News

ಗರೀಬ್ ಕಲ್ಯಾಣ್ ಅನ್ನ ಯೋಜನೆ :ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ

30 November, 2023 11:38 AM IST By: Maltesh

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆʼ(ಪಿಎಂಜಿಕೆಎವೈ) ಅಡಿಯಲ್ಲಿ ಸುಮಾರು 81.35 ಕೋಟಿ ಫಲಾನುಭವಿಗಳಿಗೆ 2024ರ ಜನವರಿ 1 ರಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲು ನಿರ್ಧರಿಸಿದೆ.

ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು, 5 ವರ್ಷಗಳ ಅವಧಿಯಲ್ಲಿ 11.80 ಲಕ್ಷ ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 81.35 ಕೋಟಿ ಜನರಿಗೆ ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ಸಾಮಾಜಿಕ ಕಲ್ಯಾಣ ಯೋಜನೆಯಾಗಿ ʻಪಿಎಂಜಿಕೆಎವೈʼ ಹೊರಹೊಮ್ಮಿದೆ.

ಈ ನಿರ್ಧಾರವು ದೇಶದ ಜನರ ಮೂಲಭೂತ ಆಹಾರ ಮತ್ತು ಪೌಷ್ಠಿಕಾಂಶದ ಅವಶ್ಯಕತೆಗಳನ್ನು ಪೂರೈಸುವ ಮೂಲಕ, ದಕ್ಷ ರೀತಿಯಲ್ಲಿ ಉದ್ದೇಶಿತ ಫಲಾನುಭವಿಗಳ ಕಲ್ಯಾಣವನ್ನು ಸಾಧಿಸುವ ನಿಟ್ಟಿನಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ʻಅಮೃತ್ ಕಾಲʼದ ಈ ಸಮಯದಲ್ಲಿ ಇಷ್ಟು ಪ್ರಮಾಣದಲ್ಲಿ ಆಹಾರ ಭದ್ರತೆಯನ್ನು ಖಾತರಿಪಡಿಸುವ ನಡೆಯು, ಮಹತ್ವಾಕಾಂಕ್ಷೆಯ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಒಂದು ಸಮರ್ಪಿತ ಪ್ರಯತ್ನವಾಗಿ ಪ್ರಮುಖ ಪಾತ್ರ ವಹಿಸುತ್ತದೆ.

1.1.2024 ರಿಂದ 5 ವರ್ಷಗಳವರೆಗೆ ʻಪಿಎಂಜಿಕೆಎವೈʼ ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳ ವಿತರಣೆಯು (ಅಕ್ಕಿ, ಗೋಧಿ ಮತ್ತು ಧಾನ್ಯಗಳು / ಸಿರಿಧಾನ್ಯಗಳು) ಆಹಾರ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ದೇಶದ ಬಡ ಮತ್ತು ದುರ್ಬಲ ವರ್ಗಗಳ ಆರ್ಥಿಕ ಸಂಕಷ್ಟವನ್ನು ತಗ್ಗಿಸುತ್ತದೆ. ಇದರ ಭಾಗವಾಗಿ, ಸಾಮಾನ್ಯ ಲಾಂಛನದ ಅಡಿಯಲ್ಲಿ 5 ಲಕ್ಷಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳ ಜಾಲದ ಮೂಲಕ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಹಾರ ಧಾನ್ಯಗಳನ್ನು ಉಚಿತವಾಗಿ ತಲುಪಿಸಲಾಗುವುದು. ಈ ನಡೆಯು ಆಹಾರ ಧಾನ್ಯಗಳ ವಿತರಣೆಯಲ್ಲಿ ರಾಷ್ಟ್ರವ್ಯಾಪಿ ಏಕರೂಪತೆಯನ್ನು ಮೂಡಿಸಲಿದೆ.

ಒಂದು ದೇಶ, ಒಂದು ಪಡಿತರ ಚೀಟಿʼ(ಒಎನ್‌ಒಆರ್‌ಸಿ) ಉಪಕ್ರಮದ ಅಡಿಯಲ್ಲಿ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಫಲಾನುಭವಿಗಳು ಉಚಿತವಾಗಿ ಆಹಾರ ಧಾನ್ಯಗಳನ್ನು ಪಡೆಯಲು ಸಾಧ್ಯವಾಗಲಿದ್ದು, ಇದು ಇದು ಜನರ ಜೀವನವನ್ನು ಸುಗಮಗೊಳಿಸುತ್ತದೆ. ಈ ಉಪಕ್ರಮವು ವಲಸಿಗರಿಗೆ ಅಪಾರ ಪ್ರಯೋಜನವನ್ನು ಒದಗಿಸುತ್ತದೆ. 

ʻಡಿಜಿಟಲ್ ಇಂಡಿಯಾʼ ಅಡಿಯಲ್ಲಿ ತಂತ್ರಜ್ಞಾನ ಆಧಾರಿತ ಸುಧಾರಣೆಗಳ ಭಾಗವಾಗಿ ಫಲಾನುಭವಿಗಳು ಯಾವುದೇ ರಾಜ್ಯ ಒಳಗೆ ಮತ್ತು ಅಂತರ-ರಾಜ್ಯ ಮಟ್ಟದಲ್ಲಿ ಎಲ್ಲಿ ಬೇಕಾದರೂ ಆಹಾರ ಧಾನ್ಯಗಳನ್ನು ಪಡೆಯಲು (ಪೋರ್ಟಬಿಲಿಟಿ) ಅನುವು ಮಾಡಿಕೊಡುತ್ತದೆ. ಇದೇ ವೇಳೆ, ಉಚಿತ ಆಹಾರ ಧಾನ್ಯಗಳ ಯೋಜನೆಯು ದೇಶಾದ್ಯಂತ ʻಒಂದು ದೇಶ, ಒಂದು ಪಡಿತರ ಚೀಟಿʼ(ಒಎನ್ಒಆರ್‌ಸಿ) ಅಡಿಯಲ್ಲಿ ಪೋರ್ಟಬಿಲಿಟಿಯ ಏಕರೂಪದ ಅನುಷ್ಠಾನವನ್ನು ಖಾತರಿಪಡಿಸುತ್ತದೆ. ಈ ಆಯ್ಕೆ ಆಧಾರಿತ ವೇದಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ.

ʻಪಿಎಂಜಿಕೆಎವೈʼ ಅಡಿಯಲ್ಲಿ ಐದು ವರ್ಷಗಳ ಅವಧಿಗೆ ಆಹಾರ ಧಾನ್ಯಗಳ ವಿತರಣೆಗೆ ಅಂದಾಜು 11.80 ಲಕ್ಷ ಕೋಟಿ ರೂ. ಆಹಾರ ಸಬ್ಸಿಡಿ ಬೇಕಾಗಲಿದೆ. ಹೀಗಾಗಿ, ಉದ್ದೇಶಿತ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲು ʻಪಿಎಂಜಿಕೆಎವೈʼ ಅಡಿಯಲ್ಲಿ ಆಹಾರ ಸಬ್ಸಿಡಿಯಾಗಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಕೇಂದ್ರವು ಅಂದಾಜು 11.80 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಿದೆ