News

ಜಿಟಿಜಿಟಿ ಮಳೆಗೆ ಹೆಸರು ಉದ್ದು ಬೆಳೆದ ರೈತರು ಕಂಗಾಲು

21 August, 2020 9:46 AM IST By:

ಕಳೆದ ಒಂದು ವಾರದಿಂದ ಕಲ್ಯಾಣ ಕರ್ನಾಟಕ ಭಾಗದ ಆರೂ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಜಿಟಿಜಿಟಿ ಮಳೆ (continuous rain) ಮತ್ತು ದಟ್ಟ ಮೋಡ ಕವಿದ ವಾತಾವರಣದಿಂದ ಹೆಸರು, ಉದ್ದು, ತೊಗರಿ (Green gram, Black gram, Red gram ಬೆಳೆದ ರೈತರ ಬದುಕು ದುಸ್ತರಗೊಂಡಿದೆ.

ಸತತವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಕಟಾವಿಗೆ ಬಂದಿರುವ ಹೆಸರಿನ ಬೆಳೆ ಹೊಲದಲ್ಲಿಯೇ ಮೊಳಕೆ(Sprouted ) ಯೊಡೆಯುತ್ತಿದ್ದು, ರೈತರನ್ನು ಸಂಕಷ್ಟಕ್ಕೆ ದೂಡಿದೆ.ಸಾವಿರಾರು ಹೆಕ್ಟೆರ್ ಪ್ರದೇಶದಲ್ಲಿ ಬೆಳೆದ ಹೆಸರು, ಉದ್ದು, ತೊಗರಿ ಬೆಳೆಗಳು ನೀರು ಪಾಲಾಗುತ್ತಿವೆ. ಹೆಸರು ಮತ್ತು ಉದ್ದು ಹೊಲದಲ್ಲಿಯೇ ಮೊಳಕೆ ಒಡೆಯುತ್ತಿದ್ದರಿಂದ ರೈತರು ರೈತರು ತಲೆಯ ಮೇಲೆ  ಕೈ ಹೊತ್ತು ಕುಳಿತುಕೊಳ್ಳುವಂತಹ ದುಸ್ಥಿತಿಗೆ ತಲುಪಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದ ಪರಿಸ್ಥಿತಿಯಲ್ಲಿದ್ದಾರೆ ರೈತರು.

ಈ ವರ್ಷ ಉತ್ತಮ ಮುಂಗಾರು ಆರಂಭವಾಗಿದ್ದರಿಂದ ಖುಷಿಯಲ್ಲಿದ್ದ ರೈತರು ಅಲ್ಪಾವಧಿ ಬೆಳೆ ಹೆಸರು ಉದ್ದು ಹೆಚ್ಚು ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಫಸಲು ಸಹ ನಳನಳಿಸುತ್ತಿತ್ತು. ಉತ್ತಮ ಮಳೆಯಿಂದಾಗಿ ಹೆಚ್ಚು ಇಳುವರಿ ಪಡೆಯಬೇಕೆಂಬ ರೈತರ ನಿರೀಕ್ಷೆ ಹುಸಿಯಾಗಿದೆ.

ಕಲ್ಯಾಣ ಕರ್ನಾಟಕದ ಕೆಲವೆಡೆ ಹೆಸರು ಬೆಳೆ ಕಟಾವಿಗೆ ಬಂದಿದ್ದು, ರಾಶಿ ಮಾಡುವ ಸಮಯದಲ್ಲಿಯೇ ಜಿಟಿಜಿಟಿ ಮಳೆ ಆರಂಭವಾಗಿದೆ. ಇದರಿಂದಾಗಿ ಹೊಲದಲ್ಲಿಯೇ ಬೆಳೆ ಮೊಳಕೆಯೊಡೆದು ಕೊಳೆಯುತ್ತಿದೆ.ಇದೀ ರೀತಿ ಇನ್ನೊಂದು ವಾರ ಜಿಟಿಜಿಟಿ ಮಳೆಯಾದರೆ ಸಂಪೂರ್ಣ ಬೆಳೆ ಹಾನಿಯಾಗಲಿದೆ.

ಹೆಸರುಪ 40 ದಿನಗಳ ಅಲ್ಪಾವಧಿ ಬೆಳೆಯಾದರೂ ರೈತರು ಇದನ್ನು ಹಣದ ಬೆಳೆಯಾಗಿ ಆರಾಧಿಸುತ್ತಾರೆ. ಮುಂಗಾರು ಹಂಗಾಮಿನ ಆರಂಭದಲ್ಲಿ ಜೇವು ತುಂಬಿಕೊಳ್ಳುವ ಏಕೈಕ ಬೆಳೆ ಹೆಸರು. ಆದರೆ ಕಾಸು ಜೇಬಿಗೆ ಹೋಗುವ ಸಂದರ್ಭದಲ್ಲಿ ಜಿಜಿಟಿಜಿ ಮಳೆ ರೈತರ ಜೇಬನ್ನೇ ಕತ್ತರಿಸಿಬಿಟ್ಟಿದೆ. ರಾಶಿ ಹಂತಕ್ಕೆ ಕಾಲಿಡುವಾಗಲೇ ಜಿಟಿಜಿಟಿ ಮಳೆ ಸುರಿದು ಗಿಡದಲ್ಲೇ ಕಾಳು ಮೊಳಕೆಯೊಡೆಯುವಂತೆ ಮಾಡಿದೆ.

ಕಲಬುರಗಿ ಜಿಲ್ಲೆಯಲ್ಲಿ49,100 ಬಿತ್ತನೆ ಗುರಿಯಿತ್ತಾದರೂ ಬಿತ್ತನೆಯಾಗಿದ್ದು 63,707 ಹೆಕ್ಟೆರ್. ಆದರೆ ಅರ್ಧಕರ್ಧ ಬೆಳೆ ಜಿಟಿಜಿಟಿ ಮಳೆಯಿಂದ ಹಾನಿಯಾಗಿದೆ.

ನೆಲವು ನಿರಂತರ ತೇವಾಂಶದಿಂದ ಕೂಡಿರುವ ಮತ್ತು ವಾತಾವರಣದಲ್ಲಿ ತಂಪು ಆವರಿಸಿರುವ ಕಾರಣ ಸದ್ಯ ಬೆಳವಣಿಗೆ ಹಂತದಲ್ಲಿರುವ ತೊಗರಿ ಹಾಗೂ ಹತ್ತಿ ಬೆಳೆಯ ಎಲೆಗೆ ಹಳದಿ ರೋಗ ಬಾಧಿಸುವ ಸಾಧ್ಯತೆ ಇದೆ. ಈ ಎರಡೂ ಸಸಿಗಳ ಬೇರು ಚಟುವಟಿಕೆಗಳು ನಿಷ್ಕ್ರಿಯಗೊಳ್ಳುತ್ತವೆ. ಸೂರ್ಯ ಕಿರಣಗಳು ಬೀಳದ ಕಾರಣ, ಬುಡದಿಂದಲೇ ಹಳದಿ ರೋಗ ಶುರುವಾಗುತ್ತದೆ. ಹೊಲಗಳು ಕೂಡ ಸತ್ವ ಕಳೆದುಕೊಳ್ಳುತ್ತವೆ.

ಚಳಿ ಹೆಚ್ಚಾದರೆ ಇನ್ನೂ ಕಷ್ಟ: ವಾಡಿಕೆ ಪ್ರಕಾರ, ಆಗಸ್ಟ್‌ ಕೊನೆಯ ವಾರ ಮತ್ತು ಸೆಪ್ಟೆಂಬರ್‌ ಮೊದಲ ವಾರದಲ್ಲಿ ಚಳಿ ಹೆಚ್ಚಾಗುತ್ತದೆ. ಈ ಬಾರಿ ಕೂಡ ಹೆಚ್ಚು ಚಳಿ ಬಿಡುವ ಸಾಧ್ಯತೆ ಇದೆ. ಈಗಾಗಲೇ ಜವುಗು ಹಿಡಿದ ಭೂಮಿ ಹಾಗೂ ಬೆಳೆಗಳಿಗೆ ಇದು ಇನ್ನಷ್ಟು ಮಾರಕವಾಗಬಹುದು. ಆದ್ದರಿಂದ ಬಿಸಿಲು ಬಿದ್ದ ತಕ್ಷಣಕ್ಕೆ ರೈತರು ಪರಿಹಾರೋಪಾಯ ಕಂಡುಕೊಳ್ಳಬೇಕು ಎಂಬುದು ವಿಜ್ಞಾನಿಗಳ ಸಲಹೆಯಾಗಿದೆ.