News

ಭಾರಿ ಮಳೆಗೆ ಕೊಚ್ಚಿಹೋದ ತಾತ್ಕಾಲಿಕ ಸೇತುವೆ-ಅಪಾರ ಬೆಳೆ ಹಾನಿ(Heavy rainfall affected crop)

20 July, 2020 9:53 AM IST By:

ರಾಜ್ಯದಲ್ಲಿ ಮಳೆಯಬ್ಬರ ಮುಂದುವರೆದಿದ್ದು, ಶನಿವಾರ ರಾತ್ರಿಯಿಂದ ಭಾನುವಾರ ರಾತ್ರಿಯವರೆಗೆ ರಾಜ್ಯದ ಬಳ್ಳಾರಿ, ಕಲಬುರಗಿ, ಶಿವಮೊಗ್ಗ ಹಾಗೂ ಕೋಲಾರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಶನಿವಾರ ರಾತ್ರಿ ಸುರಿದ ಮಳೆಯಿಂದ ಹಳ್ಳ ಉಕ್ಕಿ ಹರಿದಿದ್ದರಿಂದ ಬಳ್ಳಾರಿ ಜಿಲ್ಲೆಯಲ್ಲಿ ತಾತ್ಕಾಲಿಕ ಸೇತುವೆಯೊಂದು (Bridge) ಕೊಚ್ಚಿಹೋಗಿದೆ.ಚಿಂಚೋಳಿ ತಾಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯದ (Tungabhadra dam) ಒಳಹರಿವು  ವಾರದ ನಂತರ ಏರಿಕೆಯಾಗಿದೆ. ‘ಕೆಲವು ದಿನಗಳಿಂದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಒಳ ಹರಿವು ಹೆಚ್ಚಾಗಿದೆ. ಸೋಮವಾರ ಮತ್ತಷ್ಟು ಏರಿಕೆ ಆಗಬಹುದು. ಕೋಲಾರ ಜಿಲ್ಲೆಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ನಾಲ್ಕೈದು ದಿನಗಳಿಂದ ಕ್ಷೀಣಗೊಂಡಿದ್ದ ವಿಜಯಪುರದ ಆಲಮಟ್ಟಿ ಜಲಾಶಯಕ್ಕೆ ಭಾನುವಾರ 4 ಟಿಎಂಸಿ ಅಡಿ ನೀರು ಹರಿದು ಬಂದಿದೆ. .

ಚಿಂಚೋಳಿಯಲ್ಲಿ ಅಪಾರ ಬೆಳೆ ಹಾನಿ(Heavy rainfall affected crop): ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ವಿವಿಧೆಡೆ ತಗ್ಗು ಪ್ರದೇಶದ ಹೊಲಗಳಲ್ಲಿನ ಬೆಳೆಗಳು (crop)ಅತಿವೃಷ್ಟಿಗೆ ತುತ್ತಾದರೆ, ಮುಲ್ಲಾಮಾರಿ ನದಿ (Mullamari river) ಪಾತ್ರದ ಹಳ್ಳಿಗಳ ಜಮೀನಿನಲ್ಲಿ ಪ್ರವಾಹ ರೈತರಿಗೆ ಬರೆ ಹಾಕಿದೆ.

ಪ್ರವಾಹವು ಚಿಮ್ಮನಚೋಡದಿಂದ ಜಟ್ಟೂರುವರೆಗೆ ಸುಮಾರು 25ಕ್ಕೂ ಹೆಚ್ಚು ಗ್ರಾಮಗಳ ಜಮೀನಿನಲ್ಲಿನ ಬೆಳೆ ಹಾಳಾಗಿದೆ.

ಪ್ರಾಥಮಿಕ ಸಮೀಕ್ಷೆಯಂತೆ ಪ್ರವಾಹದಿಂದ 1,500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಜತೆಗೆ ನಿರಂತರ ಮಳೆಯಿಂದ ತಗ್ಗು ಪ್ರದೇಶದ ಹೊಲಗಳಲ್ಲಿ ಬೆಳೆ ಹಾಳಾಗಿರುವ ಸಾಧ್ಯತೆಯಿದೆ.

ಇನ್ನೂ ಉತ್ತರ ಕನ್ನಡ ಸೇರಿದಂತೆ  ಕರಾವಳಿ ಜಿಲ್ಲೆಗಳಲ್ಲಿ ಅಬ್ಬರಿಸುತ್ತಿರುವ ಮಳೆ ಭಾನುವಾರ ಸ್ವಲ್ಪ ಕ್ಷೀಣಿಸಿದೆ. ಧಾರವಾಡ, ಗದಗ ಜಿಲ್ಲೆಯ ಕೆಲವೆಡೆ ಜಿಟಿಜಿಟಿ ಮಳೆಯಾಗಿದೆ.

ಕಾರವಾರ ಕುಂದಾಪುರದಲ್ಲಿ 13 ಸೆಂ.ಮೀ ಮಳೆ (Rain):  24 ಗಂಟೆಗಳಲ್ಲಿ ಕಾರವಾರ ಹಾಗೂ ಕುಂದಾಪುರದಲ್ಲಿ ಗರಿಷ್ಠ 13 ಸೆಂ.ಮೀ ಮಳೆಯಾಗಿದೆ. ಕಾರ್ಕಳ, ಗೋಕರ್ಣ, ಆಗುಂಬೆ 8, ದೊಡ್ಡಬಳ್ಳಾ ಪುರ 6, ಭಟ್ಕಳ, ಭಾಗಮಂಡಲ 5, ಉಪ್ಪಿನಂಗಡಿ, ಮೂಡುಬಿದರೆ, ಕಲಬುರಗಿ, ಜಮಖಂಡಿ 3, ಮಂಗಳೂರು, ಹೊಸನಗರ, ಚಿಕ್ಕಬಳ್ಳಾಪುರ 2, ಪುತ್ತೂರು, ಮಡಿಕೇರಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.