News

ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆ ಸಾಧ್ಯತೆ

19 September, 2020 7:57 AM IST By:

ರಾಜ್ಯದ ಕರಾವಳಿಯೆಡೆಗೆ ನೈರುತ್ಯ ಮುಂಗಾರು ಬಿರುಸುಗೊಂಡಿರುವುದರಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ನಿರೀಕ್ಷೆಯಿದ್ದು, ಸೆ 20 ಮತ್ತು 21 ರಂದು ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಕರಾವಳಿಯೆಡೆಗೆ ನೈರುತ್ಯ ಮುಂಗಾರು ಬಿರುಸುಗೊಂಡಿರುವುದರಿಂದ ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದೇ ರೀತಿ ಮತ್ತೆ ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಈಗಾಗಲೇ ಕರಾವಳಿ ಹಾಗೂ ಉತ್ತರ ಕರ್ನಾಟಕದ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆ ತನ್ನ ಅರ್ಭಟ ಮುಂದುವರೆಸಿದೆ.

ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಗುಡುಗು, ಸಿಡಿಲು ಸಹಿತ ಬಾರಿ ಮಳೆಯಾಗುವ ಸಾಧ್ಯತೆಯಿದೆ.

ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ.

ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮಳೆ ಪ್ರಮಾಣ ಸೆಂ.ಮೀ. ಗಳಲ್ಲಿ:

ಆಗುಂಬೆಯಲ್ಲಿ ಗರಿಷ್ಟ 15 ಸೆಂ. ಮೀ ಮಳೆಯಾಗಿದೆ. ಮಂಗಳೂರು 10, ಕಾರವಾರ, ಭಟ್ಕಳ, ಬೀದರ್ 9, ಕುಂದಾಪುರ, ಕಾರ್ಕಳ 7, ಮೂಡಬಿದರೆ 6, ಮಡಿಕೇರಿ 5, ಅಂಕೋಲಾ, ಸುಳ್ಯ, ಪುತ್ತೂರ, ಕೊಪ್ಪಳ, ಬಾಗಮಂಡಲ 4, ಕೊಪ್ಪ, ತೀರ್ಥಹಳ್ಳಿ 3, ಗಂಗಾವತಿ ಬಾಗಲಕೋಟೆ, ಹೊಸಪೇಟೆ, ಸಕಲೇಶಪುರ 2, ದೇವನಹಳ್ಳಿ, ಹೊಸನಗರ, ಚಳ್ಳಕೆರೆ ಹಾಗೂ ಮೂಡಿಗೆರೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಮಹಾರಾಷ್ಟ್ರ, ಕೇರಳದಲ್ಲಿಯೂ ಭಾರಿ ಮಳೆ ಸಾಧ್ಯತೆ:

 ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಕೇರಳ, ಗೋವಾದ ಹಲವೆಡೆ ಸೆ. 19 ಮತ್ತ್ 20 ರಂದು ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದೇಶದಲ್ಲಿ ಮುಂದಿನವಾರದಿಂದ ಮಳೆಗಾಲ ಇಳಿಮುಖ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ. ಮುಂದಿನ ವಾರದ ಅಂತ್ಯದಲ್ಲಿ ಪಶ್ಚಿಮ ರಾಜಸ್ಥಾನದಿಂದ ನೈಋತ್ಯ ಮಾನ್ಸೂನ್‌ ಇಳಿಮುಖ ಕಾಣಲಿದೆ. ಪ್ರಸಕ್ತ ಮಾನ್ಸೂನ್‌ ಋತುವಿನಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇ.7ರಷ್ಟು ಹೆಚ್ಚು ಮಳೆಯಾಗಿದೆ. ಕರ್ನಾಟಕ, ಆಂಧ್ರ, ತಮಿಳುನಾಡು, ಅಂಡಮಾನ್‌ ಮತ್ತು ನಿಕೋಬಾರ್‌, ಲಕ್ಷದ್ವೀಪಗಳಲ್ಲಿ ಶೇ.28ರಷ್ಟು ಹೆಚ್ಚು ಮಳೆಯಾಗಿದೆ. ರಾಜಸ್ಥಾನ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್‌, ಹರ್ಯಾಣ, ದಿಲ್ಲಿ, ಲಡಾಖ್‌ನಲ್ಲಿ ವಾಡಿಕೆಗಿಂತ ಶೇ.15ರಷ್ಟು ಕಡಿಮೆ ಮಳೆಯಾಗಿದೆ ಎಂದು ಇಲಾಖೆ ಹೇಳಿದೆ.