News

ಇಂದಿನಿಂದ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ-ರೆಡ್ ಅಲರ್ಟ್ ಘೋಷಣೆ, ಕಲಬುರಗಿ ಜಿಲ್ಲೆಯಲ್ಲಿ ಹೈ ಅಲರ್ಟ್

10 July, 2021 9:08 AM IST By:

ರಾಜ್ಯದಲ್ಲಿ ಈಗಾಗಲೇ ಮುಂಗಾರು ಚುರುಕುಗೊಂಡಿದ್ದು, ಶುಕ್ರವಾರ ಸಾಯಂಕಾಲ  ಕಲಬುರಗಿ ಜಿಲ್ಲೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಭರ್ಜರಿ ಮಳೆಯಾಗಿದ್ದರಿಂದ ಕಲಬುರಗಿ ನಗರದ ಮುಖ್ಯ ರಸ್ತೆಗಳು ಕೆರೆಯಂತಾಗಿತ್ತು. ಕಲಬುರಗಿ ನಗರ ಸೇರಿದಂತೆ ಶಹಾಬಾದ್, ಕಾಳಗಿ, ಅಫಜಲ್ಪುರ ಸೇರಿದಂತೆ ಇನ್ನಿತರ ತಾಲೂಕಿನಲ್ಲಿಯೂ ರಭಸದ ಮಳೆಯಾಗಿದೆ.

ಕರಾವಳಿ ಹಾಗೂ ಒಳನಾಡಿನ ಹಲವು  ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜುಲೈ 11 ರಿಂದ 13ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಉತ್ತರಕನ್ನಡ, ದಕ್ಷಿಣಕನ್ನಡ, ಕೊಡಗು,  ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ. ಗರಿಷ್ಠ 60 ಕಿ.ಮೀ. ವೇಗದಲ್ಲಿ ಗಾಳಿ ಬಿಸುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ಎಛ್ಚರಿಕೆ ನೀಡಲಾಗಿದೆ.

ಕಲಬುರಗಿ, ಯಾದಗಿರಿ, ವಿಜಯಪುರ, ಬೀದರ್, ಬಾಗಲಕೋಟೆ, ಧಾರವಾಡ, ಗದಗ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಿಡಿಲು ಸಹಿತಿ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಜುಲೈ 13ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಲಬುರಗಿ ಜಿಲ್ಲಾದ್ಯಂತ ಜುಲೈ 15ರವರೆಗೆ ಭಾರಿ ಮಳಯಾಗುವ ಮುನ್ನೂಚನೆ ಇರುವುದರಿಂದ ಈ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಗಂಡೋರಿನಾಲಾ ಯೋಜನೆಯ ಜಲಾಶಯದಿಂದ, ಕೆಳದಂಡೆ ಮುಲ್ಲಾಮಾನರಿ ಅಣೆಕಟ್ಟನಿಂದ ಹಾಗೂ ಅಮರ್ಜಾ ಡ್ಯಾಂನಿಂದ ಹೆಚ್ಚಿನ ಒಳಹರಿವು ಬಂದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಅಣೆಕಟ್ಟಿನ ಸುರಕ್ಷತೆಯ ಮತ್ತು ಪ್ರವಾಹ ನಿಯಂತ್ರಣಕ್ಕಾಗಿ ನದಿಗೆ ನೀರನ್ನು ಬಿಡಲಾಗುವುದು.

ನದಿ ಪ್ರವಾಹದೇಂದ ನದಿ ಪಾತ್ರದ ಗ್ರಾಮದ ಜನರು ನದಿಗೆ ಇಳಿಯಬಾರದು. ದನಕರುಗಳಿಗೆ ನೀರು ಕುಡಿಸಲು ಹಾಗೂ ನದಿಯಲ್ಲಿ ಇಳಿದು ಬಟ್ಟೆ ತೊಳೆಯಲು ಇಳಿಯಬಾರದು. ಹಾಗೂ ಇಜಲು ಹೋಗಬಾರದೆಂದು  ಎಚ್ಚರಿಕೆ ನೀಡಲಾಗಿದೆ.

ಭಾರಿ ಮಳೆ ಸಂಭವ: ಸಹಾಯವಾಣಿ ಕೇಂದ್ರ ಸ್ಥಾಪನೆ

ಕಲಬುರಗಿ ಜಿಲ್ಲೆಯಾದ್ಯಂತ ಇದೇ ಜುಲೈ 15 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿದ್ದು, ಈ ಪ್ರವಾಹ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಸಾರ್ವಜನಿಕರು ಹಾಗೂ ಬಾದಿತ ವ್ಯಕ್ತಿಗಳು ಏನಾದರು ಸಮಸ್ಯೆ ಕಂಡುಬಂದಲ್ಲಿ ತುರ್ತಾಗಿ ಸಹಾಯವಾಣಿ ಕೇಂದ್ರಗಳ 7411896431, 7411896432 ಹಾಗೂ 7411896433 ಸಂಖ್ಯೆಗಳಿಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಎಂದು ಕಲಬುರಗಿ ಜಿಲ್ಲಾಧಿಕಾರಿಗಳು ವಿ.ವಿ. ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.

ಅದೇ ರೀತಿ ನೀರಿನ ಒಳ ಹರಿವಿನ ರಭಸದಿಂದ ಭೀಮಾ ನದಿಯ ತೀರದ ಹಾಗೂ ಸನ್ನತಿ ಗ್ರಾಮದ ಬ್ರಿಡ್ಜ್-ಕಂ-ಬ್ಯಾರೇಜ್, ಬೆಣ್ಣೆತೋರಾ ಜಲಾಶಯ ಮತ್ತು ಕೆಳದಂಡೆ ಮುಲ್ಲಾಮಾರಿ ಜಲಾಶಯದ ಅಕ್ಕಪಕ್ಕದ ಗ್ರಾಮಗಳ ಜನರು ಹಾಗೂ ಜಾನುವಾರುಗಳ ಜೀವಕ್ಕೆ ಧಕ್ಕೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ನದಿ ದಂಡಗಳಲ್ಲಿ ವಾಸಿಸುತ್ತಿರುವ ಗ್ರಾಮಸ್ಥರು ಮತ್ತು ಸಾರ್ವಜನಿಕರು ಹಳ್ಳ, ನಾಲೆ, ನದಿ ಕಡೆ ಹೋಗದಂತೆ ಹಾಗೂ ಜಾನುವಾರುಗಳನ್ನು ನದಿ ತೀರದಲ್ಲಿ ಬಿಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.