗದಲ್ಲಿ ದುರ್ಬಲವಾಗಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ 48ಗಂಟೆ ಬೆಂಗಳೂರಿನಲ್ಲೂ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಬೆಳಗ್ಗೆಯಿಂದ ಆಗಾಗ ಬಿಸಿಲಿನ ದರ್ಶನಾದರೂ ಸಂಜೆ ನಂತರ ಗುಡುಗು, ಮಿಂಚು ಸಹಿತ ಮಳೆ ಬೀಳಲಿದೆ. ಬಹುತೇಕ ಕಡೆಗಳಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದೆ.

ಬೆಳಗ್ಗೆ ಹಾಗೂ ಸಂಜೆ ಚಳಿಯ ವಾತಾವರಣ ಕಂಡು ಬರಲಿದೆ. ಈ ವೇಳೆ ನಗರದಲ್ಲಿ ತಾಪಮಾನ ಗರಿಷ್ಠ 28 ಡಿ.ಸೆ. ಹಾಗೂ ಕನಿಷ್ಠ 20 ಡಿ.ಸೆ. ದಾಖಲಾಗುವ ಸಾಧ್ಯತೆ ಇದೆ.