News

ಮೇ, ಜೂನ್ ತಿಂಗಳಲ್ಲಿ ಬಿಪಿಎಲ್ ಪಡಿತರದಾರರಿಗೆ 5 ಕೆಜಿ ಉಚಿತ ಅಕ್ಕಿ-80 ಕೋಟಿ ಭಾರತೀಯರಿಗೆ ಅನುಕೂಲ

05 May, 2021 9:39 PM IST By:

ಕೊರೊನಾ ಸಂಕಷ್ಟದ ಕಾರಣ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಹೆಚ್ಚುವರಿಯಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಬಿಪಿಎಲ್ ಪಡಿತರದಾರರಿಗೆ ತಲಾ 5 ಕೆಜಿ ಅಕ್ಕಿ ಉಚಿತವಾಗಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿತು. ಇದರಿಂದ 80 ಕೋಟಿ ಭಾರತೀಯರಿಗೆ ಅನುಕೂಲವಾಗಲಿದೆ.

ಕೊರೋನದ ಎರಡನೇ ಅಲೆಯಿಂದ ತತ್ತರಿಸಿ ಹೋಗಿರುವ ದೇಶದ ಬಡ ಜನತೆಗೆ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸರ್ಕಾರ ಭಾರಿ  ಪರಿಹಾರ ಒದಗಿಸಿದೆ.

ಹೌದು, ಮೇ ಮತ್ತು ಜೂನ್ ತಿಂಗಳಲ್ಲಿ ದೇಶದ 80 ಕೋಟಿ ಬಡವರಿಗೆ ಪ್ರತಿ ವ್ಯಕ್ತಿಗೆ 5 ಕೆಜಿ ಪಡಿತರವನ್ನು ಉಚಿತವಾಗಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 79.88 ಕೋಟಿ ಬಡವರಿಗೆ ಈ ಸೌಲಭ್ಯವನ್ನು ಒದಗಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ. ಈ ಯೋಜನೆಯಡಿ ರಾಜ್ಯಗಳಿಗೆ ಎಷ್ಟು ಗೋಧಿ ಮತ್ತು ಅಕ್ಕಿ ಹಂಚಿಕೆ ಮಾಡಲಾಗುವುದು ಎಂಬುದಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯಿಂದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. ಇದಲ್ಲದೆ ಈ ಯೋಜನೆಯನ್ನು ಮುಂದುವರೆಸುವ ನಿರ್ಧಾರ ಕೂಡ ಇಲಾಖೆಯಿಂದಲೇ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.
ಸ್ಥಳೀಯವಾಗಿ ಜಾರಿ ಆಗ್ತಿರುವ ಲಾಕ್‍ಡೌನ್ ಪರಿಸ್ಥಿತಿ, ಮಳೆ ಇನ್ನಿತರೆ ಅಂಶಗಳನ್ನು ಪರಿಗಣಿಸಿ ಎರಡು ತಿಂಗಳು ಉಚಿತ ಆಹಾರ ಧಾನ್ಯ ನೀಡಲು ಕೇಂದ್ರ ತೀರ್ಮಾನಿಸಿದೆ.

ದೇಶದಲ್ಲಿ ಕೊರೊನಾ ಸೋಂಕು ಮಿತಿಮೀರಿದ್ದರೂ ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ಈ ನಿರ್ಧಾರವನ್ನು ಆಯಾ ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.

ದೇಶದಲ್ಲಿ ಅಬ್ಬರಿಸುತ್ತಿರುವ ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ತಜ್ಞರು ಸೇರಿದಂತೆ ಸುಪ್ರೀಂಕೋರ್ಟ್ ಕೂಡ ಸೂಚಿಸಿತ್ತು.‌ಆದರೆ ಸಂಪೂರ್ಣ ಲಾಕ್ ಡೌನ್ ಗೆ ನರೇಂದ್ರ ಮೋದಿ ಸಹಮತ ವ್ಯಕ್ತಪಡಿಸಿಲ್ಲ.
ಇಂದಿನ ಮೋದಿ ಸಂಪುಟ ಸಭೆಯಲ್ಲಿ ಲಾಕ್‍ಡೌನ್ ಬಗ್ಗೆ ನಿರ್ಣಯ ತೆಗೆದುಕೊಳ್ಳಬಹುದು ಎಂಬ ಸುದ್ದಿ ಹರಡಿತ್ತು. ಆದರೆ ಮೋದಿ ಸರ್ಕಾರ ಇಡೀ ದೇಶದಲ್ಲಿ ಸಂಪೂರ್ಣ ಲಾಕ್‍ಡೌನ್‍ಗೆ ಮನಸ್ಸು ಮಾಡಿಲ್ಲ. ಕಾದು ನೊಡುವ ತಂತ್ರಕ್ಕೆ ಮೊರೆಹೋಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಲಾಕ್‍ಡೌನ್ ಮಾಡುವ ನಿರ್ಧಾರ ತೆಗೆದುಕೊಳ್ಳುವ ನಿರ್ಣಯವನ್ನು ಸಂಬಂಧಪಟ್ಟ ರಾಜ್ಯಗಳಿಗೆ ಮೋದಿ ಸರ್ಕಾರ ನೀಡಿದೆ.